ದಾವಣಗೆರೆ | ನಿವೇಶನ ಖಾತೆ ವರ್ಗಾವಣೆಗೆ ಲಂಚ; ಎಫ್‌ಡಿಎ ಲೋಕಾಯುಕ್ತ ವಶಕ್ಕೆ

Update: 2025-03-14 23:23 IST
ದಾವಣಗೆರೆ | ನಿವೇಶನ ಖಾತೆ ವರ್ಗಾವಣೆಗೆ ಲಂಚ; ಎಫ್‌ಡಿಎ ಲೋಕಾಯುಕ್ತ ವಶಕ್ಕೆ
  • whatsapp icon

ದಾವಣಗೆರೆ: ನಿವೇಶನ ಖಾತೆ ವರ್ಗಾವಣೆಗೆ ಲಂಚ ಪಡೆಯುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಪಾಲನಾಯಕನನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿ.ಯು.ಬಸವನಗೌಡ ಎಂಬವರು ಆವರಗೆರೆ ವಾರ್ಡ್ ನಂ.30ರಲ್ಲಿರುವ ಬಾಡಾ ಕ್ರಾಸ್(ಮೋತಿ ನಗರ)ನ ಖಾಲಿ ನಿವೇಶನ ಡೋರ್ ನಂಬರ್ 358/21ರ 30x40 ಅಳತೆಯ ಸೈಟ್ ಅನ್ನು ತನ್ನ ತಂಗಿ ಕಾವ್ಯಾ ಜಿ.ಯು. ಅವರಿಗೆ ಪಾಲು ವಿಭಾಗ ಯಾನೆ ಪಾರೀಖತ್ ಪತ್ರ ಮುಖಾಂತರ ನೋಂದಣಿ ಮಾಡಿಸಿದ್ದರು.

ಈ ಸೈಟ್ ಅನ್ನು ತನ್ನ ತಂಗಿಯ ಹೆಸರಿಗೆ ಖಾತೆ ವರ್ಗಾವಣೆ ಮಾಡಿಕೊಡಲು ಪಾಲಿಕೆ ವಲಯ ಕಚೇರಿ-2ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ವರ್ಗಾವಣೆ ಮಾಡಿಕೊಡಲು ಪಾಲನಾಯಕ 2,500 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಬಸವನಗೌಡ ಅವರಿಗೆ ಲಂಚದ ಹಣ ನೀಡಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಪಾಲನಾಯಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಶುಕ್ರವಾರ ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಅವರು ತಮ್ಮ ಕಚೇರಿಯಲ್ಲಿ ಬಸವನಗೌಡ ಅವರಿಂದ 2,500 ರೂ. ಲಂಚ ಪಡೆಯುತ್ತಿದ್ದಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಭು ಬಸೂರಿನ ಮುಸ್ತಾಕ್ ಅಹ್ಮದ್ ಮತ್ತು ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪಾಲನಾಯಕ ಅವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News