ಚಿಕ್ಕಮಗಳೂರು | ಬಾಲಕಿ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಕುಡಿದ ಮತ್ತಿನಲ್ಲಿ ಪುತ್ರಿಯ ಹತ್ಯೆ ಮಾಡಿದ್ದ ತಂದೆ

Update: 2024-09-25 18:00 GMT

ಚಿಕ್ಕಮಗಳೂರು: ನಿಗೂಢವಾಗಿ ಕೊಲೆಯಾಗಿದ್ದ 5 ವರ್ಷದ ಬಾಲಕಿಯ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಅಜ್ಜಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಡಿದ ಮತ್ತಿನಲ್ಲೇ ತಂದೆಯೇ ಮಗಳನ್ನು ಹತ್ಯೆ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ದಂಪತಿ ನಡುವಿನ ಜಗಳ ಮಗಳ ಹತ್ಯೆಯಲ್ಲಿ ಕೊನೆಗೊಂಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವನಿ ಗ್ರಾಮದ ದಂಪತಿ ಮಂಜುನಾಥ್ ಹಾಗೂ ಮಂಗಳಾ ಎಂಬವರ 5 ವರ್ಷದ ಮಗಳು ವೇದಾ ಸೆ.19ರಂದು ದಂಪತಿಯ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮಧ್ಯಾಹ್ನ ಮನೆಗೆ ಬಂದ ದಂಪತಿ ಮಗಳು ಮೃತಪಟ್ಟಿರುವುದನ್ನು ಕಂಡು ಅಜ್ಜಂಪುರ ಪೊಲೀಸರಿಗೆ ದೂರು ನೀಡಿ, ತಾವು ಕೆಲಸಕ್ಕೆ ಹೋಗಿದ್ದ ವೇಳೆ ಅಪರಿಚಿತರು ಮಗಳನ್ನು ಹತ್ಯೆ ಮಾಡಿ ಮಗಳ ದೇಹದಲ್ಲಿದ್ದ ಓಲೆ, ಕಾಲು ಚೈನು ಕದ್ದು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಅನುಮಾನದ ಮೇರೆಗೆ ಬಾಲಕಿ ತಂದೆಯನ್ನು ವಿಚಾರಣೆಗೊಳಪಡಿಸಿದಾಗ ತಂದೆಯೇ ಮಗಳನ್ನು ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಬಾಲಕಿ ತಂದೆ ಮಂಜುನಾಥ್ ಹಾಗೂ ತಾಯಿ ಮಂಗಳಾ ಪ್ರೀತಿಸಿ ಮದುವೆಯಾಗಿದ್ದು, ಮಗಳ ಜನನವಾದ ಬಳಿಕ ಬಾಲಕಿ ಮಂಗಳಾ ಪತಿ ಮಂಜುನಾಥ್ ಮಗು ತನ್ನದಲ್ಲ ಎಂದು ಆರೋಪಿಸಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಎನ್ನಲಾಗಿದ್ದು, ಸೆ.19ರಂದು ಮಗಳಿಗೆ ಜ್ವರ ಇದೆ ಎಂದು ಹೇಳಿ ಆಕೆಯನ್ನು ಮನೆಯಲ್ಲೇ ಬಿಟ್ಟು ದಂಪತಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಕುಡಿದು ಮನೆಗೆ ಬಂದಿದ್ದ ಮಂಜುನಾಥ್ ಕಂಡ ಬಾಲಕಿ, ಕುಡಿದ ವಿಚಾರಕ್ಕೆ ಬೈದಿದ್ದಾಳೆ, ಇಷ್ಟಕ್ಕೆ ಕುಪಿತನಾದ ತಂದೆ ಮಂಜುನಾಥ್, ಕಬ್ಬಿಣದ ಕೊಳೆಯಿಂದ ಬಾಲಕಿಯನ್ನು ಹೊಡೆದು ಸಾಯಿಸಿದ್ದಾನೆಂದು ಪೊಲೀಸ್ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಗಳನ್ನು ಹತ್ಯೆ ಮಾಡಿದ್ದ ಮಂಜುನಾಥ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪೊಲೀಸರ ತನಿಖೆಯಲ್ಲಿ ತಂದೆಯೇ ಮಗಳನ್ನು ಕೊಂದಿರುವುದು ಪತ್ತೆಯಾಗಿದ್ದು, ಘಟನೆ ಸಂಬಂಧ ಬಾಲಕಿ ತಂದೆ ಮಂಜುನಾಥ್‍ನನ್ನು ಪೊಲೀಸರು ಬಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News