ಚನ್ನರಾಯಪಟ್ಟಣ : ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Update: 2024-08-15 15:16 GMT

ಚನ್ನರಾಯಪಟ್ಟಣ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ವರದಿಯಾಗಿದೆ.

ಮೃತರನ್ನು ಶ್ರೀನಿವಾಸ್(43), ಶ್ವೇತಾ(36) ಹಾಗೂ ಅವರ ಮಗಳು ನಾಗಶ್ರೀ(13) ಎಂದು ಗುರುತಿಸಲಾಗಿದೆ. ಶ್ರೀನಿವಾಸ್ ಚಾಲಕನಾಗಿದ್ದು, ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದರೆ ವಿವಿಧ ಕಾರಣಕ್ಕೆ ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಸಾಲಗಾರರ ಕಾಟ ಹೆಚ್ಚಾದಾಗ ಕಳೆದ ಮಂಗಳವಾರ ಮೂವರೂ ದಿಢೀರ್ ಕಾಣೆಯಾಗಿದ್ದರು ಎನ್ನಲಾಗಿದೆ. ಪತಿ-ಪತ್ನಿ ಹಾಗೂ ಮಗಳು ಕಾಣದೇ ಇದ್ದಾಗ ಕುಟುಂಬದ ಸದಸ್ಯರು ಎಲ್ಲೆಡೆ ಹುಡುಕಾಡಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ನಂತರ ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್ ಹಾಗೂ ಪತ್ನಿ ಶ್ವೇತಾ ಅವರ ಮೃತದೇಹ ಪತ್ತೆಯಾಗಿದೆ. ಮೂವರೂ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News