ಕಾಸರಗೋಡು: ಬಾಲಕಿಯ ಅಪಹರಣ ಪ್ರಕರಣ; ಆರೋಪಿಯ ಬಂಧನ

Update: 2024-05-25 05:51 GMT

ಕಾಸರಗೋಡು : ಹೊಸದುರ್ಗ ಠಾಣಾ ವ್ಯಾಪ್ತಿಯ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ , ಲೈಂಗಿಕ ದೌರ್ಜನ್ಯ ನಡೆಸಿ ಕಿವಿಯೋಲೆಯನ್ನು ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡ ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದೆ .

ಮಡಿಕೇರಿ ನಾಪೋಕ್ಲು ವಿನ ಸಲೀಂ ( 39) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ . ಈತನನ್ನು ಶುಕ್ರವಾರ ರಾತ್ರಿ ಕಾಸರಗೋಡಿಗೆ ಕರೆ ತಂದಿರುವ ತನಿಖಾ ತಂಡ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ಸ್ವಂತವಾಗಿ ಮೊಬೈಲ್ ಫೋನ್ ಬಳಸದ ಈತ ಬೇರೊಬ್ಬನ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕಿಸಿದ್ದು , ಈ ನಂಬ್ರ ಕೇಂದ್ರೀಕರಿಸಿ ತನಿಖೆ ನಡೆಸಿದ ತನಿಖಾ ತಂಡ ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಾಲಕಿಯನ್ನು ಅಪಹರಿಸಿದ್ದ ದಿನ ಲಭಿಸಿದ್ದ ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈತನ ಚಲನವಲನಗಳನ್ನು ಗಮನಿಸಿದ ತನಿಖಾ ತಂಡಕ್ಕೆ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ. 

ಮೇ 15 ರಂದು ಮುಂಜಾನೆ ಪಡನಕ್ಕಾಡ್‌ ನಲ್ಲಿರುವ ಮನೆಯಿಂದ ಮಗು ಮಲಗಿದ್ದಾಗ ಅಪಹರಿಸಿದ ದುಷ್ಕರ್ಮಿಯು  ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿಕೊಂಡು ಒಂದು ಕಿಲೋಮೀಟರ್ ದೂರದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದ. ವೈದ್ಯಕೀಯ ವರದಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದೂ ದೃಢಪಟ್ಟಿ ತ್ತು

ಬಾಲಕಿಯನ್ನು ಅಡುಗೆಮನೆಯ ಬಾಗಿಲಿನಿಂದ ಕರೆದೊಯ್ದು ಹತ್ತಿರದ ಗದ್ದೆಯಲ್ಲಿ ತೊರೆದ ದುಷ್ಕರ್ಮಿಯು, ಬೆದರಿಕೆ ಹಾಕಿದ್ದ ಎನ್ನಲಾಗಿದೆ. 

 ಸಮೀಪದ ಮನೆಗೆ ತೆರಳಿ ಮಾಹಿತಿ ನೀಡಿದ ಬಾಲಕಿಯರು ತನ್ನ ಮನೆಯವರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಕರೆದೊಯ್ದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು . ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡು ಎಸ್ ಐ ಟಿ ಗೆ ತನಿಖೆ ಒಪ್ಪಿಸಲಾಗಿತ್ತು.

ಉತ್ತರ ವಲಯ ಉಪ ನಿರೀಕ್ಷಕ ಥಾಮ್ಸನ್ ಜೋಸ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ ಬಿಜೋಯ್ ನೇತೃತ್ವದ ತಂಡವು ತನಿಖೆಯ ಮೇಲ್ನೋಟ ವಹಿಸಿತ್ತು. 

20 ಸದಸ್ಯರನ್ನೊಳಗೊಂಡ ಎಸ್‌ಐಟಿ ತನಿಖಾ ತಂಡದಲ್ಲಿ ಡಿವೈಎಸ್‌ಪಿಗಳಾದ ಲತೀಶ್, ಸಿ. ಕೆ ಸುನೀಲ್‌ಕುಮಾರ್ ಮತ್ತು ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಎಂ. ಪಿ ಆಜಾದ್ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳಾದ ಅಖಿಲ್ ಮತ್ತು ಎಂಟಿಪಿ ಸೈಫುದ್ದೀನ್ ಮೊದಲಾದವರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News