ಕೋವಿಡ್ ಸಂತ್ರಸ್ತರ ಬಲವಂತದ ಅಂತ್ಯಕ್ರಿಯೆ ನಡೆಸಿದ್ದಕ್ಕಾಗಿ ಮುಸ್ಲಿಮರ ಕ್ಷಮೆ ಕೋರಲಿರುವ ಶ್ರೀಲಂಕಾ ಸರ್ಕಾರ

Update: 2024-07-23 18:19 GMT

PC : hrw.org

ಕೊಲೊಂಬೊ: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಾನು ಅಳವಡಿಸಿಕೊಂಡಿದ್ದ ವಿವಾದಾತ್ಮಕ ಅಂತ್ಯಕ್ರಿಯೆ ನೀತಿಯ ಕುರಿತು ದ್ವೀಪರಾಷ್ಟ್ರದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಕ್ಷಮೆಯನ್ನು ಅಧಿಕೃತವಾಗಿ ಕೇಳಲಾಗುವುದು ಎಂದು ಮಂಗಳವಾರ ಶ್ರೀಲಂಕಾ ಸರಕಾರ ಪ್ರಕಟಿಸಿದೆ.

2020ರಲ್ಲಿ ಶ್ರೀಲಂಕಾ ಸರಕಾರವು ಕೋವಿಡ್-19 ಸಂತ್ರಸ್ತರ ಅಂತ್ಯಕ್ರಿಯೆ ನಡೆಸುವ ಸಂದರ್ಭದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ಕಡ್ಡಾಯ ಆದೇಶವನ್ನು ಹೊರಡಿಸಿತ್ತು. ಈ ಆದೇಶದ ವಿರುದ್ಧ ತೀವ್ರ ಸ್ವರೂಪದ ಅಂತಾರಾಷ್ಟ್ರೀಯ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆಬ್ರವರಿ 2021ರಲ್ಲಿ ಆ ಆದೇಶವನ್ನು ಹಿಂಪಡೆಯಲಾಗಿತ್ತು.

ಶ್ರೀಲಂಕಾ ಸರಕಾರದ ಸಚಿವ ಸಂಪುಟ ಟಿಪ್ಪಣಿಯ ಪ್ರಕಾರ, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾರ್ಚ್ 2020ರಲ್ಲಿ ಜಾರಿಗೊಳಿಸಲಾಗಿದ್ದ ನಿರ್ಧಾರಕ್ಕಾಗಿ ಮುಸ್ಲಿಂ ಸಮುದಾಯದ ಕ್ಷಮೆ ಕೋರುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.

"ಸರಕಾರದ ಪರವಾಗಿ ಎಲ್ಲ ಸಮುದಾಯಗಳ ಕ್ಷಮೆ ಕೋರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಅದರಲ್ಲಿ ಹೇಳಲಾಗಿದೆ.

ಇಂತಹ ವಿವಾದಾತ್ಮಕ ಕ್ರಮಗಳು ಮರುಕಳಿಸುವುದನ್ನು ತಡೆಯಲು ಶಾಸನವೊಂದನ್ನು ಪರಿಚಯಿಸಲೂ ಸಚಿವ ಸಂಪುಟ ನಿರ್ಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News