ಮಹಾರಾಷ್ಟ್ರ: ಮೀಸಲಾತಿ ವಿಚಾರದಲ್ಲಿ ಮರಾಠಿ ಸಂಘಟನೆಗಳಿಂದ ಬಂದ್; ಸರ್ವಪಕ್ಷ ಸಭೆ ಕರೆದ ಸರಕಾರ

Update: 2023-09-11 09:36 GMT

Photo: Twiter@NDTV

ಥಾಣೆ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸುತ್ತಿದ್ದ ಜನರ ಮೇಲೆ ಜಲ್ನಾ ಜಿಲ್ಲೆಯಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ಲಾಠಿ ಚಾರ್ಜ್ ವಿರೋಧಿಸಿ ಮರಾಠ ಸಂಘಟನೆಗಳು ಇಂದು ಬಂದ್ ಆಚರಿಸುತ್ತಿವೆ.

ಬಂದ್ (ಸ್ಥಗಿತ) ಕರೆಗೆ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣ) ನಗರ ಘಟಕದ ಮುಖ್ಯಸ್ಥ ಸುಹಾಸ್ ದೇಸಾಯಿ ಅವರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಶಿವಸೇನೆಯ (ಯುಬಿಟಿ) ನಗರ ಅಧ್ಯಕ್ಷ ಪ್ರದೀಪ್ ಶಿಂಧೆ ಕೂಡ ಈ ಬಂದ್ ಅನ್ನು ಬೆಂಬಲಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ನಾಯಕ ರವೀಂದ್ರ ಮೋರೆ ಹಾಗೂ ಅವಿನಾಶ್ ಜಾಧವ್ ಕೂಡ ತಮ್ಮ ಬೆಂಬಲವನ್ನು ನೀಡಿದರು. ಮರಾಠಾ ಕ್ರಾಂತಿ ಮೋರ್ಚಾದ ನಗರ ಮುಖಂಡ ರಮೇಶ್ ಅಂಬ್ರೆ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿಕ್ರಾಂತ್ ಚವ್ಹಾಣ್ ಕೂಡ ಬಂದ್ ಬೆಂಬಲಿಸಿ ಮಾತನಾಡಿದ್ದಾರೆ.

ಏತನ್ಮಧ್ಯೆ, ರಾಜ್ಯ ಸರಕಾರವು ಇಂದು ಮುಂಬೈನಲ್ಲಿ ಮರಾಠಾ ಮೀಸಲಾತಿ ಕುರಿತು ಸರ್ವಪಕ್ಷಗಳ ಸಭೆಯನ್ನು ಕರೆಯುತ್ತಿದೆ. ಸರ್ವಪಕ್ಷ ಸಭೆಯು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದೆ.

ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣವನ್ನು ಹಿರಿಯ ನಾಯಕ ಅಂಬಾದಾಸ್ ದಾನ್ವೆ ಪ್ರತಿನಿಧಿಸುತ್ತಾರೆ, ಆದರೆ ಸಭೆಯಲ್ಲಿ ಭಾಗವಹಿಸುವುದನ್ನು ಕಾಂಗ್ರೆಸ್ ಇನ್ನೂ ಖಚಿತಪಡಿಸಿಲ್ಲ.

ಇದಕ್ಕೂ ಮೊದಲು ಸೆಪ್ಟೆಂಬರ್ 9 ರಂದು, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಗರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ಜಲ್ನಾ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಕಳೆದ ವಾರ ನಡೆದಿದ್ದ ಲಾಠಿ ಚಾರ್ಜ್ ವಿರುದ್ಧ ಬಂದ್ ಆಚರಿಸಲಾಯಿತು. ಮರಾಠಾ ಕ್ರಾಂತಿ ಮೋರ್ಚಾದಿಂದ ಬಂದ್ ಗೆ ಕರೆ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News