ಕಲಬುರಗಿ ಕೃಷಿ ಮಹಾವಿದ್ಯಾಲಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ

ಕಲಬುರಗಿ: ಕಲಬುರಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರ ವಿಶ್ವಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ. ಎಮ್.ಎಮ್. ಧನೋಜಿ ಅವರು, ಗ್ರಾಹಕರಿಗೆ ಜಾಗೃತಿ ಮೂಡಿಸಿ ಅವರ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಪ್ರಪಂಚದಾದಂತ್ಯ ಪ್ರತಿ ವರ್ಷವೂ ಮಾರ್ಚ್ 15ರಂದು ‘ವಿಶ್ವ ಗ್ರಾಹಕರ ದಿನ’ವನ್ನು ಆಚರಿಸುತ್ತ ಬರಲಾಗುತ್ತಿದೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಯಾವುದೇ ವಂಚನೆಗೆ ಗುರಿಯಾಗಬಾರದು, ಅವರಿಗಿರುವ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಸಿ ಕೊಡುವುದು ಈ ವಿಶ್ವ ಗ್ರಾಹಕ ಹಕ್ಕುಗಳ ದಿನದ ಉದ್ದೇಶವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರು ಗ್ರಾಹಕರ ಹಿತರಕ್ಷಣೆ ಕಾಯ್ದೆಯಡಿ ಬರುವ ಹಕ್ಕುಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ, ಖ್ಯಾತ ನ್ಯಾಯವಾದಿಗಳಾದ ವೈಜನಾಥ ಎಸ್. ಝಳಕಿ “ಗ್ರಾಹಕರು ಕಾನೂನಿನ ಅರಿವು ಹೊಂದುವುದರಿಂದ ಗ್ರಾಹಕರು ತಮಗೆ ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಪದ್ಧತಿಗಳಿಂದ ಆಗುವ ಸಮಸ್ಯೆಗಳಿಗೆ ಹಾಗೂ ನಷ್ಟಗಳಿಗೆ ಸುಲಭವಾಗಿ ಗ್ರಾಹಕರ ಆಯೋಗಗಳ ಮೂಲಕ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ನೊಂದ ಗ್ರಾಹಕರು ಗ್ರಾಹಕರ ಹಿತರಕ್ಷಣಾ ಕಾಯ್ದೆಯಡಿ ಲಭ್ಯವಿರುವ ಹಕ್ಕುಗಳ ಮೂಲಕ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಗ್ರಾಹಕರ ಆಯೋಗಗಳಿಗೆ ದೂರು ಸಲ್ಲಿಸಿ ತಮಗೆ ವ್ಯಾಪಾರಿಗಳಿಂದ ಅಥವಾ ಸೇವಾ ಸರಬರಾಜು ಮಾಡುವುವರಿಂದ ಆದ ನಷ್ಟಕ್ಕೆ ಕಡಿಮೆ ಸಮಯದಲ್ಲಿ ಸರಳವಾಗಿ ಸುಲಭವಾಗಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ರಾಜಶೇಖರ ಟಿ. ಬಸನಾಯಕ, ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ / ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.