ಭಾರತಕ್ಕೆ ನೈಜ ಪುರಾವೆ ಒದಗಿಸಿಲ್ಲ : ಒಪ್ಪಿಕೊಂಡ ಜಸ್ಟಿನ್ ಟ್ರೂಡೊ
Update: 2024-10-16 22:56 IST

PC : PTI
ಒಟ್ಟಾವ : ಕೆನಡಾದ ನೆಲದಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಬಗ್ಗೆ ಭಾರತಕ್ಕೆ ನಿಜವಾದ ಪುರಾವೆಗಳನ್ನು ತನ್ನ ಸರಕಾರ ಒದಗಿಸಿಲ್ಲ. ಗುಪ್ತಚರ ವರದಿಯ ಮಾಹಿತಿಯನ್ನು ಮಾತ್ರ ಒದಗಿಸಲಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಬುಧವಾರ ಒಪ್ಪಿಕೊಂಡಿದ್ದಾರೆ.
`ವಿದೇಶಿ ಹಸ್ತಕ್ಷೇಪದ' ಕುರಿತು ವಿಚಾರಣೆ ನಡೆಸುತ್ತಿರುವ ಸಮಿತಿಯ ಎದುರು ಹಾಜರಾಗಿ ಹೇಳಿಕೆ ನೀಡಿದ ಟ್ರೂಡೊ `ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರು ಭಾಗಿಯಾಗಿರುವುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ' ಎಂದು ಪುನರುಚ್ಚರಿಸಿದರು. ತನಿಖೆಯಲ್ಲಿ ಸಹಕರಿಸುವಂತೆ ಭಾರತವನ್ನು ಕೋರಿದ್ದೆವು. ಅವರು ಪುರಾವೆಗಳನ್ನು ಕೇಳಿದರು. ಭಾರತೀಯ ಭದ್ರತಾ ಏಜೆನ್ಸಿಗಳು ಹೆಚ್ಚಿನ ತನಿಖೆ ನಡೆಸುವಂತೆ ಮತ್ತು ನಮ್ಮೊಂದಿಗೆ ಸಹಕರಿಸುವಂತೆ ನಾವು ಒತ್ತಾಯಿಸಿದೆವು. ಏಕೆಂದರೆ ಆಗ ನಮ್ಮ ಬಳಿ ಗುಪ್ತಚರ ವರದಿ ಮಾತ್ರ ಇತ್ತು' ಎಂದು ಟ್ರೂಡೊ ಹೇಳಿರುವುದಾಗಿ ವರದಿಯಾಗಿದೆ.