ಷಡ್ಯಂತ್ರ, ಸೇಡಿನ ರಾಜಕಾರಣ ಬಿಜೆಪಿಯವರ ಚಾಳಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Update: 2024-09-17 12:31 GMT

ಕಲಬುರಗಿ : ಕಾಂಗ್ರೆಸ್ ಪಕ್ಷಕ್ಕೆ ಯಾರೊಬ್ಬರ ವಿರುದ್ಧವೂ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ. ಷಡ್ಯಂತ್ರ, ಸೇಡಿನ ರಾಜಕಾರಣ ಮಾಡುವುದು ಬಿಜೆಪಿಯವರ ಚಾಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ರೀತಿ ಕಾಂಗ್ರೆಸ್ ಷಡ್ಯಂತ್ರ ಮಾಡಿದರೆ, ಕರ್ನಾಟಕದ ಕಾರಾಗೃಹಗಳು ಸಾಕಾಗುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವರಾದವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ರಾಜಕಾರಣಿಗಳು ಎಂದ ಮೇಲೆ ನಮ್ಮನ್ನು ಸಾವಿರ ಜನ ಅನುಕರಣೆ ಮಾಡುತ್ತಾರೆ. ನಮ್ಮ ಜವಾಬ್ದಾರಿ ಏನು ಎಂದು ತಿಳಿದು ಮಾತಾಡಬೇಕು. ಹೆಣ್ಣು ಮಕ್ಕಳ ಬಗ್ಗೆ ಮಾತಾಡುವಾಗ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಅವರು ಹೇಳಿದರು.

ಘಟನೆ ನಡೆಯಬಾರದಿತ್ತು: ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಗಣೇಶ ಮಂಡಳಿಗಳಿವೆ. ಮಂಡ್ಯ ಜಿಲ್ಲೆಯ ನಾಗಮಂಗಲದಂತಹ ಘಟನೆಗಳು ಆಗಬಾರದು. ನಾನು ಯಾವುದೇ ಕೋಮಿಗಾಗಲಿ, ಯಾವುದೇ ಜಾತಿಗಾಗಲಿ ಇಂತಹ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ. ಪಕ್ಷಾತೀತವಾಗಿ ಯಾವುದೆ ಕೋಮಿನವರಾಗಲಿ ನಮ್ಮ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News