ಎಂಇಐ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳಿಗೆ ಜಮೀನು ಲಭ್ಯ: ಎಂ ಬಿ ಪಾಟೀಲ್

Update: 2024-09-21 07:13 GMT

ಬೆಂಗಳೂರು: ಸರಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಎಂಇಐ) ಸಂಸ್ಥೆಯು ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳನ್ನು ತೆರೆಯಲು ತಲಾ ಒಂದು ಎಕರೆ ಜಮೀನು ಒದಗಿಸುವಂತೆ ಕೋರಿದ್ದು, ಅದನ್ನು ಈಡೇರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಎಂಇಐ ಅಧ್ಯಕ್ಷ ಎಸ್‌.ಮನೋಹರ್‌ ಈ ಸಂಬಂಧ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ʻವಿಜಯಪುರ, ಮೈಸೂರು, ಚಿತ್ರದುರ್ಗ, ಮಂಗಳೂರು, ರಾಯಚೂರು, ಬಳ್ಳಾರಿ ಮತ್ತು ಇತರ ಮುಖ್ಯ ಸ್ಥಳಗಳಲ್ಲಿ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯತೆ ನೋಡಿಕೊಂಡು ಜಮೀನು ನೀಡಲಾಗುವುದು. ಇದರಿಂದ ಅಡೆತಡೆ ಇಲ್ಲದ ಮತ್ತು ಗುಣಮಟ್ಟದ ವಿದ್ಯುತ್‌ ವಿತರಣೆಗೆ ಸಹಾಯವಾಗಲಿದೆʼ ಎಂದಿದ್ದಾರೆ.

ಸರಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಈಗಾಗಲೇ ಗುಣಮಟ್ಟದ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರಿಸುತ್ತಿದೆ. ಹಾಗೆಯೇ, ಎಂಇಐ ಉತ್ಕೃಷ್ಟ ದರ್ಜೆಯ 11 ಕೆ.ವಿ. ಸ್ವಿಚ್‌ ಗೇರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಆದರೆ, ನಮ್ಮಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗೆ ವ್ಯವಸ್ಥಿತವಾದ ಜಾಲವಿಲ್ಲ. ಸರಕಾರವು ತನ್ನ ಅಧೀನದ ಉದ್ಯಮ ಸಂಸ್ಥೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದರಂತೆ ಎಂಇಐಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎಂಇಐ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ ಈ ಸಂದರ್ಭದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News