ಕಲಬುರಗಿ | ಗಂಗಮ್ಮ ಗೊರೇಗೋಳಗೆ ಕವಿ ಚಕ್ರವರ್ತಿ ಪಂಪ ಸದ್ಭಾವನ ಪ್ರಶಸ್ತಿ ಪ್ರದಾನ

ಕಲಬುರಗಿ : ವಂದೇ ಮಾತರಂ ಲಲಿತಕಲಾ ಅಕಾಡೆಮಿಯ ವತಿಯಿಂದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ "ರಂಗ ಸಂಭ್ರಮ 2025ರ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಪ ಬಯಲು ರಂಗ ಮಂದಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಂತಹ ಸಾಧಕರನ್ನು ಸೇರಿ ಜ್ಯೋತಿ ವೃದ್ಧಾಶ್ರಮ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಗಂಗಮ್ಮ ಆರ್.ಗೊರೇಗೋಳ ಅವರಿಗೆ ಕವಿ ಚಕ್ರವರ್ತಿ ಪಂಪ ಸದ್ಭಾವನ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಗಂಗಮ್ಮ ಆರ್ ಗೊರೇಗೋಳ ಅವರು ಕಲಬುರಗಿ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಯಾವುದೇ ಸರ್ಕಾರದ ನಿರೀಕ್ಷೆಯಿಲ್ಲದೆ ನೊಂದ ಹೃದಯ ಜೀವಿಗಳಿಗೆ ಭಾಗ್ಯ ಜ್ಯೋತಿ ವೃದ್ಧಾಶ್ರಮ ಆರಂಭಿಸಿ 35 ಹಿರಿಯ ಜೀವಿಗಳಿಗೆ ಆಶ್ರಯದಾತೆಯಾಗಿದ್ದಾರೆ. ಜಿಲ್ಲೆಯಲ್ಲಿ ಹಲವಾರು ದೀನ ದಲಿತರ ಹಾಗೂ ಬಡ ಬಡ ಜನರ 40 ರಿಂದ 50 ಬಡ ವಧು-ವರರ ಮದುವೆ ಮಾಡಿಸಿದ್ದಾರೆ. ಅವರನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ವಂದೇ ಮಾತರಂ ಲಲಿತಕಲಾ ಅಕಾಡೆಮಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ಸಂತೋಷ್ ಹೆಗಡೆ, ಗೌರವಾಧ್ಯಕ್ಷ ಲೇಖಕರು, ನಿರ್ದೇಶಕರು ಸಾಹಿತಿಗಳು ಹಾಗೂ ಪತ್ರಕರ್ತ ಡಾ. ಕೆಂಚನೂರ್ ಶಂಕರ್, ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮೂರ್ತಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಐಎಎಸ್ ಅಧಿಕಾರಿ ಡಿ.ಎಸ್.ವಿಶ್ವನಾಥ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪಾಲ್ಗೊಂಡ ಎಲ್ಲರನ್ನು ಪ್ರಮಾಣ ಪತ್ರ ಎಲ್ಲರಿಗೂ ವಿತರಿಸಲಾಗಿದ್ದು, ಕಲಾವಿದರ ಪ್ರತಿಭೆಯನ್ನು ಸ್ಮರಿಸುತ್ತ ಶ್ಲಾಘಿಸಲಾಯಿತು. ವಂದೇ ಮಾತರಂ ಲಲಿತಕಲಾ ಅಕಾಡೆಮಿಯ ಈ ಉಪಕ್ರಮಕ್ಕೆ ನಗರದ ವಿವಿಧ ಸಂಘಟನೆಗಳು ಮತ್ತು ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದರು ಮಕ್ಕಳಿಂದ ಹಿಡಿದು ಯುವಕರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ತುಂಬಾ ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲಾತ್ಮಕ ಪ್ರದರ್ಶನಗಳಿಂದ ಪ್ರೇಕ್ಷಕರ ಮನಸ್ಸು ಗೆದ್ದರು. ಬಣ್ಣಬಣ್ಣದ ಸಂಗೀತ, ವಿಶಿಷ್ಟ ಸಾಂಸ್ಕೃತಿಕ ಅಂಶಗಳು ಹಾಗೂ ಸ್ಥಳೀಯ ಕಲಾವಿದರ ಶ್ರಮ ಈ ಕಾರ್ಯಕ್ರಮದ ವೈಶಿಷ್ಟ್ಯತೆಯಾಗಿತ್ತು.