ಮಂಗಳೂರು: ವಿದ್ಯಾರ್ಥಿ ಮೃತ್ಯು; ಡೆಂಗ್ಯೂ ಶಂಕೆ

Update: 2023-10-17 14:19 GMT

ಮಂಗಳೂರು: ನಗರದ ಅತ್ತಾವರ ಏಳನೆ ಕ್ರಾಸ್ ರಸ್ತೆಯ ನಿವಾಸಿಯಾಗಿರುವ ಸೋನಿ ಮತ್ತು ಆಲ್ಫೋನ್ಸ್ ಅವರ ಪುತ್ರ, 8ನೆ ತರಗತಿಯ ವಿದ್ಯಾರ್ಥಿ ಆಶಿಶ್ ಶಂಕಿತ ಡೆಂಗ್ಯೂನಿಂದ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಸೋನಿ ಮತ್ತು ಆಲ್ಫೋನ್ಸ್ ಅವರ ಇಬ್ಬರು ಪುತ್ರರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 13ರ ಹರೆಯದ ಆಶಿಶ್ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಈತ ಮಂಗಳವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವುದರಲ್ಲಿದ್ದ ಎನ್ನಲಾಗಿದೆ.

ಮೃತ ವಿದ್ಯಾರ್ಥಿಗೆ ತೀವ್ರ ಜ್ವರವಿತ್ತು. ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿಶ್ ನ ಅಣ್ಣನನ್ನು ಡಿಸ್‌ಚಾರ್ಜ್ ಮಾಡಿಸಲಾಗಿದೆ. ಆಶಿಶ್ ನ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದಾ ಚುರುಕುತನದಿಂದಿದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸದಸ್ಯನಾಗಿದ್ದರು ಎನ್ನಲಾಗಿದೆ.

ಅತ್ತಾವರ ಸಹಿತ ನಗರದ ಅನೇಕ ಕಡೆ ಡೆಂಗ್ಯೂ ಹಾವಳಿಯಿದ್ದು, ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಕಾಟಾಚಾರದ ಭೇಟಿ ನೀಡಿ ಸುಮ್ಮನಾಗುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News