ಕಲಬುರಗಿ | ಶಿಸ್ತಿಗೆ ಇನ್ನೊಂದು ಹೆಸರೇ ಪೊಲೀಸ್ ಇಲಾಖೆ : ವರಜ್ಯೋತಿ ಬಂತೇಜಿ

ಕಲಬುರಗಿ : ಇವತ್ತಿನ ಹಲವಾರು ಇಲಾಖೆಗಳಲ್ಲಿ ಅತ್ಯಂತ ಶಿಸ್ತು ಬದ್ಧತೆಯಿಂದ ಕೂಡಿದ ಇಲಾಖೆಗಳಲ್ಲಿ ಪೊಲೀಸ್ ಇಲಾಖೆ ಮೊದಲನೆಯದಾಗಿದೆ. ಶಿಸ್ತಿಗೆ ಇನ್ನೊಂದು ಹೆಸರೇ ಈ ಇಲಾಖೆಯನ್ನು ಕರೆಯಬಹುದು ಎಂದು ಅಣದೂರಿನ ವರ ಜ್ಯೋತಿ ಬಂತೇಜಿಯವರು ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆ ಮತ್ತು ಜನಕಲ್ಯಾಣ ಎಜ್ಯುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪುರಸ್ಕೃತರಿಗೆ ಹಮ್ಮಿಕೊಂಡ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿ ಮಾತನಾಡಿದರು.
ಜಿಲ್ಲೆಯ ಐದು ಜನರಿಗೆ ನಮ್ಮವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದ್ದು ನನಗೆ ಸಂತೋಷವಾಗಿದೆ, ಇವತ್ತು ಒಳ್ಳೆಯವರಿಗೆ ಒಳ್ಳೆಯವರಾಗಿ, ಕೆಟ್ಟದ್ದು ಕಂಡರೆ ಶಿಕ್ಷಿಸಿ ತಮ್ಮ ಎಡೆ ಬಿಡದ ಶಿಸ್ತು ಪರಿಪಾಲಕರು ಪೊಲೀಸರಾಗಿದ್ದಾರೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ ಉದ್ಘಾಟಿಸಿ, ಮಾತನಾಡಿದ ಅವರು, ನಮ್ಮ ಇಲಾಖೆಯ ಸೇವೆಗೆ ಸಂದ ಗೌರವವಾಗಿದೆ, ಇಂತಹ ಅಭಿನಂದನಾ ಸಮಾರಂಭದ ಕಾರ್ಯ ಮಾಡಿದ ವೇದಿಕೆಯ ಕಾರ್ಯ ಅನುಕರಣೀಯವೆಂದರು.
ಅಭಿನಂದನಾ ಭಾಷಣ ಮಾಡಿದ ಸಾಹಿತಿ ಮತ್ತು ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಮಾತನಾಡಿ, ದಕ್ಷ, ಪ್ರಮಾಣಿಕ ಸೇವೆಯನ್ನು ಮಾಡುತ್ತಾ ನಮ್ಮ ಜೀವನಕ್ಕೆ ರಕ್ಷಣೆ ನೀಡುವ ಕೆಲಸ ಮಾಡಿ, ತಮ್ಮ ಮನೆ ಮಠ, ವೈಯಕ್ತಿಕ ಜೀವನದಿಂದ ದೂರವಿದ್ದು, ಜನರ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸುರೇಶ್ ಎಸ್.ಕಾನೇಕರ, ಚಿಂಚೋಳಿ ಸರ್ಕಲ್ ಇನ್ಸ್ಪೆಕ್ಟರ್ ಕಪಿಲದೇವ ಗಢದ, ಆಳಂದ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ಮಾತನಾಡಿದರು.
ಕಪಿಲದೇವ ಗಢದ, ಜೈಶ್ರೀ ಹೊಡಲ್, ಶರಣಬಸಪ್ಪ ಕೊಡ್ಲಾ, ಜೈಭೀಮ ಝಳಕಿ, ಅಮರ ತೇಲ್ಕರ್ ಅವರಿಗೆ ಸನ್ಮಾನಿಸಿ ಗೌರವ ಪತ್ರ ನೀಡಲಾಯಿತು. ತಾಲೂಕಾಧ್ಯಕ್ಷ ಡಾ.ಸಿದ್ಧಲಿಂಗ ದಬ್ಬಾ ಸ್ವಾಗತಿಸಿದರು, ಡಾ.ಸಿದ್ದಪ್ಪ ಹೊಸ ಮನಿ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿ ಆಡಿದರು.
ಡಾ.ಶ್ರೀಮಂತ ಹೊಳ್ಕರ್ ಮತ್ತು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ವೇದಿಕೆ ಕಾರ್ಯದರ್ಶಿ ಡಾ.ಶೀಲಾದೇವಿ ಎಸ್.ಬಿರಾದಾರ ವಂದಿಸಿದರು.