ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆ ರಾಜ್ಯಾದ್ಯಂತ ವಿಸ್ತರಣೆ : ದಿನೇಶ್ ಗುಂಡೂರಾವ್

Update: 2025-02-19 21:40 IST
ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆ ರಾಜ್ಯಾದ್ಯಂತ ವಿಸ್ತರಣೆ : ದಿನೇಶ್ ಗುಂಡೂರಾವ್
  • whatsapp icon

ತುಮಕೂರು : ರಾಜ್ಯದ 80 ತಾಲ್ಲೂಕು ಆಸ್ಪತ್ರೆಗಳಲ್ಲಿ ಆರಂಭಿಸಿರುವ ‘ಪುನೀತ್ ರಾಜ್‍ಕುಮಾರ್’ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‍ರವರು ಹೇಳಿದ್ದಾರೆ.

ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಸ್ಥಾಪಿಸಿರುವ 2ನೇ ಕ್ಯಾಥ್ ಲ್ಯಾಬ್‍ನ್ನು ಫೆ.19ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದ ಅವರು ಮಾತನಾಡುತ್ತಾ ಹೃದಯ ಜ್ಯೋತಿ ಸೌಲಭ್ಯದಿಂದ ಈವರೆಗೆ ಸುಮಾರು 250 ಕ್ಕೂ ಹೆಚ್ಚು ಜನರ ಜೀವ ಕಾಪಾಡಲಾಗಿದೆ ಎಂದು ತಿಳಿಸಿದರು.

ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೆ-ಕೇರ್ ಮತ್ತು ಕಿಮೋಥೊರಫಿ ಸೌಲಭ್ಯ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಸದ್ಯದಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜೊತೆಗೂಡಿ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ಶ್ರೀದೇವಿ ಆಸ್ಪತ್ರೆ ಮತ್ತು ಸಿದ್ದಾರ್ಥ ವೈದ್ಯಕೀಯ ಸಂಸ್ಥೆಗಳಿಗೆ ಡೆ-ಕೇರ್ ಮತ್ತು ಕಿಮೋಥೆರಫಿ ಚಿಕಿತ್ಸಾ ನಿರ್ವಹಣೆಯನ್ನು ವಹಿಸಿಕೊಂಡುವುದಾಗಿ ಸಚಿವರು ಪ್ರಕಟಿಸಿದರು.

ವೈದ್ಯಕೀಯ ಲೋಕದಲ್ಲಿ ಪ್ರತಿನಿತ್ಯ ಹೊಸ-ಹೊಸ ಬದಲಾವಣೆಗಳಾಗುತ್ತವೆ. ಮುಂದಿನ ದಿನಗಳಲ್ಲ್ಲಿ ಕ್ಯಾನ್ಸರ್‌ ನಂತಹ ಮಾರಕ ಕಾಯಿಲೆಗಳಿಗೂ ಪರಿಹಾರ ದೊರಕಲಿದೆ. ಭವಿಷ್ಯದಲ್ಲಿ ಮನುಷ್ಯನ ಆಯಸ್ಸು 120 ವರ್ಷದವರೆಗೂ ಹೋದರೂ ಅಚ್ಚರಿಪಡಬೇಕಿಲ್ಲ ಎಂದು ಅವರು ನುಡಿದರು. ರೋಗಗಳಿಂದಾಗಿ ಮನುಷ್ಯನ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ವೈದ್ಯರಿಗೆ ಮತ್ತು ದಾದಿಯರಿಗೆ ಜೀವ ಉಳಿಸುವಂತಹ ಶಕ್ತಿಯಿರುತ್ತದೆ. ದೇವರಿಗೆ ಬಿಟ್ಟರೇ ಇತಂಹ ಅದ್ಭುತ ಶಕ್ತಿಯಿರುವುದು ವೈದ್ಯಕೀಯ ಸಮುದಾಯಕ್ಕೆ ಮಾತ್ರ. ಹೀಗಾಗಿ ವೈದ್ಯರು ವೃತ್ತಿ ಧರ್ಮ ಕಾಪಾಡಬೇಕು ಎಂದರು. ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವ ತುಮಕೂರಿನ ಶ್ರೀದೇವಿ ಆಸ್ಪತ್ರೆ ರಾಜ್ಯದ ದೊಡ್ಡ ಆಸ್ತಿಯಾಗಿದ್ದು, ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಭವಿಷ್ಯದಲ್ಲಿ ಉಜ್ವಲ ಉಜ್ವಲ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕರಾದ ಡಾ.ಎಂ.ಆರ್. ಹುಲಿನಾಯ್ಕರ್‍ರವರು ಮಾತನಾಡುತ್ತಾ, ದಿನೇಶ್ ಗುಂಡೂರಾವ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಸರ್ಕಾರಿ ಆಸ್ಪತ್ರೆಗಳ ಸೇವೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಾಗುವಂತೆ ಮಾಡಿದ್ದಾರೆ. ಅನ್ನಭಾಗ್ಯ ಮತ್ತು ಯಶಸ್ವಿನಿ ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿತ್ತು. ಈಗಿನ ಕಾಲಘಟ್ಟ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. 2ನೇ ಕ್ಯಾಥ್ ಲ್ಯಾಬ್ ಆರಂಭದಿಂದ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಎಂ.ನಾಗರಾಜ್ ಜೀವನ ಚರಿತ್ರೆ ಕುರಿತು ಡಾ ಕೆ.ಆರ್. ಕಮಲೇಶ್ ಕನ್ನಡದಲ್ಲಿ ಬರೆದಿದ್ದ “A Beacon of Light Dedicated to Srevice - Acharya Dr. M. Nagaraju`s Life Mission’ ಕೃತಿಯನ್ನು ಡಿ.ಆರ್.ಡಿಸೋಜಾ ಇಂಗ್ಲೀಷ್‍ಗೆ ಅನುವಾದ ಮಾಡಿದ್ದು, ಇದನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಲೋಕಾರ್ಪಣೆ ಮಾಡಿದರು

ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್‍ಬಾಬು ಸೇರಿ ಮುಂತಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News