ಪಾಂಗಾಳ್ರ ಕೃತಿಗಳಲ್ಲಿ ವೈಚಾರಿಕತೆ ಇದೆ : ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ವೈದ್ಯ ಹಾಗೂ ಲೇಖಕ ಆರ್.ಆರ್.ಪಾಂಗಾಳರು ಹೆಚ್ಚು ರಚನಾತ್ಮಕ ಬರಹಗಳನ್ನು ಬರೆದಿದ್ದಾರೆ. ಅವರ ಬರಹಗಳಲ್ಲಿ ತೀವ್ರವಾದ ವೈಚಾರಿಕತೆ ಇರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ತರಳಬಾಳು ಕೇಂದ್ರದಲ್ಲಿನ ಶಿವರಾಮಕಾರಂತ ವೇದಿಕೆಯಲ್ಲಿ ಡಾ.ಚಂದ್ರಶೇಖರ್ ಚಡಗ ಸಂಪಾದಿತ ಆರ್. ಆರ್.ಪಾಂಗಾಳ್ ಬದುಕು ಮತ್ತು ಬರಹ ಕುರಿತ 'ಪಾಂಗಾಳಾ ಡಾಕ್ಟ್ರು' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಂಗಾಳ್ರವರು ಬರೆದಿರುವ ಕೃತಿಗಳಲ್ಲಿ ಹೆಚ್ಚು ಗದ್ಯವೇ ಇದೆ. ಅದರಲ್ಲಿ ಏಳು ಕಾದಂಬರಿ, ಮೂರು ಸಣ್ಣ ಕಥೆಗಳು ಮತ್ತು ಒಂದು ಸಂಕಲನ ಇದೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಆತ್ಮಚರಿತ್ರೆಯನ್ನು ಬರೆಯಬೇಕು ಎಂದು ಹೇಳಿದರು.
ಶಿವರಾಮಕಾರಂತರು ವೈಚಾರಿಕರಾಗಿದ್ದರು. ಅವರು ಹೆಚ್ಚು ಕಾದಂಬರಿಗಳನ್ನು ಬರೆದರೇ ಹೊರೆತು, ಕಾವ್ಯಗಳನ್ನು ಬರೆಯಲಿಲ್ಲ. ಪಾಂಗಾ ಆರು ಕೂಡ ವೈಚಾರಿಕತೆಯ ಪರಿಣಾಮವಾಗಿ ವ್ಯಾಸ ಭಾರತವನ್ನು ಮರು ರಚಿಸುವ ಕೆಲಸ ಮಾಡಿದ್ದಾರೆ. ವ್ಯಾಸ ಭಾರತದ ಮೇಲೆ 900 ಪುಟಗಳನ್ನೊಳಗೊಂಡ ಕೃತಿ ರಚಿಸಿದ್ದಾರೆ. ಅದು ಆಧುನಿಕ ಕಾಲದಲ್ಲಿ ವೈಜ್ಞಾನಿಕವಾಗಿ ನೋಡುವ ಕ್ರಮವಾಗಿದೆ. ಅಂತಹ ಪುಸ್ತಕಗಳು ಅಗತ್ಯವಾಗಿದೆ ಮತ್ತು ಪುಸ್ತಕ ಮಾರುಕಟ್ಟೆಯಲ್ಲಿ ಸಿಗದೇ ಇರುವುದರಿಂದ ಮರುಮುದ್ರಣ ಆಗಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಚಿಂತಕರಾದ ಎಸ್.ಆರ್.ವಿಜಯಶಂಕರ್, ಚಂದ್ರಶೇಖರ ಚಡಗ, ದೀಪಾ ಫಡೈ ಸೇರಿದಂತೆ ಹಲವರು ಭಾಗವಹಿಸಿದ್ದರು.