ಮಂಡ್ಯ: ಕೆರಗೋಡು ಗ್ರಾಮ ಪಂಚಾಯಿತಿ ಪರವಾನಿಗೆ ಉಲ್ಲಂಘನೆ ಮಾಡಿ ಹಾರಿಸಲಾಗಿದ್ದ ಧ್ವಜ ತೆರವು ಮಾಡಿದ ಜಿಲ್ಲಾಡಳಿತ

Update: 2024-01-28 13:10 GMT

ಮಂಡ್ಯ: ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಿಸಿ ಧ್ವಜ ಸ್ತಂಭದಲ್ಲಿ ಹಾರಿಸಲಾಗಿದ್ದ ಕೇಸರಿ ಬಾವುಟವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಇಳಿಸಲಾಗಿದೆ.

ಗ್ರಾಮದ ರಂಗ ಮಂದಿರ ಬಳಿ ನೂತನವಾಗಿ ನಿರ್ಮಿಸಿದ್ದ 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿದ್ದ ಕೇಸರಿ ಬಾವುಟವನ್ನು ಸಂಘಪರಿವಾರ ಕಾರ್ಯಕರ್ತರು, ಗ್ರಾಮಸ್ಥರ ವಿರೋಧದ ನಡುವೆಯೂ ಇಳಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಹಾರಿಸಲು ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದ ಗ್ರಾಮದ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಷರತ್ತು ಉಲ್ಲಂಘಿಸಿ ಕೇಸರಿ ಧ್ವಜವನ್ನು ಹಾರಿಸಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೀಣಾ ನೇತೃತ್ವದಲ್ಲಿ ಶನಿವಾರ ಧ್ವಜ ತೆರವಿಗೆ ಮುಂದಾಗಿತ್ತು. ಸಂಘಪರಿವಾರ ಕಾರ್ಯಕರ್ತರು, ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ಕಾರ್ಯಕರ್ತರು ವಿರೋಧ ಮಾಡಿದ್ದರು. ರವಿವಾರ ಮುಂಜಾನೆ ಬಾವುಟ ತೆರವುಗೊಳಿಸಲು ಪೊಲೀಸ್ ಬಿಗಿಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಧ್ವಜ ಸ್ತಂಭ ಸುತ್ತುವರೆದ ಮಹಿಳೆಯರು,ಯುವಕರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ಅಧಿಕಾರಿಗಳು, ಕಾಂಗ್ರೆಸ್ ಸರ್ಕಾರ, ಶಾಸಕ ಗಣಿಗ ರವಿಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ತಳ್ಳಾಟ, ನೂಕಾಟ ದಿಂದ ಹಲವಾರು ಜನ ಗಾಯಗೊಂಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕೇಸರಿ ಬಾವುಟವನ್ನು ಕೆಳಗೆ ಇಳಿಸಿದರು.

ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.

ಏನಿದು ವಿವಾದ

ಕೆರಗೋಡು ಗ್ರಾಮದ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಕಳೆದ ಡಿ. 24 ರಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಟ್ರಸ್ಟ್ ಸಕ್ರಿಯವಾಗಿದ್ದು, ರಂಗಮಂದಿರದ ಆವರಣದಲ್ಲಿ ಧ್ವಜಸ್ಥಂಭ ನಿರ್ಮಿಸಲು ಅನುಮತಿ ನೀಡುವಂತೆ ಕೋರಿ ಸದರಿ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ, ಕರ್ನಾಟಕದ ಬಾವುಟ ಹಾರಿಸಲಾಗುವುದು, ಗ್ರಾಮ ಪಂಚಾಯತಿಯ ಷರತ್ತುಗಳಿಗೆ ಬದ್ಧರಾಗಿ ಇರುವುದಾಗಿ ತಿಳಿಸಿದ್ದರು.

ನಂತರದ ದಿನಗಳಲ್ಲಿ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ಕರ್ನಾಟಕದ ಕನ್ನಡ ಬಾವುಟವನ್ನು ಮಾತ್ರ ಹಾರಿಸುವುದಕ್ಕೆ ಅವಕಾಶವಿದ್ದು, ಬೇರೆ ಯಾವುದೇ ಧಾರ್ಮಿಕ ಬಾವುಟವನ್ನು ಹಾರಿಸುವಂತಿಲ್ಲ. ಧ್ವಜ ಹಾರೋಹಣ ಮಾಡುವ ಸಮಯ ಬೆಳಿಗ್ಗೆ 7 ರಿಂದ 8 ಗಂಟೆ ಬಳಿಕ ಸಂಜೆ 5.30 ರೊಳಗೆ ಇಳಿಸಬೇಕು. ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಮಾಡುವ ಸುತ್ತೋಲೆಗಳಿಗೆ ಬದ್ದರಾಗತಕ್ಕದ್ದು. ಧ್ವಜಾರೋಹಣ ಮಾಡುವ ನಾಲ್ಕು ದಿನಗಳ ಮುಂಚಿತವಾಗಿ ಗ್ರಾಮ ಪಂಚಾಯಿತಿ ಹಾಗೂ ಕೆರಗೋಡು ಪೋಲೀಸ್ ಠಾಣೆಗೆ ಮಾಹಿತಿ ನೀಡುವುದು ಎಂದು ಷರತ್ತು ವಿಧಿಸಿ ಅನುಮತಿ ನೀಡಿತ್ತು.

ಆದರೆ ಜ. 20 ರಂದು ಸಂಜೆ ಕೇಸರಿ ಬಾವುಟವನ್ನು ಹಾರಿಸಲಾಗಿದ್ದು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News