ಬೆಂಗಳೂರು | ಹೆಬ್ಬಾಳ ಮೇಲ್ಸೆತುವೆ ಕಾಮಗಾರಿ : ಕೆ.ಆರ್.ಪುರ ಮಾರ್ಗದಲ್ಲಿ ಎ.17ರಿಂದ ಸಂಚಾರ ನಿರ್ಬಂಧ

Update: 2024-04-16 12:17 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‍ಗಳನ್ನು ಸೇರಿಸಲು ಬಿಡಿಎ ಕಾಮಗಾರಿ ಆರಂಭಿಸಿರುವುದರಿಂದ ಕೆ.ಆರ್.ಪುರ ಅಪ್-ರ್ಯಾಂಪ್ ಅನ್ನು ಎ.17ರಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಆರಂಭಿಸಿದ್ದು, ಎರಡು ಹೊಸ ಟ್ರ್ಯಾಕ್‍ಗಳನ್ನು ಸೇರಿಸಲಿದೆ. ಕಾಮಗಾರಿ ಹಿನ್ನೆಲೆ ಕೆ.ಆರ್.ಪುರ ಲೂಪ್ ಸೇತುವೆ ಮೇಲೆ ವಾಹನ ಸಂಚಾರವನ್ನು ನಾಲ್ಕು ತಿಂಗಳ ಕಾಲ ನಿಷೇಧಿಸಲಾಗಿದೆ.

ಕೆ.ಆರ್.ಪುರಂ, ನಾಗಾವರ ಕಡೆಯಿಂದ ಬಂದು ಮೇಖ್ರಿ ಸರ್ಕಲ್‍ಗೆ ಹೋಗುವ ಅಪ್ ರ್ಯಾಂಪ್ ಮೇಲೆ ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಸಂಚಾರ ಮಾರ್ಪಾಡು: ನಾಗವಾರ (ಹೊರ ವರ್ತುಲ ರಸ್ತೆ) ಕಡೆಯಿಂದ ಬೆಂಗಳೂರಿಗೆ ಮೇಖ್ರಿ ವೃತ್ತದ ಮೂಲಕ ಬರುತ್ತಿದ್ದ ವಾಹನಗಳು ಹೆಬ್ಬಾಳ ಸರ್ಕಲ್‍ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯ ಮೂಲಕ ಹೆಬ್ಬಾಳ ಫ್ಲೈ ಓವರ್ ರ್ಯಾಂಪ್ ಮೂಲಕ ನಗರದ ಕಡೆಗೆ ಚಲಿಸಬಹುದು.

ಇನ್ನು, ಕೆ.ಆರ್.ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ. ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬೇಕು. ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದು.

ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್‍ನಲ್ಲಿ ಬಲತಿರುವು ಪಡೆದು ಐಐಎಸ್ಸಿ ಮೂಲಕ ಚಲಿಸಬಹುದು.

ಕೆ.ಆರ್.ಪುರ, ಹೆಣ್ಣೂರು, ಎಚ್‍ಆರ್‍ಬಿಆರ್ ಲೇಔಟ್, ಕೆಜಿ ಹಳ್ಳಿ, ಬಾಣಸವಾಡಿ ಕಡೆಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಹೋಗುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆ ಬಳಸಿ ವಿಮಾನ ನಿಲ್ದಾಣದ ಕಡೆಗೆ ತೆರಳಬಹುದು ಎಂದು ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News