ಜಾತಿ ಗಣತಿ ಯಾರಿಗೆ ಬೇಡ?
ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದ ರಾಜಕೀಯ ನಾಯಕರು ಈಗ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದಾರೆ. ಪರಸ್ಪರ ನೆಂಟಸ್ತಿಕೆಗಳು ಆಗಿವೆ. ಹೀಗೆ ಹಲವಾರು ಹೊಸ ಬೆಳವಣಿಗೆಗಳಿಂದಾಗಿ ಹಿಂದುಳಿದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಭವಿಷ್ಯ ಏನಾಗುತ್ತದೋ ಕಾದು ನೋಡಬೇಕಾಗಿದೆ.;

ಜಾತಿ ಜನಗಣತಿ ಎಂಬುದು ಯಾವುದೇ ಸಮುದಾಯವನ್ನು ಎತ್ತಿ ಕಟ್ಟಿ ಇನ್ನುಳಿದ ಸಮುದಾಯಗಳನ್ನು ಕಡೆಗಣಿಸುವುದಲ್ಲ. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿಗೆ ಸಂಬಂಧಿಸಿದ ಹಿಂದುಳಿದ ಆಯೋಗದ ಸಮೀಕ್ಷಾ ವರದಿಯನ್ನು ಜಾರಿಗೆ ತರುವುದಾಗಿ ಜನರಿಗೆ ಮಾತು ಕೊಟ್ಟವರು. ಅಧಿಕಾರ ಸೂತ್ರ ಹಿಡಿದಿದ್ದರೂ ಈ ವಿಷಯದ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದು ಅಂಗೀಕಾರ ಪಡೆಯಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿದೆ. ಈ ವಿಷಯದಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿರುವ ಮುಖ್ಯಮಂತ್ರಿಗಳು ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಬಗ್ಗೆ ಹಿಂದುಳಿದ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿ (ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ) ಸಮೀಕ್ಷಾ ಶಿಫಾರಸನ್ನು ಮಂತ್ರಿ ಮಂಡಲದ ಮುಂದಿನ ಸಭೆಯಲ್ಲಿ ತರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.
ಜಾತಿ ಜನಗಣತಿಯನ್ನು ವಿರೋಧಿಸುತ್ತಿರುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ವೀರಶೈವ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಜನಸಾಮಾನ್ಯರು ತಮ್ಮ ಪಾಡಿಗೆ ತಾವು ಸುಮ್ಮನಿದ್ದರೂ ಇವರನ್ನು ಜಾತಿ ಹೆಸರಿನಲ್ಲಿ ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಮತ್ತು ಸಕಲ ಸಂಪನ್ಮೂಲಗಳನ್ನು ಗಳಿಸಿಕೊಂಡವರು ಇದನ್ನು ವಿರೋಧಿಸುತ್ತಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ಕಾಂತರಾಜು ನೇತೃತ್ವದ ಹಿಂದುಳಿದ ಆಯೋಗ ಸಿದ್ಧಪಡಿಸಿದ ಈ ವರದಿಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸಕ್ತಿ ಹೊಂದಿದ್ದರೂ ಅವರದೇ ಪಕ್ಷದ ಪ್ರಭಾವಿ ರಾಜಕಾರಣಿಗಳು ಅಡ್ಡಗಾಲು ಹಾಕುತ್ತಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿ ನಡೆಯಲೇಬೇಕೆಂದು ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಇದು ಅಡಕವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ ಕೂಡ ಜಾತಿ ಜನಗಣತಿ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಸಿದ್ದರಾಮಯ್ಯನವರಿಗೆ ಇದು ನುಂಗಲೂ ಆಗದ, ಉಗುಳಲೂ ಆಗದ ತುತ್ತಾಗಿ ಪರಿಣಮಿಸಿದೆ.
ಇದನ್ನೆಲ್ಲ ನೋಡುವಾಗ ನನಗೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗಿನ ದಿನಗಳು ನೆನಪಿಗೆ ಬರುತ್ತವೆ. ಆಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನಕ್ಕೆ ಹೈಕೋರ್ಟ್ನ ಹಿರಿಯ ವಕೀಲ ಲಕ್ಷ್ಮ್ಮಣ ಹಾವನೂರು ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗದ ವರದಿ ಬರುವ ಮುನ್ನವೇ ರಾಜ್ಯದಲ್ಲಿ ಇದರ ವಿರುದ್ಧ ಅಪಸ್ವರ ಕೇಳಿ ಬರತೊಡಗಿತು. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ಆಗಲೂ ಇದನ್ನು ವಿರೋಧಿಸಿದವರು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ರಾಜಕೀಯ ನಾಯಕರು. ಈಗ ಶಾಮನೂರು ಅವರ ಜೊತೆಗೆ ಸೇರಿ ವಿರೋಧಿಸುತ್ತಿರುವ ಮಂತ್ರಿ ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅಗ ಹಾವನೂರು ಆಯೋಗದ ವಿರುದ್ಧ ನಡೆದ ಚಳವಳಿಯ ಮುಂಚೂಣಿಯಲ್ಲಿದ್ದರು. ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಪಟ್ಟು ಹಿಡಿದು ಜಾರಿಗೆ ತಂದರು.
ಆಗ ಹಾವನೂರು ಆಯೋಗದ ವರದಿಯನ್ನು ವಿರೋಧಿಸಿದವರು, ದೇವರಾಜ ಅರಸು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ಈಗ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಇಂಥದ್ದೇ ಆರೋಪಗಳು ಕೇಳಿ ಬರುತ್ತಿವೆ. ಜಾತಿ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಘಟಾನುಘಟಿ ನಾಯಕರು ಒಂದಾಗಿದ್ದಾರೆ. ಇವರೇನು ರಾಜಕೀಯ ನಾಯಕರೋ ತಮ್ಮ ಜಾತಿಗಳ ನಾಯಕರೋ ಎಂಬ ಸಂದೇಹ ಬರುತ್ತದೆ. ಇನ್ನು ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡಿರುವ ಯಾವುದಾವುದೋ ಅಪ್ರಸಕ್ತ ವಿಷಯಗಳನ್ನು ಕೆದಕಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಆಧುನಿಕ ಮಠಾಧೀಶರು ಈ ಬಗ್ಗೆ ಅಪ್ಪಿತಪ್ಪಿ ಮಾತಾಡುವುದಿಲ್ಲ. ಆದರೆ ಒಳಗಿಂದೊಳಗೆ ವಿರೋಧಿಸುತ್ತಾರೆ.
ಪ್ರತಿಯೊಂದು ಸಮುದಾಯದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಿ ನಿಖರ ಅಂಕಿಅಂಶಗಳ ಸಹಿತ ಸಿದ್ಧಪಡಿಸಿದ ವರದಿ ಇನ್ನೂ ಬೆಳಕಿಗೆ ಬಂದಿಲ್ಲ. ಅದನ್ನು ವಿರೋಧಿಸುತ್ತಿರುವವರು ಕೂಡ ಅದನ್ನು ಓದಿಲ್ಲ. ಆದರೂ ಅಪಸ್ವರ ತೆಗೆಯುತ್ತಿದ್ದಾರೆ.
ಈಗ ರಾಜಕಾರಣಿಗಳು ದುಡ್ಡು ಖರ್ಚು ಮಾಡಿ ಹೊಸ ಮಠಾಧೀಶರನ್ನು ಸಷ್ಟಿಸಿದ್ದಾರೆ. ಹೀಗೆ ಒಬ್ಬೊಬ್ಬ ರಾಜಕಾರಣಿಗಳು ಮಠಾಧೀಶರನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ದಾಳವನ್ನು ಉರುಳಿಸುತ್ತಿದ್ದಾರೆ. ಇದು ಎಷ್ಟು ಪರಿಣಾ ಮಕಾರಿಯಾಗಿದೆಯೆಂದರೆ ಬಿಹಾರದಲ್ಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೂಡ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದರು.ಇದರಿಂದ ಅಲ್ಪಸಂಖ್ಯಾತರ ವಿರುದ್ಧ ಹಿಂದುತ್ವದ ಹೆಸರಿನಲ್ಲಿ ಎತ್ತಿ ಕಟ್ಟಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟವರಿಗೆ ದಿಗಿಲು ಉಂಟಾಗಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಗಾಬರಿಯಿಂದ ‘ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ’ ಎಂದು ಹೇಳುತ್ತಿದ್ದಾರೆ. ಇದನ್ನು ವಿರೋಧಿಸುವವರಿಗೆ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಮಂಡಲ ಆಯೋಗದ ವರದಿಯನ್ನು ತಡೆಯಲು ಕಮಂಡಲ ರಾಜಕೀಯ ಆರಂಭಿಸಿದವರಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಶತಮಾನಗಳಿಂದ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಜಾತಿ ಗಣತಿ ಮಾಡಿದರೆ ಸಮಾಜ ವಿಭಜಿಸುವ ಕಾರ್ಯ ಎಂದು ಅಗ್ಗದ ಟೀಕೆ ಮಾಡುವ ವಿಶ್ವಗುರು ನಡೆದು ಬಂದ ಹಾದಿ ಮತ್ತು ನಂಬಿದ ಸಿದ್ಧಾಂತವೇ ಸಮಾಜ ವಿಭಜಿಸುವ ಅಪಾಯಕಾರಿ ಹಾದಿಯಾಗಿದೆ.ಹಿಂದುಳಿದವರನ್ನು ಹಿಂದುತ್ವದ ಗೂಟಕ್ಕೆ ಕಟ್ಟಿ ಹಾಕಿ ಓಟಿನ ರಾಶಿ ಮಾಡಲು ಹೊರಟವರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಜಾತಿ ಗಣತಿ ಎಂಬುದು ಸಮಾಜ ವಿಭಜಿಸುವ ಕೆಲಸವಲ್ಲ, ಒಂದುಗೂಡಿಸುವ ಕೆಲಸ ಎಂದು ತಿಳಿಸಿ ಹೇಳಬೇಕಾಗಿದೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೊದಲು ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಬೇಕು. ಕಾಂತರಾಜು ನೇತೃತ್ವದ ಆಯೋಗ ಸಮಗ್ರ ಅಧ್ಯಯನ ಮಾಡಿ ವರದಿ ನೀಡಿದೆ. ಈ ವರದಿಯನ್ನು ಸರಕಾರ ಸ್ವೀಕರಿಸಿದ ಆನಂತರ ಅದನ್ನು ಪರಿಶೀಲಿಸಿ ಸದನದಲ್ಲಿ ಚರ್ಚೆಯಾಗಿ ಎಲ್ಲರ ಅಭಿಪ್ರಾಯ ಪಡೆದು ಜಾರಿಗೆ ತರಲಾಗುತ್ತಿದೆ. ಆದರೆ ಆ ವರದಿಯೇ ಹೊರಗೆ ಬರಬಾರದು ಎಂದು ಸರಕಾರದ ಮೇಲೆ ಒತ್ತಡ ಹಾಕುವ ಪ್ರಭಾವಿ ರಾಜಕಾರಣಿಗಳು ತಮ್ಮ ಜಾತಿಯ ಮತಗಳಿಂದ ಮಾತ್ರ ಸದನಕ್ಕೆ ಆರಿಸಿ ಬಂದಿಲ್ಲ. ಹಾಗೆ ನೋಡಿದರೆ ದಾವಣಗೆರೆ ಧಣಿಗಳು ಗೆಲ್ಲುವ ದಾವಣಗೆರೆ ಮತಕ್ಷೇತ್ರದಲ್ಲಿ ಅವರ ಜಾತಿಯವರಿಗಿಂತ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನ್ಯಾಯವಾಗಿ ಒಂದು ಸಲವಾದರೂ ಮುಸ್ಲಿಮ್ ಸಮುದಾಯದ ಪ್ರತಿನಿಧಿ ಇಲ್ಲಿಂದ ಗೆದ್ದು ಬರಬೇಕಾಗಿತ್ತು. ಆದರೆ ಅವರು ಅದಕ್ಕೆ ಆಸೆ ಪಡದೆ ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಏಕೈಕ ಕಾರಣಕ್ಕಾಗಿ ಧಣಿಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ತಾವು ತಮ್ಮ ಜಾತಿಯ ನಾಯಕರು ಮಾತ್ರವಲ್ಲ ಎಲ್ಲ ಸಮುದಾಯಗಳ ನಾಯಕರು ಎಂಬ ವಿಶಾಲ ಮನಸ್ಸು ನಮ್ಮ ನಾಯಕರಿಗಿರಬೇಕು. ಬಾಯಿ ಬಿಟ್ಟರೆ ಬಸವಣ್ಣನವರ ಹೆಸರನ್ನು ಹೇಳುವ ಇವರು ತಮ್ಮ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಹಿಂದುಳಿದ ಆಯೋಗದ ವರದಿಯನ್ನು ವಿರೋಧಿಸುತ್ತಿದ್ದಾರೆ.
ಒಂದೆಡೆಯಿಂದ ವಿರೋಧ ಬರುತ್ತಿದ್ದರೆ, ಇನ್ನೊಂದೆಡೆ ಎಚ್. ಶಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ಅಹಿಂದ ವರ್ಗಗಳು ಒತ್ತಾಯ ತರುತ್ತಿವೆ. ಇನ್ನೊಂದೆಡೆ ‘ಈ ವರದಿಯನ್ನು ಸ್ವೀಕರಿಸಿದರೆ ಹುಷಾರ್, ಈ ಹಿಂದೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆದಂತೆ ಶೇ.100ರಷ್ಟು ತೊಂದರೆ ಆಗಲಿದೆ’ ಎಂದು ದಾವಣಗೆರೆಯ ಧಣಿಗಳು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರು ಹಾವನೂರು ಆಯೋಗದ ವರದಿಯನ್ನು ಸ್ವೀಕರಿಸಿದಾಗ ಅವರ ಬೆಂಬಲಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜನವರ್ಗಗಳಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.ಆಗ ಹೆಸರಿಗೆ ಮಾತ್ರವಿದ್ದ ಬಿಜೆಪಿ ಈಗ ಪ್ರಬಲವಾಗಿದೆ. ಬಿಜೆಪಿ ಈ ಅಹಿಂದ ಓಟ್ ಬ್ಯಾಂಕ್ನ್ನು ಒಡೆದು ಛಿದ್ರಗೊಳಿಸಿದೆ. ಅದು ಪ್ರಯೋಗಿಸಿದ ಮನುವಾದಿ, ಕೋಮುವಾದಿ ಹಿಂದುತ್ವದ ಅಸ್ತ್ರದಿಂದಾಗಿ ಶೋಷಿತ ಸಮುದಾಯಗಳು ಒಂದಾಗಿ ಉಳಿದಿಲ್ಲ. ಆದರೂ ಕೋಮುವಾದಿಗಳನ್ನು ಹಿಮ್ಮ್ಮೆಟ್ಟಿಸಿ ಗೆಲ್ಲುವ ಮತ್ತು ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವಿರುವುದು ಸಿದ್ದರಾಮಯ್ಯನವರಿಗೆ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಈ ಗದ್ದಲದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರು ಏನನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ನಿರಂತರವಾಗಿ ನಿತ್ಯವೂ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸುತ್ತಾ, ಬದುಕಲು ಬಿಟ್ಟರೆ ಸಾಕೆಂಬ ಅಸಹಾಯಕತೆಯಲ್ಲಿ ಅವರಿದ್ದಾರೆ. ಸಾಚಾರ್ ವರದಿಯ ನೆನಪು ಯಾರಿಗೂ ಇಲ್ಲ. ಯು.ಟಿ. ಖಾದರ್ ಸ್ಪೀಕರ್ ಸ್ಥಾನ ಸಿಕ್ಕಿದ್ದನ್ನೇ ಬಂಗಾರ ಸಿಕ್ಕಂತೆ ಎಂದು ಸಂಭ್ರಮಿಸುತ್ತಿದ್ದಾರೆ. ದಲಿತರನ್ನು ಎಡ-ಬಲಗಳನ್ನಾಗಿ ಒಡೆಯಲಾಗಿದೆ. ಹಿಂದುಳಿದ ವರ್ಗಗಳಲ್ಲಿ ಹಾಲುಮತ ಸಮುದಾಯ ಮಾತ್ರ ಸಿದ್ದರಾಮಯ್ಯನವರ ಜೊತೆ ಗಟ್ಟಿಯಾಗಿ ನಿಂತಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ಜಾತಿ ಗಣತಿ ವರದಿಯನ್ನು ಸ್ವೀಕರಿಸಿ ಅದನ್ನು ಜಾರಿಗೆ ತರುವುದು ಸುಲಭವಲ್ಲ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದ ರಾಜಕೀಯ ನಾಯಕರು ಈಗ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡು ರಾಜಿ ಮಾಡಿಕೊಂಡಿದ್ದಾರೆ. ಪರಸ್ಪರ ನೆಂಟಸ್ತಿಕೆಗಳು ಆಗಿವೆ. ಹೀಗೆ ಹಲವಾರು ಹೊಸ ಬೆಳವಣಿಗೆಗಳಿಂದಾಗಿ ಹಿಂದುಳಿದ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಭವಿಷ್ಯ ಏನಾಗುತ್ತದೋ ಕಾದು ನೋಡಬೇಕಾಗಿದೆ. ಅಕಸ್ಮಾತ್ ಹಿಂದುಳಿದ ಸಮುದಾಯಗಳು ಒಂದಾಗಿ ಪಟ್ಟು ಹಿಡಿದರೆ ಯಶಸ್ವಿಯಾಗಬಹುದು.