ನೋಡುಗರ ಕಣ್ಮನ ಸೆಳೆದ ‘ಫಲಪುಪ್ಪ ಪ್ರದರ್ಶನ’

Update: 2023-12-11 16:40 GMT

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹ್ಯೂಮ್ ಪಾರ್ಕ್‍ನಲ್ಲಿ ಜಿ.ಪಂ., ಕೃಷಿ, ತೋಟಗಾರಿಕೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಏರ್ಪಡಿಸಿರುವ 64ನೇ ಫಲಪುಷ್ಪ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ವಿವಿಧ ಹೂವುಗಳಿಂದ ತಯಾರಿಸಿದ್ದ ಕಲಾಕೃತಿಗಳು ಎಲ್ಲರ ಗಮನ ಸೆಳೆದವು. ಹೂವಿನಲ್ಲಿ ಅರಳಿದ ಇತಿಹಾಸ ಪ್ರಸಿದ್ಧ ಕಮಲ ಬಸದಿ, ಶಾವಿಗೆಯಲ್ಲಿ ಮೂಡಿದ ಸಿದ್ದೇಶ್ವರ ಸ್ವಾಮೀಜಿ, ಸಿರಿಧಾನ್ಯಗಳಿಂದ ಸಿದ್ಧಪಡಿಸಿರುವ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ, ಮರಳಿನಿಂದ ನಿರ್ಮಿಸಿರುವ ಚಂದ್ರಯಾನ-3, ರಂಗೋಲಿಯಲ್ಲಿ ಬಿಡಿಸಿರುವ ನಾಟ್ಯಭೂಷಣ ಏಣಗಿ ಬಾಳಪ್ಪ, ಗಾನ ಕೋಗಿಲೆ ಗಂಗೂಬಾಯಿ ಹಾನಗಲ್, ವರಕವಿ ದ.ರಾ.ಬೇಂದ್ರೆ, ಕಾಯಕ ಯೋಗಿ ಸಿದ್ಧಗಂಗಾ ಸ್ವಾಮೀಜಿ, ಸರ್ ಎಂ.ವಿಶ್ವೇಶ್ವರಯ್ಯ, ತೋಟಗಾರಿಕಾ ಪಿತಾಮಹ ಎಂ.ಎಚ್.ಮರಿಗೌಡರ ಭಾವಚಿತ್ರಗಳು ಸೇರಿ ಮತ್ತಿತರ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.

ಅಲಂಕಾರಿಕ ಹೂವು ಪ್ರದರ್ಶನ: ಫಲಪುಷ್ಪ ಪ್ರದರ್ಶನದಲ್ಲಿನ ಅಲಂಕಾರಿಕ ಹೂವುಗಳು ಪ್ರದರ್ಶನಕ್ಕೆ ಆಗಮಿಸಿದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರ ಮನಸ್ಸನ್ನು ಮುದಗೊಳಿಸಿತು. ಇಲ್ಲಿನ ಆಹ್ಲಾದಕರ ವಾತಾವರಣ ಸವಿದರು. ಕುಟುಂಬ ಸಮೇತರಾಗಿ ಸೆಲ್ಫಿ ಪೊಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಆರ್ಕಿಡ್ಸ್, ಸಾಲ್ವಿಯಾ, ಪೆಟೂನಿಯಾ, ಜಿರೇನಿಯಂ, ಡಯಾಂತಸ್, ಹೈಪೋಸ್ಟಸ್, ಗುಲಾಬಿ, ಸೇವಂತಿ, ಚೆಂಡು ಹೂವು, ಜರ್ಬೆರಾ, ಅಂಥೂರಿಯಂ ಸೇರಿ 25ಕ್ಕೂ ಹೆಚ್ಚು ಅಲಂಕಾರಿಕ ಹೂವು ಮತ್ತು ಹೂವಿನ ಸಸಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಸಾರ್ವಜನಿಕರಿಂದ ಮೆಚ್ಚುಗೆ: ‘ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಹೂವಿನಲ್ಲಿ ಅರಳಿದ ಕಮಲ ಬಸದಿ ಈ ಬಾರಿಯ ಕೇಂದ್ರ ಬಿಂದುವಾಗಿದೆ. ಮೈಸೂರಿನ ಕಲಾವಿದರಾದ ಗೌರಿ ಅವರಿಂದ ಚಂದ್ರಯಾನ-3 ಮರಳಿನ ಕಲಾಕೃತಿ ಎಲ್ಲರನ್ನು ಆಕರ್ಷಿಸುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News