ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ : ಕೆ.ವಿ.ಪ್ರಭಾಕರ್

Update: 2024-07-14 11:25 GMT

ಹಾಸನ : ʼಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವದ ಉಸಿರು. ಪತ್ರಿಕಾ ವೃತ್ತಿ ಪ್ರಜಾಪ್ರಭುತ್ವಕ್ಕೆ ರಕ್ತವನ್ನು ಪಂಪ್ ಮಾಡುವ ಹೃದಯʼ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು

ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, "ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೃದಯಕ್ಕೆ ಶಕ್ತಿ ತುಂಬುವುದು ನಮ್ಮ ಸಂವಿಧಾನ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಈ ಸಂವಿಧಾನದ ಜೀವಾಳ" ಎಂದು ಹೇಳಿದರು.

ಪತ್ರಕರ್ತರಿಗೆ, ಪತ್ರಿಕಾ ವೃತ್ತಿಗೆ ನಮ್ಮ ಸಂವಿಧಾನ ಪ್ರತ್ಯೇಕವಾದ ಹಕ್ಕುಗಳನ್ನು ಕೊಟ್ಟಿಲ್ಲ. ಅಭಿವ್ಯಕ್ತಿ‌ ಸ್ವಾತಂತ್ರ್ಯದ ನೆರಳಲ್ಲೇ ಪತ್ರಿಕಾ ಸ್ವಾತಂತ್ರ್ಯವೂ ಇದೆ. ಹೀಗಾಗಿ ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ ಎಂದರು.

ʼಜನರ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಅರಿಯಲು ಸರಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಇರುವ ಬಹುಮುಖ್ಯ ಸಾಧನ ಮಾಧ್ಯಮ. ಮೊದಲೆಲ್ಲಾ ಜನರ ನಿರೀಕ್ಷೆಗಳನ್ಮು ಮಾಧ್ಯಮಗಳು ಸರಕಾರದ ಗಮನಕ್ಕೆ ತರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಾರ್ಪೋರೇಟ್ ಶ್ರೀಮಂತರ ವೈಯುಕ್ತಿಕ ಹಿತಾಸಕ್ತಿಗಳೇ ಜನರ ಸಮಸ್ಯೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

ʼಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಮನರಂಜನೆ ಮತ್ತು ಸುದ್ದಿಗಳ ಆದ್ಯತೆ ಎರಡೂ ಬದಲಾಗಿವೆ. ಮನೋರಂಜನಾ ಚಾನಲ್ ಗಳಲ್ಲಿ ಬರುವ ಸೀರಿಯಲ್ ಗಳಲ್ಲಿ ಶ್ರೀಮಂತರ ಕುಟುಂಬಗಳ ಸಂಬಂಧಗಳು ಮತ್ತು ಸಮಸ್ಯೆಗಳನ್ನೇ ಇಡೀ ಸಮಾಜದ ಸಮಸ್ಯೆ ಎನ್ನುವಂತೆ ತೋರಿಸುತ್ತಾರೆ. ಶ್ರಮ ಸಂಸ್ಕೃತಿಯ ಬದುಕಿಗೆ ಇಲ್ಲಿ ಸ್ಥಾನಗಳಿಲ್ಲದಂತಾಗುತ್ತಿದೆ" ಎಂದು ಹೇಳಿದರು. 

ಯಾವುದೇ ಪತ್ರಿಕಾ ಸಂಸ್ಥೆಗಳಲ್ಲಿ ಪತ್ರಿಕೆ ಹಾಕುವವರಿಂದ ಹಿಡಿದು ವರದಿಗಾರರು, ಜಾಹಿರಾತು ಪ್ರತಿನಿಧಿಗಳು, ಸಂಪಾದಕರವರೆಗೂ ಬಹುತೇಕ ಮಂದಿ ರೈತ, ಕಾರ್ಮಿಕರ ಮಕ್ಕಳೇ ಆಗಿದ್ದಾರೆ. ಆದರೂ ರೈತ- ಕಾರ್ಮಿಕರ ಮತ್ತು ದುಡಿಯುವ ವರ್ಗಗಳ ನಿಜವಾದ ಸಮಸ್ಯೆಗಳಿಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಮೊದಲಿನಷ್ಟು ಪ್ರಾಶಸ್ತ್ಯ ಸಿಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.

ನಾವು ಈಗ ಪತ್ರಿಕಾ ಸ್ವಾತಂತ್ರ್ಯವನ್ನು , ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರೆ ಇದರಲ್ಲಿ ನಮ್ಮ ಪಾತ್ರ ಏನೇನೂ ಇಲ್ಲ. ನಮ್ಮ ಹಿಂದಿನವರ ಕಾಳಜಿ, ಹೋರಾಟ ಮತ್ತು ವೃತ್ತಿಪರತೆಯ ಫಲವನ್ನು ನಾವು ಈಗ ಸವಿಯುತ್ತಿದ್ದೇವೆ ಎಂದರು.

ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್, ಜಿಲ್ಲಾ ರಕ್ಷಣಾಧಿಕಾರಿ ಮುಹಮದ್ ಸುಜಿತಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಮದನ್ ಗೌಡರು, ವಸತಿ ಸಚಿವರ ಮಾಧ್ಯಮ ಸಂಯೋಜಕರಾದ ಲಕ್ಷ್ಮೀನಾರಾಯಣ್, ಬಾಲಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ತೆಂಗಿನ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಟರಾಜ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News