ಆಳಂದ | ಗ್ರಾಪಂ ಅಧ್ಯಕ್ಷರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ : ಪ್ರಕರಣ ದಾಖಲು

ಕಲಬುರಗಿ : ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಯ ನಡಗೇರಿ, ಪುತ್ರ ಮತ್ತು ಕಿರಿಯ ಸೊಸೆಯ ವಿರುದ್ಧ ಹಣದ ವಿವಾದದ ಹಿನ್ನೆಲೆಯಲ್ಲಿ ಅಧ್ಯಕ್ಷರ ಹಿರಿಯ ಸೊಸೆಯ ಸಂಬಂಧಿಕರೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಧ್ಯಕ್ಷ ಶಿವರಾಯ ನಡಗೇರಿ, ಪುತ್ರ ರಾಜು ನಡಗೇರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ವಿವರಗಳ ಪ್ರಕಾರ, ಶಿವರಾಯ ನಡಗೇರಿ ಅವರ ಹಿರಿಯ ಮಗನ ನಿಧನದ ನಂತರ ಅವರ ಸೊಸೆಯ ಬಂಧುಗಳೊಂದಿಗೆ ಹಣಕಾಸಿನ ಒಪ್ಪಂದವೊಂದು ಮಾಡಿಕೊಳ್ಳಲಾಗಿತ್ತು. ಆದರೆ, ಒಪ್ಪಂದದಂತೆ ನಿಗದಿತ ಸಮಯಕ್ಕೆ ಹಣವನ್ನು ಪಾವತಿಸದ ಕಾರಣ ಹಾಗೂ ಮೂರು ತಿಂಗಳ ಹಿಂದೆ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಹಣ ನೀಡಲಾಗಿರಲಿಲ್ಲ. ಆಕ್ರೋಶಗೊಂಡ ಸೊಸೆಯ ಕೊಡಲಂಗರಗಾ ಗ್ರಾಮದಲ್ಲಿನ ಬಂಧುಗಳೇ ಇವರ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಲ್ಲೆಯಲ್ಲಿ ಗಂಭೀರ ಗಾಯಗಳನ್ನು ಎದುರಿಸಿದ ಅಧ್ಯಕ್ಷರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.