ಯದುವೀರ್ ಎಸಿ ಕೊಠಡಿ ಬಿಟ್ಟು ಪ್ರಜೆಗಳಿಗಾಗಿ ಕೆಲಸ ಮಾಡಲು ಬರುವುದಾದರೆ ಸ್ವಾಗತ: ಪ್ರತಾಪ್ ಸಿಂಹ

Update: 2024-03-12 09:39 GMT

ಮೈಸೂರು, ಮಾ.12: ಅರಮನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ಇರುವ ಬದಲು ಯದುವೀರ್ ಪ್ರಜೆಗಳಿಗಾಗಿ ಕೆಲಸ ಮಾಡಲು ಬರುತ್ತೇನೆ ಎಂದರೆ ನಾನು ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ.

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಸಿಗಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜ ವೈಭೋಗವನ್ನು ಬಿಟ್ಟು ಪ್ರಜೆಗಳ ರಕ್ಷಣೆಗೆ ಬರುತ್ತೇನೆ ಎಂದರೆ ನಾನು ಸ್ವಾಗತಿಸುತ್ತೇನೆ. ಅರಮನೆ ಮತ್ತು ಸರಕಾರದ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆಯುತ್ತಿವೆ. ವಿಜಯಶ್ರೀಪುರದಲ್ಲಿ ಜನರು ಮನೆ ಕಟ್ಟಿಕೊಂಡಿರುವ ವಿಚಾರವಾಗಿ ಅರಮನೆ ಮತ್ತು ಸರಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲೂ ಅರಮನೆ ಜಾಗದಲ್ಲಿ ಪೈಪ್ ಲೈನ್ ಬರಲು ಅರಮನೆಯವರು ಅನುಮತಿ ನೀಡಿಲ್ಲ, ಸುತ್ತೂರು ರಾಜೇಂದ್ರ ಸ್ವಾಮೀಜಿ ಪುತ್ಥಳಿ ವಿಚಾರವಾಗಿ ಸುಪ್ರೀಂ ಕೋರ್ಟ್ ಗೆ ಹೋಗಿ ಅರಮನೆಯವರು ತಡೆ ತಂದಿದ್ದಾರೆ. ಯದುವೀರ್ ರಾಜಕಾರಣಕ್ಕೆ ಬಂದರೆ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಿದೆ. ಆಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದು ಜನರಿಗೆ ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ಯದುವೀರ್ ರಾಜಕೀಯಕ್ಕೆ ಬರುವುದಾದರೆ ಒಂದು ಅರಮನೆ ಉತ್ತರಾಧಿಕಾರಿಯಾಗಿ ಇರಬೇಕು ಇಲ್ಲ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಅವರು ವಿದ್ಯಾವಂತ ಬುದ್ಧಿವಂತರಿದ್ದಾರೆ. ಜನಪ್ರತಿನಿಧಿಯಾಗಿ ಬಂದರೆ ಅವರು ಜನರಿಗಾಗಿಯೇ ಇರಬೇಕಾಗುತ್ತದೆ. 1947ರಿಂದ ರಾಜಪ್ರಭುತ್ವ ಹೋಗಿ ಪ್ರಜೆಗಳ ಆಡಳಿತ ಬಂದಿದೆ. ಯದುವೀರ್ ಪ್ರಮೋದಾದೇವಿಯ ದತ್ತುಪುತ್ರರಾದರೂ ಅವರು ಪ್ರಜೆಯೇ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News