ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಕಾಯಕಲ್ಪ: ಸಚಿವ ದಿನೇಶ್ ಗುಂಡೂರಾವ್

Update: 2023-12-02 12:48 GMT

ಮಂಗಳೂರು: ಸಾವಿರಾರು ಜನರ ಬದುಕಿಗೆ ಆಶ್ರಯ ನೀಡಿರುವ ಹಾಗೂ ಕೋಟ್ಯಂತರ ರೂ. ವ್ಯವಹಾರದ ತಾಣವಾಗಿರುವ ಮಂಗಳೂರು ಮೀನುಗಾರಿಕಾ ಧಕ್ಕೆ (ಹಳೆ ಬಂದರು) ಅಭಿವೃದ್ಧಿಗೆ ಕಾಯಕಲ್ಪ ನೀಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶನಿವಾರ ಮೀನುಗಾರ ಮುಖಂಡರು, ಅಧಿಕಾರಿಗಳ ಜತೆ ಮಂಗಳೂರು ಮೀನುಗಾರಿಕಾ ಧಕ್ಕೆಯುದ್ದಕ್ಕೂ ಪರಿಶೀಲನೆ ನಡೆಸಿದ ಬಳಿಕ ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘ ಹಾಗೂ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದ ಏಕೈಕ ಹಾಗೂ ಪ್ರಮುಖ ಬಂದರು ಇದಾಗಿದ್ದು, ಇಲ್ಲಿ ಸ್ವಚ್ಛತೆ ಸೇರಿದಂತೆ ಇಲ್ಲಿನ ಕುಂದುಕೊರತೆಗಳ ಬಗ್ಗೆ ಗಮನಿಸಿದ್ದೇನೆ. ಈ ಬಂದರು ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಯಾವೆಲ್ಲಾ ಯೋಜನೆಗಳಿಗಾಗಿ, ಯಾವೆಲ್ಲಾ ಹಂತದಲ್ಲಿ ಅನುದಾನ ಬಿಡುಗಡೆಯಾಗಿದೆ, ಬಿಡುಗಡೆ ಆಗಿರುವ ಅನುದಾನದಲ್ಲಿ ಕಾಮಗಾರಿ ವಿಳಂಬಕ್ಕೆ ಕಾರಣದ ಬಗ್ಗೆ ವಿಶೇಷ ಗಮನ ನೀಡಲಾಗುವುದು ಎಂದು ಅವರು ಮೀನುಗಾರ ಮುಖಂಡರಿಗೆ ಆಶ್ವಾಸನೆ ನೀಡಿದರು.

ಮೀನುಗಾರಿಕಾ ಬೋಟ್ ತಂಗುದಾಣ, ಮೀನು ಹರಾಜು ಸ್ಥಳ, ಅಳಿವೆಬಾಗಿಲು ಸೇರಿದಂತೆ ಮೀನುಗಾರಿಕಾ ಧಕ್ಕೆ ಯುದ್ದಕ್ಕೂ ಪರಿಶೀಲನೆ ನಡೆಸುವ ವೇಳೆ ಮೀನುಗಾರ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿದರು. ಬೋಟು ಮಾಲಕರು ಹಾಗೂ ಕಾರ್ಮಿಕರ ಜತೆ ಮಾತುಕತೆ ನಡೆಸಿದರು.

ಅಳಿವೆ ಬಾಗಿಲು ಹೂಳು ತುಂಬಿ ದೋಣಿಗಳಿಗೆ ಹಾನಿ

ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಮೀನುಗಾರಿಕಾ ದೋಣಿಗಳು ಬಂದರಿನ ದಡ ಸೇರಲು ಸಮಸ್ಯೆ ಆಗುತ್ತಿದೆ. ಅಪಘಾತ ಸೇರಿದಂತೆ ಮೀನುಗಾರಿಕಾ ದೋಣಿಗಳು ಹಾನಿಗೆ ಒಳಗಾಗಿ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂಬುದಾಗಿ ಮೀನುಗಾರಿಕಾ ಮುಖಂಡರು ಸಚಿವರ ಗಮನಕ್ಕೆ ತಂದರಲ್ಲದೆ, ಮಂಗಳೂರು ಮೀನುಗಾರಿಕಾ ಧಕ್ಕೆಯ ಮೂರನೆ ಹಂತದ ಅಭಿವೃದ್ಧಿ ಕಾಮಗಾರಿ ನಡೆಸಬೇಕು. ಮೀನು ಹರಾಜಿಗೆ ಪ್ರತ್ಯೇಕ ಜಾಗ ನಿಗದಿಪಡಿಸಬೇಕು. ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಹಾಗೂ ನಿರ್ವಹಣೆಗೆ ಒತ್ತು ನೀಡುವ ಮೂಲಕ ಮಂಗಳೂರು ಮೀನುಗಾರಿಕಾ ಧಕ್ಕೆಯ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ರಕ್ಷಿತ್ ಶಿವರಾಂ, ಪ್ರವೀಣ್ ಚಂದ್ರ ಆಳ್ವ, ಅಬ್ದುಲ್ ಲತೀಫ್, ಸಂಶುದ್ದೀನ್, ವಿನಯ ರಾಜ್, ಮೀನುಗಾರ ಮುಖಂಡರಾದ ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ನವೀನ್, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಾದ ಹರೀಶ್ ಕುಮಾರ್, ದಿನೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸ್ವಚ್ಛತೆಯ ಕೊರತೆಯಿಂದ ರಫ್ತುದಾರರಿಂದ ನಿರ್ಲಕ್ಷ್ಯ

ಮಂಗಳೂರು ಧಕ್ಕೆಯಲ್ಲಿ ನೈರ್ಮಲ್ಯದ ಕೊರತೆಯಿಂದ ಇಲ್ಲಿಗೆ ಬರುವ ರಫ್ತುದಾರರು ಮೀನು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಮೀನುಗಾರರಿಗೆ ನೈಜವಾಗಿ ದೊರೆಯಬೇಕಾದ ಬೆಲೆ ದೊರಕುತ್ತಿಲ್ಲ ಎಂದು ಮೀನುಗಾರ ಮುಖಂಡ ಚೇತನ್ ಬೆಂಗ್ರೆ ಸಚಿವ ದಿನೇಶ್ ಗುಂಡೂರಾವ್ ಅವರ ಗಮನ ಸೆಳೆದರು.

ಧಕ್ಕೆಯ ಮೀನು ಹರಾಜಿನಲ್ಲಿ ಸಚಿವರು ಭಾಗಿ

ಮಂಗಳೂರು ಮೀನುಗಾರಿಕಾ ಧಕ್ಕೆ ಪರಿಶೀಲನೆ ಸಂದರ್ಭ ಮೀನು ಹರಾಜು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಮೀನುಗಾರ ಮಹಿಳೆಯರ ಜತೆ ಮಾತನಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಂಜಲ್ ಮೀನು ಕೈಯಲ್ಲಿ ಹಿಡಿದು ಕೊಂಡು ಅಲ್ಲಿ ನಡೆಯುತ್ತಿದ್ದ ಮೀನು ಹರಾಜು ಪ್ರಕ್ರಿಯೆ ಪರಿಶೀಲಿಸಿದರು.













Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News