ಡೆಂಗ್ಯೂ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಸಾಧನಗಳ ಅಳವಡಿಕೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Update: 2024-08-26 08:53 GMT

ಬೆಂಗಳೂರು: ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವ ಈಡಿಸ್ ಸೊಳ್ಳೆಗಳಿಗೆ ಖೆಡ್ಡ ತೋಡಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಸೊಳ್ಳೆಗಳನ್ನ ಆಕರ್ಷಿಸಿ ನಾಶಪಡಿಸುವ ಓವಿ ಟ್ರ್ಯಾಪ್‌ ಸಾಧನಗಳನ್ನ ಬೆಂಗಳೂರಿನ ಗೋಪಾಲಪುರದಲ್ಲಿ ಅಳವಡಿಸಲಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಯೋಗಿಕವಾಗಿ ಬೆಂಗಳೂರಿನ ಗೋಪಾಲಪುರದಲ್ಲಿ 120 ಓವಿ ಟ್ರ್ಯಾಪ್ ಸಾಧನಗಳನ್ನ ಮನೆ ಮನೆಗಳಿಗೆ ಅಳವಡಿಸಲಾಗಿದೆ. ಓವಿ ಟ್ರ್ಯಾಪ್ ಬಯೋ ಸಾಧನವಾಗಿದ್ದು, ಈಡಿಸ್ ಸೊಳ್ಳೆಗಳನ್ನ ಆಕರ್ಷಿಸಿ ನಾಶಪಡಿಸುತ್ತದೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸೊಳ್ಳೆಗಳು ಹೆಚ್ಚಿರೋ ಕಡೆ ಈ ಸಾಧನ ಅಳವಡಿಸುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಿವೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈಡಿಸ್ ಸೊಳ್ಳೆಗಳನ್ನ ನಾಶಪಡಿಸುವ ಬಯೋ ಸಾಧನಗಳನ್ನ ಪ್ರಾಯೋಗಿಕವಾಗಿ ಬಳಕೆ ಮಾಡುತ್ತಿದ್ದೇವೆ.. ಓವಿ ಟ್ರ್ಯಾಪ್ ಸಾಧನಗಳಿಂದ ಈಡಿಸ್ ಸೊಳ್ಳೆಗಳ ನಿಯಂತ್ರಣ ಚೆನ್ನಾಗಿ ಆದರೆ ಡೆಂಗ್ಯೂ, ಮಲೇರಿಯಾ, ಝೀಕಾದಂತಹ ಸಾಂಕ್ರಾಂಮಿಕ ರೋಗಗಳನ್ನೂ ಕಂಟ್ರೋಲ್​ ಗೆ ತರಬಹುದು. ಮುಂಬೈನ ಧಾರವಿ ಕೊಳಗೇರಿ ಪ್ರದೇಶದಲ್ಲೂ ಈ ಪ್ರಯೋಗ ನಡೀತಿದೆ. ಅದೇ ರೀತಿ ಬೆಂಗಳೂರಿನಲ್ಲೂ ಪ್ರಯೋಗ ಆರಂಭಿಸಲಾಗಿದೆ. ಉತ್ತಮ ಫಲಿತಾಂಶ ದೊರೆತರೆ ರಾಜ್ಯದಾದ್ಯಂತ ಓವಿ ಟ್ರ್ಯಾಪ್ ಸಾಧನಗಳನ್ನ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಏನಿದು ಬಯೋ ಟ್ರ್ಯಾಪ್ ಸಾಧನ?

ಇದೊಂದು ಮಡಿಕೆ ಆಕಾರದ ಸಾಧನವಾಗಿದೆ. ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಬೆರಸಲಾಗುತ್ತದೆ. ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನ ಆಕರ್ಷಿಸಿ ಸಾಯಿಸುತ್ತೆ. ಈಡಿಸ್ ಸೊಳ್ಳೆಗಳು ಹಾಗೂ ಸೊಳ್ಳೆಗಳ ಮೊಟ್ಟೆಗಳನ್ನ ನಾಶಪಡಿಸುತ್ತದೆ. ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ರಷ್ಟು ಸೊಳ್ಳೆಗಳ ನಿಯಂತ್ರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News