ಕಪ್ಪು ಹಣ ಬಿಳುಪು ಪ್ರಕರಣ: ಸಚಿವ ಸೆಂಥಿಲ್ ಗೆ ಹಿನ್ನಡೆ
ಚೆನ್ನೈ: ಕಪ್ಪುಹಣ ಬಿಳುಪುಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ 15 ದಿನಗಳ ರಿಮಾಂಡ್ ವಿಧಿಸಿರುವುದನ್ನು ರದ್ದುಪಡಿಸಬೇಕೆಂದು ಕೋರಿ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಸಲ್ಲಿಸಿರುವ ಅರ್ಜಿಯನ್ನು ಇಲ್ಲಿನ ಪ್ರಧಾನ ಸೆಶನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಸೆಂಥಿಲ್ ಬಾಲಾಜಿ ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಬೇಕೆಂಬ ಜಾರಿ ನಿರ್ದೇಶನಾಲಯ ಅರ್ಜಿಯ ಕುರಿತ ವಾದಪ್ರತಿವಾದಗಳನ್ನು ನ್ಯಾಯಾಧೀಶರು ಇನ್ನಷ್ಟೇ ವಿಚಾರಣೆಗೆ ಸ್ವೀಕರಿಸಬೇಕಾಗಿದೆ.
ಕಪ್ಪುಹಣ ಬಿಳುಪುಗೊಳಿಸಿದ ಆರೋಪಕ್ಕೆ ಸಂಬಂಧಿಸಿ ಸೆಂಥಿಲ್ ಬಾಲಾಜಿ ಅವರನ್ನು ಸೆಶನ್ಸ್ ನ್ಯಾಯಾಲಯವು ಜೂನ್ 28ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು. ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣದಲ್ಲಿ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯವು ಬುಧವಾರ ಮುಂಜಾನೆ ಬಂಧಿಸಿತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ತನಗೆ ಎದೆನೋವಾಗುತ್ತಿದೆಯೆಂದು ಹೇಳಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.