ರೈತರ ಸಮಸ್ಯೆಗಳಿಗಿಂತ ಮನೆ ಜಗಳ ಮಾಧ್ಯಮಗಳಿಗೆ ಮುಖ್ಯವಾಗಿರುವುದು ದುರಂತ : ಕೆ.ವಿ.ಪ್ರಭಾಕರ್

Update: 2024-09-13 16:06 GMT

ಹಾವೇರಿ: ‘ಸುದ್ದಿ ಮಾಧ್ಯಮಗಳಿಗೆ ರೈತರ ಸಮಸ್ಯೆಗಳಿಗಿಂತ ಮನೆ ಜಗಳ ಮುಖ್ಯವಾಗಿರುವುದು ನಿಜಕ್ಕೂ ದುರಂತ’ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಜಿಲ್ಲಾ ಘಕದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೊರೇಟ್ ಶ್ರೀಮಂತರ ಮನೆಯ ವೈಭವಕ್ಕಿಂತ ದುಡಿದು ಬದುಕುವವರ ಬವಣೆಗೆ ಕ್ಯಾಮರಾ ಹಿಡಿಯಿರಿ ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶದ ಅಭಿವೃದ್ಧಿ ಪತ್ರಿಕೋದ್ಯಮದ ಆದ್ಯತೆ ಆಗಿತ್ತು. ಗಾಂಧಿ, ಅಂಬೇಡ್ಕರ್ ಅವರು ಪತ್ರಿಕೆಗಳನ್ನು ನಡೆಸಿ ನಮ್ಮಂತಹ ದೇಶಕ್ಕೆ ಯಾವ ರೀತಿಯ ಪತ್ರಿಕೋದ್ಯಮ ಬೇಕು ಎನ್ನುವುದಕ್ಕೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಟಿಆರ್‍ಪಿ ರಭಸದಲ್ಲಿ ಈ ಮಾದರಿಗಳು ಕೊಚ್ಚಿಹೋಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಂತ್ರಜ್ಞಾನದ ವೇಗ ಕೃತಕ ಬುದ್ದಿಮತ್ತೆಯ ಕಾಲದಲ್ಲಿ ಪತ್ರಿಕಾವೃತ್ತಿ ಹೊಸ ಸವಾಲು ಮತ್ತು ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ. ಪತ್ರಕರ್ತರು ಅಷ್ಟೇ ವೇಗದಲ್ಲಿ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕಿದೆ ಎಂದ ಅವರು, ವಿದ್ಯಾರ್ಥಿಗಳಾದವರು ತಂದೆ-ತಾಯಿ ಮಾತು ಕೇಳಬೇಕು. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಎಷ್ಟು ಅರ್ಥಪೂರ್ಣ ಎನ್ನುವುದನ್ನು ನೋಬೆಲ್ ಪುರಸ್ಕೃತ ವಿಜ್ಞಾನಿ ಐನ್‍ಸ್ಟೀನ್ ಬದುಕಿನ ಘಟನೆಗಳನ್ನು ಉದಾಹರಿಸಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಾಸಕ ಶಿವಣ್ಣ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News