ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪರಿಂದ ಬ್ಲ್ಯಾಕ್ಮೇಲ್ : ಬಿ.ಪಿ.ಹರೀಶ್

ಬಿ.ಪಿ.ಹರೀಶ್
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ಬ್ಲ್ಯಾಕ್ಮೇಲ್ ರಾಜಕಾರಣ ಮಾಡಿಕೊಂಡೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಆರೋಪಿಸಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ‘ಲಿಂಗಾಯತರ ಸಮಾವೇಶ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹೇಳಿದೆ. ಪರ್ಯಾಯವಾಗಿ ನೀವು ಮಾಡ್ತೀರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ನಾಯಕರು ನಮ್ಮ ಜೊತೆ ಇಲ್ಲ ಎಂಬ ಭಾವನೆ ಅವರಿಗಿದೆ. ಹೀಗಾಗಿ ಈ ಆಟ ಶುರು ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರಿಗೆ ಬ್ಲ್ಯಾಕ್ಮೇಲ್ ಮಾಡಿಕೊಂಡೇ ಬಂದಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಸಿಎಂ ಸ್ಥಾನದಿಂದ ಇಳಿಯುವಾಗ ಇದೇ ರೀತಿ ಮಠ-ಮಾನ್ಯಗಳ ಜನರನ್ನು ಸೇರಿಸುವುದು, ಎಲ್ಲರನ್ನು ಸೇರಿಸುವುದು ಇವರ ಹಳೆಯ ಆಟ. ಮತ್ತೆ ಈಗ ಅದೇ ಹಳೆಯ ಆಟ ಮುಂದುವರಿಸಿದ್ದಾರೆ. ನಮಗೆ ಆ ಭಯ ಇಲ್ಲ, ನಾವು ಪ್ರಾಮಾಣಿಕವಾಗಿ ಇದ್ದೇವೆ ಎಂದರು.
ಪಕ್ಷ ದ್ರೋಹ ಮಾಡಿದವರು, ಮ್ಯಾಚ್ ಫಿಕ್ಸಿಂಗ್ ಮಾಡಿದವರು, ಭ್ರಷ್ಟಾಚಾರಿಗಳನ್ನು ತೊಲಗಿಸಲು ರಾಜ್ಯದ ಜನತೆ ಬಯಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಒಳ್ಳೆಯ ಭವಿಷ್ಯವಿದೆ. ಒಳ್ಳೆಯ ನಾಯಕರು ಬೇಕೆಂದು ಜನರು ಬಯಸಿದ್ದಾರೆ. ಅದೇ ರೀತಿ ರಾಷ್ಟ್ರೀಯ ನಾಯಕರು ನಡೆದುಕೊಳ್ಳುವ ವಿಶ್ವಾಸ ನಮಗಿದೆ ಎಂದು ಹೇಳಿದರು.
ವಿಜಯೇಂದ್ರ ಬಣವೂ ಯತ್ನಾಳ್ ಕೂಡ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ, ‘ಮ್ಯಾಚ್ ಫಿಕ್ಸಿಂಗ್ ಮಾಡಿದ್ದರೂ ಬಿಎಸ್ಸೈ ಹಾಳಾಗಿ ಹೋಗಲಿ, ಯತ್ನಾಳ್ ಕೂಡ ಹಾಳಾಗಿ ಹೋಗಲಿ. ನಾನೇನು ಯತ್ನಾಳ್ ಹಿಂದೆ ಇರುವವನಲ್ಲ. ಯತ್ನಾಳ್ ವಿಜಯಪುರ, ನಾನು ದಾವಣಗೆರೆಯವನು. ದಾವಣಗೆರೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮನೆತನ ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸುವವನು ನಾನು. ನಾಳೆ ಯಾವುದೋ ಕಾರಣಕ್ಕೆ ಅವರು ಒಂದಾದರೂ ನನ್ನ ವೈಯಕ್ತಿಕ ಅಭಿಪ್ರಾಯ, ಭ್ರಷ್ಟರು, ಮ್ಯಾಚ್ ಫಿಕ್ಸಿಂಗ್ ಮಾಡುವವರು, ಬ್ಲ್ಯಾಕ್ಮೇಲ್ ಮಾಡುವವರಿಗೆ ಯಾವತ್ತೂ ಅವಕಾಶ ಮಾಡಿಕೊಡಬೇಡಿ ಎಂದು ರಾಷ್ಟ್ರ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದು ಹರೀಶ್ ಪ್ರತಿಕ್ರಿಯಿಸಿದರು.