ಚಿಕ್ಕಮಗಳೂರು | ಜಿಲ್ಲಾದ್ಯಂತ ಮಳೆಗೆ 100 ಕೋಟಿ ರೂ.ಗೂ ಹೆಚ್ಚು ಹಾನಿ : ಡಿಸಿ ಮೀನಾ ನಾಗರಾಜ್

Update: 2024-07-22 14:31 GMT

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಈ ಬಾರಿ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದ್ದು, ಭಾರೀ ಮಳೆ, ಗಾಳಿಗೆ ಜಿಲ್ಲಾದ್ಯಂತ ಒಟ್ಟು 192 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 100ಕೋಟಿ ರೂ. ಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದ ಅವರು, "ಜ.1ರಿಂದ ಜು.22ರವರೆಗೆ ಜಿಲ್ಲೆಯ ವಾಡಿಕೆ ಮಳೆ 887ಮಿಮೀ. ಆಗಿದ್ದು, ಈ ಬಾರಿ 1096ಮಿಮೀ. ಮಳೆಯಾಗಿದೆ. ಶೇ.24ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ 7ದಿನಗಳ ವಾಡಿಕೆ ಮಳೆ 124ಮಿಮೀ. ಆಗಿದ್ದು, ಜಿಲ್ಲಾದ್ಯಂತ 329ಮಿಮೀ. ಮಳೆಯಾಗಿದೆ. ಶೇ.166ರಷ್ಟು ಹೆಚ್ಚುವರಿ ಮಳೆಯಾಗಿದೆ" ಎಂದರು.

ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಮಳೆಯಿಂದಾಗಿ ಕೃಷಿ, ತೋಟಗಾರಿಕೆ ಬೆಳೆಗಳು ಹಾಗೂ ಮನೆಗಳು, ರಸ್ತೆ. ಸೇತುವೆ ಸೇರಿದಂತೆ ಸಾರ್ವಜನಿಕರ ಆಸ್ತಿಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಜಿಲ್ಲೆಯ ಜೂನ್-ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಒಟ್ಟು 192 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 100 ಕೋಟಿ. ರೂ.ನಷ್ಟು ಹಾನಿ ಸಂಭವಿಸಿದೆ ಎಂದು ಹೇಳಿದರು.

192 ಮನೆಗಳ ಪೈಕಿ 122ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದರೆ, 70 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 37 ಮನೆಗಳಿಗೆ ಹಾನಿಯಾಗಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ 45, ಕಡೂರು ತಾಲೂಕಿನಲ್ಲಿ 23, ತರೀಕೆರೆ ತಾಲೂಕಿನಲ್ಲಿ 10, ಅಜ್ಜಂಪುರ ತಾಲೂಕಿನಲ್ಲಿ 9, ಕೊಪ್ಪ ತಾಲೂಕಿನಲ್ಲಿ 17, ಶೃಂಗೇರಿ ತಾಲೂಕಿನಲ್ಲಿ 7, ಎನ್.ಆರ್.ಪುರ ತಾಲೂಕಿನಲ್ಲಿ 22 ಹಾಗೂ ಕಳಸ ತಾಲೂಕಿನಲ್ಲಿ 12 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಪ್ರತೀ ಮನೆಗಳಿಗೆ 1.20ಲಕ್ಷ ರೂ. ಪಾವತಿಸಲಾಗಿದ್ದು, ಒಟ್ಟಾರೆ 70.59ಲಕ್ಷ ರೂ. ಪರಿಹಾರ ನೀಡಲಾಗಿದೆ. 72 ಮನೆಗಳಿಗೆ ಪರಿಹಾರ ನೀಡಲು ಬಾಕಿ ಇದ್ದು, 43 ಅನಧೀಕೃತ ಮನೆಗಳಿಗೆ ಪರಿಹಾರ ನೀಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 4 ಜಾನುವಾರುಗಳು ಮೃತಪಟ್ಟಿದ್ದು, ತಲಾ 37,500 ರೂ. ನಂತೆ ಪರಿಹಾರಧನ ವಿತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ 41 ಸೇತುವೆ ಹಾಗೂ 8ಕಿಮೀ ರಸ್ತೆಗೆ ಹಾನಿಯಾಗಿದ್ದು, ಒಟ್ಟು 56ಕೋಟಿ ರೂ. ಹಾನಿ ಸಂಭವಿಸಿದೆ. ಪಿಆರ್‌ಇಡಿ ಇಲಾಖೆಯ 339 ಕಿಮೀ ರಸ್ತೆ, 27 ಕಿರುಸೇತುವೆಗಳು, 10 ಶಾಲಾ ಕಟ್ಟಡಗಳು ಹಾಗೂ 7 ನೀರಿನ ಟ್ಯಾಂಕ್‍ಗಳಿಗೆ ಹಾನಿಯಾಗಿದ್ದು, ಒಟ್ಟು 48ಕೋಟಿ ರೂ. ಹಾನಿ ಸಂಭವಿಸಿದೆ. ರಸ್ತೆ, ಸೇತುವೆಗಳ ದುರಸ್ತಿಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, 15 ದಿನಗಳೊಳಗೆ ದುರಸ್ತಿ ಕೆಲಸ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಳೆಯಿಂದಾಗಿ ಜಿಲ್ಲಾದ್ಯಂತ 1849 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಈ ಪೈಕಿ 1493 ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ. ವಿದ್ಯುತ್ ಕಂಬಗಳು ಉರುಳಿರುವ ಕೆಲ ಕುಗ್ರಾಮಗಳಲ್ಲಿ ಕಂಬಗಳನ್ನು ಬದಲಾಯಿಸಲು ಸಮಸ್ಯೆ ಇರುವುದರಿಂದ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದರು.

ಜಿಲ್ಲಾದ್ಯಂತ 80 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಅಂದಾಜು 19 ಲಕ್ಷ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಮಣ್ಣು ತೆರವು ಕೆಲಸ ಪೂರ್ಣಗೊಳಿಸಲಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದ ಭಾಗಗಳಲ್ಲಿ ಸಂಪರ್ಕ ಪುನಾರಂಭವಾಗಿದೆ. ಅತೀವೃಷ್ಟಿಯಿಂದಾಗಿ ಹಾನಿ ಸಂಭವಿಸಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿ, ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡೂರು, ಅಜ್ಜಂಪುರ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಪರಿಹಾರ ಕ್ರಮಗಳಿಗಾಗಿ ಕೊಪ್ಪ, ಕಳಸ ತಾಲೂಕಿಗೆ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ 77 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಸದ್ಯ ಇಬ್ಬರು ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದರು.

ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಸದ್ಯ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಹೆದ್ದಾರಿ ಭಾಗದಲ್ಲಿ ತೆರವು ಮಾಡಬೇಕಾದ ಮರಗಳನ್ನು ಗುರುತಿಸಿ ತೆರವು ಕಾರ್ಯ ಮಾಡಲಾಗಿದೆ. ಶೃಂಗೇರಿ-ಮಂಗಳೂರು-ತೀರ್ಥಹಳ್ಳಿ ಹೆದ್ದಾರಿಯಲ್ಲಿ ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡಲಾಗಿದೆ. ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದರು.

ಎಸ್ಪಿ ಡಾ.ವಿಕ್ರಮ್ ಅಮಟೆ, ಜಿಪಂ ಸಿಇಒ ಕೀರ್ತನಾ ಸುದ್ದಿಗೋಷ್ಠಿಯಲ್ಲಿದ್ದರು.

ʼಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ಗಿರಿಭಾಗಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪ್ರವಾಸಿಗರು ಮಳೆ ಕಡಿಮೆಯಾಗುವ ತನಕ ತಮ್ಮ ಪ್ರವಾಸವನ್ನು ಮುಂದೂಡುವಂತೆ ಸೂಚಿಸಲಾಗಿದೆʼ

- ಮೀನಾ ನಾಗರಾಜ್, ಜಿಲ್ಲಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News