ವಿದ್ಯಾರ್ಥಿಗಳಿಗೆ ‘ಪುಸ್ತಕದ ಜ್ಞಾನ’ ಮಾತ್ರ ಸಿಗುತ್ತಿತ್ತು, ಇನ್ನು ಅದು ಬದಲಾಗುತ್ತದೆ: ಪ್ರಧಾನಿ ಮೋದಿ

Update: 2023-05-12 16:47 GMT

ಗಾಂಧಿನಗರ, ಮೇ 12: ಮೊದಲು ವಿದ್ಯಾರ್ಥಿಗಳಿಗೆ ‘‘ಪುಸ್ತಕದ ಜ್ಞಾನ’’ ಮಾತ್ರ ಸಿಗುತ್ತಿತ್ತು, ಆದರೆ ನೂತನ ಶಿಕ್ಷಣ ನೀತಿಯು ಅದನ್ನು ಬದಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಗುಜರಾತ್ ನಲ್ಲಿ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ 29ನೇ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದ ಮಾತನಾಡಿದ ಮೋದಿ, ಗೂಗಲ್ ಅಂಕಿಅಂಶಗಳು ಮತ್ತು ಮಾಹಿತಿಯನ್ನು ನೀಡಬಹುದು, ಆದರೆ ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗದರ್ಶಕರ ಪಾತ್ರವನ್ನು ವಹಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

‘‘ಮೊದಲು, ನಾವು ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನವನ್ನು ಮಾತ್ರ ಕೊಡುತ್ತಿದ್ದೆವು. ಆದರೆ, ನೂತನ ಶಿಕ್ಷಣ ನೀತಿಯ ಜಾರಿಯ ಬಳಿಕ ಇದು ಬದಲಾಗುತ್ತದೆ’’ ಎಂದು ಮೋದಿ ಹೇಳಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಅವರ ಮಾತೃಭಾಷೆಯಲ್ಲಿ ನೀಡುವ ಅಗತ್ಯವನ್ನು ಪ್ರತಿಪಾದಿಸಿದ ಮೋದಿ, ನೂತನ ಶಿಕ್ಷಣ ನೀತಿಯಲ್ಲಿ ಇದಕ್ಕೆ ಅವಕಾಶವಿದೆ ಎಂದರು.

‘‘ನಾನು ನನ್ನ ಬದುಕಿನಲ್ಲಿ ಯಾವತ್ತೂ ಶಿಕ್ಷಕನಾಗಿಲ್ಲ, ಆದರೆ, ಜೀವನಪರ್ಯಂತ ವಿದ್ಯಾರ್ಥಿಯಾಗಿದ್ದೇನೆ ಹಾಗೂ ಸಾಮಾಜಿಕ ವಿಷಯಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದೇನೆ’’ ಎಂದು ಅವರು ಹೇಳಿದರು.

ವಿಶ್ವ ನಾಯಕರನ್ನು ಭೇಟಿಯಾದ ವೇಳೆ, ತಮ್ಮ ಶಿಕ್ಷಕರು ಭಾರತೀಯರು ಎಂಬುದಾಗಿ ಹಲವರು ನನ್ನಲ್ಲಿ ಹೇಳಿದ್ದಾರೆ ಎಂದು ಅವರು ನುಡಿದರು.

Similar News