ಕಲಬುರಗಿ | ಈದ್ ಉಲ್ ಫಿತ್ರ್ ಹಬ್ಬದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಭಾಗಿ

ಕಲಬುರಗಿ : ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ನಗರದಲ್ಲಿರುವ ನಾಗನಹಳ್ಳಿ ವೃತ್ತದ ಬಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ರಮಝಾನ್ ಹಬ್ಬದ ಶುಭ ಕೋರಿದರು.
ರಮಝಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವ್ರತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವ್ರತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು (ಅಲ್ಲಾಹ್ ನನ್ನು) ಸ್ಮರಿಸುತ್ತಾರೆ ಎಂದರು.
ಈದ್ ಉಲ್ ಫಿತ್ರ್ ಹಬ್ಬ ಮನುಕುಲದ ಸೌಹಾರ್ಧತೆಯನ್ನು ಸಾರುವ ಹಾಗೂ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದಾತ್ತ ಚಿಂತನೆಗಳನ್ನೊಳಗೊಂಡಿದ್ದಲ್ಲದೆ ಈ ಹಬ್ಬವು ಕೃತಜ್ಞತೆ, ಕರುಣೆ, ತ್ಯಾಗ ಮತ್ತು ದಾನಗಳ ತತ್ವಗಳನ್ನು ಹೇಳುತ್ತದೆ. ಈದ್ ಹಬ್ಬವು ನಾಡಿಗೆ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯನ್ನು ತರಲಿ ಎಂದು ಶಾಸಕರು ಹೇಳಿದರು.