ಚಿಕ್ಕಮಗಳೂರು| ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ಹಲವು ಮನೆಗಳಿಗೆ ಹಾನಿ

Update: 2024-07-16 15:12 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಭಾರೀ ಮಳೆಯಾಗಿದ್ದು, ಜಿಲ್ಲಾದ್ಯಂತ ಮಳೆಯ ಅವಾಂತರಗಳು ಹೆಚ್ಚಾಗುತ್ತಿವೆ. ಭದ್ರಾ ನದಿ ತುಂಬಿ ಹರಿದು ಕಳಸ-ಹೊರನಾಡು ಸಂಪರ್ಕ ಸೇತುವೆ ಸೋಮವಾರ ಮುಂಜಾಣೆ ಕಡಿತಗೊಂಡಿತ್ತು. ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ನೆರೆ ಉಂಟಾಗಿ ವಾಹನಗಳ ಪಾರ್ಕಿಂಗ್ ಜಾಗ, ಕಪ್ಪೆ ಶಂಕರ ದೇಗುಲ ಜಲಾವೃತಗೊಂಡಿವೆ. ಕೊಪ್ಪಾ ತಾಲೂಕಿನ ಜಯಪುರ-ಕೊಪ್ಪ ಸಂಪರ್ಕ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದರೆ, ಇದೇ ತಾಲೂಕಿನಲ್ಲಿ ಕಿರುಸೇತುವೆಯೊಂದು ಹಳ್ಳದ ನೀರಿನಲ್ಲಿ ಮುಳುಗಡೆಯಾಗಿ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆಯಲ್ಲಿ ರಸ್ತೆಯೊಂದು ಕೊಚ್ಚಿ ಹೋಗಿದ್ದರೆ, ಕೊಟ್ಟಿಗೆಹಾರ ಬಸ್‍ನಿಲ್ದಾಣದ ಕಾಂಪೌಂಡ್ ಭಾರೀ ಮಳೆಗೆ ಕುಸಿದು ಬಿದ್ದಿದೆ.

ಮಲೆನಾಡು ಭಾಗದಲ್ಲಿ ಕಳೆದ ರವಿವಾರ, ಸೋಮವಾರ ಹಾಗೂ ಮಂಗಳವಾರ ಮುಂಜಾನೆವರೆಗೆ ನಿರಂತರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮಲೆನಾಡಿನ ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಸಿವೆ. ಕುದುರೆಮುಖ, ಕಳಸ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮಂಗಳವಾರ ಮುಂಜಾನೆ ಮುಳುಗಡೆಯಾಗಿತ್ತು. ಸೇತುವೆ ನದಿ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಳಸ ಪೊಲೀಸರು ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಿ ಕಾವಲು ಹಾಕಿದ್ದಾರೆ. ಮಂಗಳವಾರ ಮಧ್ಯಾಹ್ನ ಮಳೆ ಕೊಂಚ ಬಿಡುವು ನೀಡಿದ್ದರಿಂದ ತೇತುವೆ ಮೇಲೆ ಹರಿಯುತ್ತಿದ್ದ ನೀರು ತೆರವುಗೊಂಡಿದ್ದರಿಂದ ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ.

ಇನ್ನು ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಸುರಿದ ಮಳೆಯಿಂದಾಗಿ ಕಳಸ ತಾಲೂಕಿನ ಮರಸಣಿಗೆ ಗ್ರಾಪಂ ವ್ಯಾಪ್ತಿಯ ಮೈದಾಡಿ-ಮೇಲ್ಗುಳ್ಳಿಗೆ ಗ್ರಾಮ ಸಂಪರ್ಕ ರಸ್ತೆ ಬದಿ ಧರೆ ಕುಸಿದು ಸಂಪರ್ಕ ಕಡಿತಗೊಂಡಿದ್ದು, ಹೊರನಾಡು-ಬಲಿಗೆ ಸಂಪರ್ಕದ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕೆಲ ಕಾಲ ಸ್ಥಗಿತಗೊಂಡಿತ್ತು. ಇನ್ನು ಇಡಕಣಿ ಗ್ರಾಪಂ ವ್ಯಾಪ್ತಿಯಲ್ಲಿ ಹಿರೇಬೈಲ್-ಹೆಮ್ಮಕ್ಕಿ ರಸ್ತೆ ಬದಿಯ ಧರೆ ಕುಸಿದು ಸಂಪರ್ಕ ಕಡಿತಗೊಂಡಿದೆ.

ಶೃಂಗೇರಿ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಶೃಂಗೇರಿ ಶಾರದಾಂಬ ದೇಗುಲ ಸಮೀಪದಲ್ಲಿರುವ ಕಪ್ಪೆ ಶಂಕರ ದೇಗುಲ ತುಂಗಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ನೆರೆ ನೀರಿನಿಂದಾಗಿ ದೇಗುಲ ಸಮೀಪದ ಗಾಂಧಿಮೈದಾನ ನೀರಿನಲ್ಲಿ ಮುಳುಗಡೆಯಾಗಿದ್ದು, ನೆರೆ ನೀರು ಹಲವು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಅಂಗಡಿ ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನೆರೆ ನೀರಿನ ಆತಂಕದಿಂದಾಗಿ ಶೃಂಗೇರಿಯ ಪ್ಯಾರಲಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ. ಶೃಂಗೇರಿ ಮಠದವರೆಗೂ ತುಂಗಾ ನದಿಯ ನದಿ ನೀರು ಆವರಿಸಿಕೊಂಡಿದ್ದು, ಮಠ ಹಾಗೂ ಶರದಾಂಬೆ ದೇಗುಲಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ತುಂಗಾ ನದಿಯ ನೆರೆ ನೀರು ನದಿ ತೀರ ಹೊಲ ಗದ್ದೆ, ಅಡಿಕೆ ತೋಟಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆ ಪರಿಣಾಮ ಜಯಪುರ-ಕೊಪ್ಪ ಪಟ್ಟಣ ಸಂಪರ್ಕದ ರಸ್ತೆಯಲ್ಲಿರುವ ನಾರ್ವೆ ಗ್ರಾಮ ಸಮೀಪದ ಘಾಟಿಯಲ್ಲಿ ಭೂ ಕುಸಿತ ಸಂಭವಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಭೂಕುಸಿತದಿಂದಾಗಿ ರಸ್ತೆ ಬದಿಯಲ್ಲಿ ಭಾರೀ ಕಂದಕ ಉಂಟಾಗಿದ್ದು, ರಸ್ತೆ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ. ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ವಾಹನ ಸವಾರರಿಗೆ ಬದಲಿ ಮಾರ್ಗಗಳ ಮೂಲಕ ಕೊಪ್ಪ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮ ಸಮೀಪದ ಹುಲ್ಲಿನಗದ್ದೆ-ಶೃಂಗೇರಿ ಸಂಪರ್ಕದ ಕಿರು ಸೇತುವೆ ಹಳ್ಳದ ನೀರಿನಿಂದ ಜಲಾವೃತಗೊಂಡು ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮೂಡಿಗೆರೆ ತಾಲೂಕಿನಲ್ಲೂ ಕಳೆದ ಮೂರು ದಿನಗಳಿಂದ ಮಳೆ ಆರ್ಭಟ ಜೋರಾಗಿದ್ದು, ಸೋಮವಾರ ರಾತ್ರಿ ಸಂಭವಿಸಿದೆ ಮಳೆಯಿಂದಾಗಿ ಕೊಟ್ಟಿಗೆಗಾರ ಬಸ್ ನಿಲ್ದಾಣದ ಕಾಂಪೌಂಡ್ ಕುಸಿದಿದೆ. ಇನ್ನು ಮೂಡಿಗೆರೆ-ಬೇಲೂರು ಸಂಪರ್ಕ ರಸ್ತೆಯಲ್ಲಿರುವ ಬೊಮ್ಮೇನಹಳ್ಳಿ-ಕನ್ನೇಹಳ್ಳಿ ಸಂಪರ್ಕದ ರಸ್ತೆ ಮಳೆ ನೀರಿನಿಂದಾಗಿ ಕೊಚ್ಚಿ ಹೋಗಿದ್ದು, ವಾಹನ ಸವಾರರು ಪರ್ಯಾಯ ರಸ್ತೆಯಲ್ಲಿ ಸಂಚಾರ ಮಾಡುವಂತಾಗಿದೆ. ತಾಲೂಕಿನ ಕೆಳಗೂರು ಗ್ರಾಮದಲ್ಲಿ ಕಾಫಿ ಎಸ್ಟೇಟ್‍ನಲ್ಲಿದ್ದ ಲೈನ್ ಮನೆಯ ಮೇಲೆ ಸೋಮವಾರ ರಾತ್ರಿ ಸುರಿದ ಮಳೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಲಕ್ಷ್ಮೀ ಸಂತೋಷ್ ಎಂಬವರ ಮನೆ ಮೇಲೆ ಸೋಮವಾರ ಮಧ್ಯರಾತ್ರಿ ಮರ ಉರುಳಿ ಬಿದ್ದು ಮನೆ ಜಖಂಗೊಂಡಿದೆ. ತಾಲೂಕಿನ ಬಾಳೂರು ಗ್ರಾಮದಲ್ಲಿ ನಾಗೇಶ್ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಮಣ್ಣು ಪಾಲಾಗಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನಲ್ಲೂ ಸೋಮವಾರ ಬೆಳಗ್ಗೆಯಿಂದ ಇಡೀ ದಿನ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಕಾರೊಂದು ರಸ್ತೆ ಬದಿಯ ಕುಲುಮೆ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ತಾಲೂಕುಗಳ ಎಲ್ಲ ಅಂಗನವಾಡಿಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರಮುಖ ನದಿ ತೀರದ ಗ್ರಾಮಗಳಲ್ಲಿ ಜನರು ಸ್ಥಳಾಂತರ ಆಗುವ ಆತಂಕ ಎದುರಾಗಿದೆ. ಮುಂಜಾಗ್ರತಾ ಕ್ರಮಕ್ಕಾಗಿ ಪೊಲೀಸರು, ಅಗ್ನಿಶಾಮಕದಳ, ಸ್ವಯಂ ಸೇವಕರು, ಎನ್‍ಡಿಆರ್ ಎಫ್ ತಂಡಗಳನ್ನು ಜಿಲ್ಲಾಡಳಿತ ಸಜ್ಜುಗೊಳಿಸಿದೆ.

ಇನ್ನು ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಸಂಜೆವರೆಗೆ ಮಳೆ ಬಿಡುವು ನೀಡಿತ್ತು. ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದರೆ, ಮಂಗಳವಾರ ಮಳೆ ಬಿಡುವು ನೀಡಿತ್ತು.

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News