ರೇಣುಕಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್ ನಲ್ಲಿ ಇಬ್ಬರು ಆರೋಪಿಗಳ ಮಹಜರು

Update: 2024-06-18 08:11 GMT

ಮೈಸೂರು, ಜೂ.18: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಆಪ್ತರಾದ ಪ್ರಕರಣದ 11ನೇ ಆರೋಪಿ ನಾಗರಾಜ್ ಹಾಗೂ 12ನೇ ಆರೋಪಿ ಲಕ್ಷ್ಮಣ್ ನನ್ನು ಪೊಲೀಸರು ಮಂಗಳವಾರ ನಗರದ ರಾಡಿಸನ್ ಬ್ಲೂ ಪ್ಲಾಝಾ ಹೋಟೆಲ್ ಗೆ ಕರೆದುಕೊಂಡು ಬಂದು ಮಹಜರು ನಡೆಸಿದರು.

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ನಟ ದರ್ಶನ್ ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಜೂ.11ರಂದು ಆಗಮಿಸಿದ್ದರು. ಈ ವೇಳೆ ರಾಡಿಸನ್ ಬ್ಲೂ ಪ್ಲಾಝಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.

ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್ ಮತ್ತು ಇತರರು ರೂಮ್ ಗೆ ಆಗಮಿಸಿ ಕೆಲವರನ್ನು ಸಂಪರ್ಕಿಸಿ ಕೊಲೆಯಿಂದ ಹೇಗೆ ಪಾರಾಗುವ ಕುರಿತು ಇಲ್ಲೇ ಚರ್ಚೆ ನಡೆಸಿದ್ದರು. ಪ್ರಕರಣವನ್ನು ಮುಚ್ಚಿ ಹಾಕುವ ಸಂಬಂಧ 30 ಲಕ್ಷ ರೂ. ವ್ಯವಹಾರದ ಮಾತುಕತೆ ಇದೇ ಹೋಟೆಲ್ ರೂಮ್ ನಲ್ಲಿ ನಡೆಸಿತೆನ್ನಲಾಗಿದೆ.

ಈ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಮೈಸೂರಿಗೆ ಆಗಮಿಸಿದ್ದಾರೆ.

ನಟ ದರ್ಶನ್ ಬಂಧನದ ಸಂದರ್ಭ ಅವರು ಉಳಿದುಕೊಂಡಿದ್ದ ಕೊಠಡಿಯನ್ನು ಸೀಝ್ ಮಾಡಲಾಗಿತ್ತು. ಇದೀಗ ಆ ಕೋಣೆಯ ಬಾಗಿಲು ತೆರದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಟ ದರ್ಶನ್ ಅವರನ್ನು ಕರೆದುಕೊಂಡು ಬರುವ ಸಾಧ್ಯತೆ ಇತ್ತಾದರೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬಹುದು ಎಂಬ ಕಾರಣಕ್ಕೆ ಕರೆದುಕೊಂಡು ಬಂದಿಲ್ಲ ಎನ್ನಲಾಗಿದೆ. ಆದರೆ ಸ್ಥಳ ಮಹಜರಿಗೆ ದರ್ಶನ್ ಅವರನ್ನು ಕರೆದುಕೊಂಡು ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News