ಮಳೆಗಾಲದಲ್ಲಿ ಉಲ್ಬಣಗೊಳ್ಳುತ್ತಿರುವ ಕೆಂಗಣ್ಣು ಬೇನೆ ಪ್ರಕರಣಗಳು; ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗೊತ್ತಿರಲಿ

Update: 2023-07-29 16:50 GMT

ಕಳೆದ ಕೆಲವು ವಾರಗಳಲ್ಲಿ ಭಾರೀ ಮಳೆಯ ನಡುವೆಯೇ ದಿಲ್ಲಿ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಂಜಕ್ಟಿವಿಟೀಸ್ ಅಥವಾ ಕೆಂಗಣ್ಣು ಬೇನೆ ಪ್ರಕರಣಗಳು ಹೆಚ್ಚುತ್ತಿವೆ. ‘ಪಿಂಕ್ ಐ’ ಎಂದೂ ಕರೆಯಲ್ಪಡುವ ಇದು ಕಣ್ಣಿನ ಸೋಂಕಿನ ಅತ್ಯಂತ ಸಾಮಾನ್ಯ ವಿಧವಾಗಿದೆ.

ಆರ್ದ್ರ ಹವಾಮಾನವು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಬೆಳೆಯಲು ಮತ್ತು ಹರಡಲು ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಇದು ಅತ್ಯಂತ ಸಾಂಕ್ರಾಮಿಕ ಕಣ್ಣಿನ ಸೋಂಕು ಪ್ರಕರಣಗಳು ಹೆಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಳೆಗಾಲದಲ್ಲಿ ಕಣ್ಣಿನ ಸೋಂಕು

ಲಕ್ಷಣಗಳು: ಕಣ್ಣುಗಳು ಕೆಂಪಾಗುವುದು, ತುರಿಕೆ, ಕಣ್ಣುನೋವು, ಕಣ್ಣಿನಲ್ಲಿ ಹೆಚ್ಚು ನೀರಿನಂಶ, ಊತ, ಕಣ್ಣುಗಳಿಂದ ಸ್ರವಿಸುವಿಕೆ, ಮಸುಕಾದ ದೃಷ್ಟಿ ಮತ್ತು ಬೆಳಕನ್ನು ನೋಡಲು ಸಾಧ್ಯವಾಗದಿರುವುದು ಇವು ಕೆಂಗಣ್ಣು ಬೇನೆಯ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಮಳೆಗೂ ಮತ್ತು ಕಣ್ಣಿನ ಸೋಂಕಿಗೂ ಏನು ಸಂಬಂಧ?

ಪ್ರಕರಣಗಳು ಉಲ್ಬಣಗೊಳ್ಳಲು ಹಲವು ಅಂಶಗಳು ಕಾರಣವಾಗಿವೆ.

ಫರೀದಾಬಾದ್ ನ ಮೆಟ್ರೋ ಹಾಸ್ಪಿಟಲ್ ನ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅಪರ್ಣಾ ದರ್ಶ್ವಾಲ್ ಹೇಳುವಂತೆ, ಮಳೆಗಾಲದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಬೆಚ್ಚಗಿನ ತಾಪಮಾನದ ಸಂಯೋಜನೆಯು ಬ್ಯಾಕ್ಟೀರಿಯಾಗಳು ಮತ್ತು ವೈರಸ್ ಗಳ ತ್ವರಿತ ಸಂತಾನೋತ್ಪತ್ತಿಗೆ ಪ್ರಶಸ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಅಲ್ಲದೆ ಕಲುಷಿತ ನೀರು ಹರಿದುಹೋಗದೇ ಒಂದೇ ಕಡೆಗೆ ನಿಲ್ಲುವುದು ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳು ತ್ವರಿತವಾಗಿ ವರ್ಧಿಸಲು ಅವಕಾಶವನ್ನು ನೀಡುತ್ತದೆ.

ಕಣ್ಣಿನ ಸೋಂಕನ್ನು ತಡೆಯುವುದು ಹೇಗೆ?

ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯುವಲ್ಲಿ ಕೈಗಳ ನೈರ್ಮಲ್ಯವು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಸೋಂಕು ತಡೆಗಟ್ಟಲು ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುವುದು ಮುಖ್ಯವಾಗಿದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಕೈಗಳನ್ನು ಸ್ವಚ್ಛಗೊಳಿಸಬೇಕು. ಕಣ್ಣುಗಳನ್ನು ಸ್ಪರ್ಶಿಸುವುದರಿಂದ ದೂರವಿರಬೇಕು. ಕೆಂಗಣ್ಣು ಬೇನೆಯಿಂದ ನರಳುತ್ತಿರುವ ವ್ಯಕ್ತಿ ಕೆಲವು ದಿನಗಳ ಮಟ್ಟಿಗೆ, ಕಣ್ಣಿನಲ್ಲಿ ನೀರು ತುಂಬುವುದು, ಸ್ರವಿಸುವಿಕೆ ನಿಲ್ಲುವವರೆಗೂ ಇತರರಿಂದ ಪ್ರತ್ಯೇಕವಾಗಿರಬೇಕು. ಈ ಬೇನೆಯಿಂದ ನರಳುತ್ತಿರುವ ವ್ಯಕ್ತಿಯೊಂದಿಗೆ ಟವೆಲ್ಗಳು, ಕರವಸ್ತ್ರಗಳು ಅಥವಾ ಹಾಸಿಗೆಯನ್ನು ಹಂಚಿಕೊಳ್ಳಬಾರದು. ಸ್ವಯಂ ಔಷಧಿಯನ್ನು ಮಾಡಿಕೊಳ್ಳಲೇಬಾರದು. ಸಾರ್ವಜನಿಕ ಸ್ಥಳಗಳಿಂದ, ವಿಶೇಷವಾಗಿ ವಾಟರ್ ಪಾರ್ಕ್ಗಳು ಮತ್ತು ಸಾರ್ವಜನಿಕ ಈಜುಗೊಳಗಳಿಂದ ದೂರವಿರಬೇಕು.

ಕೈಗಳ ನೈರ್ಮಲ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳುವ ಮತ್ತು ಮುಖವನ್ನು ಸ್ಪರ್ಶಿಸುವುದನ್ನು ತಡೆಯುವ ಹಾಗೂ ಜನರಿಂದ ಕಿಕ್ಕಿರಿದ ವಾತಾವರಣದ ಬಗ್ಗೆ ಎಚ್ಚರಿಕೆಯಿಂದ ಇರುವುದರ ಮೂಲಕ ನೀವು ನಿಮ್ಮನ್ನು ಮತ್ತು ಇತರರನ್ನು ಸೋಂಕಿನಿಂದ ರಕ್ಷಿಸಬಹುದು ಎನ್ನುತ್ತಾರೆ ದಿಲ್ಲಿಯ ಮ್ಯಾಕ್ಸ್ ಹಾಸ್ಪಿಟಲ್ ನ ನೇತ್ರಶಾಸ್ತ್ರ ವಿಭಾಗದ ಡಾ.ಪವನ ಕುಮಾರ ಜೊಹ್ರಿ.

ಮಳೆಗಾಲದಲ್ಲಿ ಕಣ್ಣಿನ ಸೋಂಕನ್ನು ನಿಭಾಯಿಸುವುದು ಹೇಗೆ?

ಹೆಚ್ಚಿನ ಪ್ರಕರಣಗಳಲ್ಲಿ ಮನೆ ಮದ್ದನ್ನೇ ಅವಲಂಬಿಸುವುದು ಸಾಲುವುದಿಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆಯಲು ನೇತ್ರತಜ್ಞರನ್ನು ಭೇಟಿಯಾಗುವುದು ಒಳ್ಳೆಯದು. ಇಂತಹ ಸಂದರ್ಭಗಳಲ್ಲಿ ಸ್ವಯಂ ಔಷಧಿ ಕೂಡ ಸೂಕ್ತವಲ್ಲ ಎಂದು ಡಾ.ದರ್ಶ್ವಾಲ್ ಹೇಳಿದರು.

ಕಣ್ಣಿನ ಸೋಂಕಿಗೆ ಚಿಕಿತ್ಸೆ

ಪ್ರಸ್ತುತ ವೈದ್ಯಕೀಯ ಶಿಫಾರಸು ಆ್ಯಂಟಿಬಯಾಟಿಕ್ (ಪ್ರತಿಜೀವಕ) ಹನಿಗಳ ಬಳಕೆಯನ್ನು ಒಳಗೊಂಡಿದೆ. ಆದರೆ ಸೋಂಕು ವೈರಲ್ ಅಥವಾ ಬ್ಯಾಕ್ಟೀರಿಯಲ್ ಆಗಿರಲಿ, ಅದರ ವಿಧಗಳು ಮತ್ತು ತೀವ್ರತೆ ಭಿನ್ನವಾಗಿರುತ್ತವೆ. ಹೀಗಾಗಿ ಕೆಲವು ಪ್ರಕರಣಗಳಲ್ಲಿ ಆ್ಯಂಟಿಬಯಾಟಿಕ್ ಡ್ರಾಪ್ಗಳಷ್ಟೇ ಸಾಕಾಗಬಹುದು, ಇತರ ಪ್ರಕರಣಗಳಲ್ಲಿ ಪರಿಣಾಮಕಾರಿ ಚಿಕಿತ್ಸೆಗಾಗಿ ಡ್ರಾಪ್ಗಳು ಮತ್ತು ಮುಲಾಮುಗಳ ಸಂಯೋಜನೆ ಅಗತ್ಯವಾಗಬಹುದು. ಅಲ್ಲದೆ ಕೆಲವು ರೋಗಿಗಳಿಗೆ ಉರಿಯೂತ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ ಎಂದು ಡಾ.ಜೊಹ್ರಿ ವಿವರಿಸಿದರು.

ರೋಗಿಗಳು ಮನೆಯಲ್ಲಿ ಏನು ಮಾಡಬೇಕು?

ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕೇವಲ ಮನೆಮದ್ದುಗಳ ಬಳಕೆ ಸಾಲುವುದಿಲ್ಲ. ಆದಾಗ್ಯೂ ದಿನಕ್ಕೆ ಕನಿಷ್ಠ ಮೂರು ಬಾರಿ ಕಣ್ಣುಗಳನ್ನು ತೊಳೆಯುವ ಸರಳ,ಆದರೆ ಅಗತ್ಯವಾಗಿರುವ ಕ್ರಮವನ್ನು ತೆಗೆದುಕೊಳ್ಳಬಹುದು. ಈ ವೇಳೆ ನೀರು ಕಣ್ಣುಗುಡ್ಡೆಗಳನ್ನು ನೇರವಾಗಿ ಸಂಪರ್ಕಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಾ.ಜೊಹ್ರಿ ಹೇಳಿದರು.

ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News