ಮೈಸೂರು | ಕಳ್ಳತನ ಆರೋಪಿಗಳ ಜೊತೆ ನಂಟು ಆರೋಪ : ಅಶೋಕಪುರಂ ಹೆಡ್‌ ಕಾನ್ಸ್ಟೇಬಲ್ ರಾಜು ಅಮಾನತು

Update: 2024-09-07 15:33 GMT

ಹೆಡ್‌ ಕಾನ್ಸ್ಟೇಬಲ್ ರಾಜು

ಮೈಸೂರು : ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಪುರಂ ಪೊಲೀಸ್ ಠಾಣೆ ಹೆಡ್‌ ಕಾನ್ಸ್ಟೇಬಲ್ ರಾಜು ಎಂಬವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಶ್ರೀರಂಗಪಟ್ಟಣ, ವಿದ್ಯಾರಣ್ಯಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳು ಪತ್ತೆಯಾಗಿದ್ದವು. ಕಳವು ಮಾಡಿದ ಮಾಲುಗಳನ್ನು ವಶಪಡಿಸಿಕೊಳ್ಳಲು ವಿಚಾರಣೆ ನಡೆಸಿದ ವೇಳೆ ಆರೋಪಿಗಳ ಜೊತೆ ಅಶೋಕಪುರಂ ಠಾಣೆಯ ಹೆಡ್‌ ಕಾನ್ಸ್ಟೇಬಲ್ ರಾಜು ನಂಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕಳ್ಳತನ ಮಾಡಿರುವ ವಸ್ತುಗಳನ್ನು ಮಾರಾಟ ಮಾಡಲು ಸಹಕರಿಸಿದ್ದ ಎಂಬ ಮಾಹಿತಿಯೂ ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.

ಈ ಆರೋಪದ ಮೇಲೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ರಾಜು ಅವರನ್ನು ಅಮಾನತು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News