ಹಾಸನ | ಕಾಡಾನೆ ದಾಳಿಗೆ ವ್ಯಕ್ತಿಯ ಕಾಲು ಮುರಿತ

Update: 2024-06-13 12:38 GMT

ಕಾಡಾನೆ ದಾಳಿಗೊಳಗಾದ ದಿವಾಕರ್‌ ಶೆಟ್ಟಿ

ಹಾಸನ : ಕೂಲಿ ಕೆಲಸಕ್ಕೆ ತರೆಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯ ಕಾಲು ಮುರಿದಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವಾಟೆಹಳ್ಳ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯನ್ನು ದಿವಾಕರ್ ಶೆಟ್ಟಿ (60) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ದಿವಾಕರ್ ಶೆಟ್ಟಿ  ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆಯೊಂದು ಕಾಲಿನಿಂದ ತುಳಿದಿದೆ. ಕಾಡಾನೆ ತುಳಿತದಿಂದ ದಿವಾಕರ್ ಅವರ ಬಲಗಾಲು ಮುರಿದಿದ್ದು, ಕಾರ್ಮಿಕ ಕಿರುಚಾಡುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ನುಗ್ಗಿದೆ ಎನ್ನಲಾಗಿದೆ.

ಅದೃಷ್ಟವಶಾತ್ ದಿವಾಕರ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದ್ದು, ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News