ಮಾನಹಾನಿ ಪ್ರಕರಣ: ಕೇಜ್ರಿವಾಲ್ಗೆ ಹೊಸ ಸಮನ್ಸ್
ಅಹ್ಮದಾಬಾದ್, ಮೇ 24: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಗುಜರಾತ್ ವಿಶ್ವವಿದ್ಯಾನಿಲಯ ಸಲ್ಲಿಸಿರುವ ಕ್ರಿಮಿನಲ್ ಮಾನ ಹಾನಿ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸಂಸದ ಸಂಜಯ್ ಸಿಂಗ್ಗೆ ಜೂನ್ 7ರಂದು ಹಾಜರಾಗುವಂತೆ ಮಂಗಳವಾರ ಹೊಸ ಸಮನ್ಸ್ ಜಾರಿ ಮಾಡಿದೆ.
ಮೇ 23ರಂದು ಹಾಜರಾಗುವಂತೆ ನೀಡಿದ ಸಮನ್ಸ್ ಅನ್ನು ಅವರಿಬ್ಬರೂ ಸ್ವೀಕರಿಸಿದಂತೆ ಕಾಣತ್ತಿಲ್ಲ. ಆದುದರಿಂದಲೇ ಅವರು ಹಾಜರಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಎಸ್.ಜೆ. ಪಂಚಾಲ್ ಅವರ ನ್ಯಾಯಾಲಯ ಈ ಸಮನ್ಸ್ ನೀಡಿದೆ. ‘‘ಮೇ 23ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆರೋಪಿಗಳಾದ ಕೇಜ್ರಿವಾಲ್ ಹಾಗೂ ಸಿಂಗ್ಗೆ ನ್ಯಾಯಾಲಯ ಎಪ್ರಿಲ್ 15ರಂದು ಆದೇಶಿಸಿತ್ತು.
ಮಂಗಳವಾರ ವಿಚಾರಣೆ ನಿಗದಿಪಡಿಸಲಾಗಿತ್ತು. ಆದರೆ, ಸಮನ್ಸ್ನಲ್ಲಿ ಸ್ಪಷ್ಟತೆಯ ಕೊರತೆ ಕಂಡು ಬಂದಿದೆ. ಆದುದರಿಂದ ಆರೋಪಿಗಳು ಹೊಸ ಸಮನ್ಸ್ ಹಾಗೂ ದೂರಿನ ಪ್ರತಿ ಸ್ವೀಕರಿಸಬೇಕು ಎಂದು ನ್ಯಾಯಮೂರ್ತಿ ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಜೂನ್ 7ರಂದು ನಡೆಯಲಿದೆ’’ ಎಂದು ದೂರುದಾರರ ಪರ ವಕೀಲ ಅಮಿತ್ ನಾಯಕ್ ತಿಳಿಸಿದ್ದಾರೆ.