ಸಿಂಧನೂರು | ಮೇ.8 ರಿಂದ 11 ರವರೆಗೆ ಸಾರ್ವಜನಿಕ ಕುರ್‌ಆನ್‌ ಪ್ರವಚನ ಆರಂಭ

Update: 2025-03-20 17:23 IST
ಸಿಂಧನೂರು | ಮೇ.8 ರಿಂದ 11 ರವರೆಗೆ ಸಾರ್ವಜನಿಕ ಕುರ್‌ಆನ್‌ ಪ್ರವಚನ ಆರಂಭ
  • whatsapp icon

ಸಿಂಧನೂರು : ಸಿಂಧನೂರು ನಗರದ ಆರ್.ಜಿ.ಎಂ. ಶಾಲಾ ಮೈದಾನದಲ್ಲಿ ಮೇ 8 ರಿಂದ 11ರವರೆಗೆ ಸಾರ್ವಜನಿಕ ಕುರ್‌ಆನ್‌ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಹಾಗೂ ಪ್ರವಚನ ಸಮಿತಿಯ ಕೋಶಾಧ್ಯಕ್ಷ ಎಂ.ಆರ್.ಬೇಗ ಹೇಳಿದರು.

ಅವರು ಬುಧವಾರ ಸಂಜೆ ಹಳೆ ಬಜಾರದಲ್ಲಿರುವ ಮಸ್ಟಿದ್‌ನಲ್ಲಿ ಸಾರ್ವಜ ನಿಕ ಕುರ್‌ಆನ್‌ ಪ್ರವಚನದ ಸ್ವಾಗತ ಸಮಿತಿಯ ಪ್ರಥಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಎಲ್ಲ ಧರ್ಮಗಳ ಸಾರವು ಒಂದೇ. ಎಲ್ಲವೂ ಮನುಷ್ಯತ್ವವನ್ನು ಹಾಗೂ ಮಾನವೀಯತೆಯನ್ನು ಪ್ರತಿಪಾದಿಸುವ ಉದ್ದೇಶಗಳನ್ನು ಹೊಂದಿವೆ. ವೇದಗಳು, ಪುರಾಣಗಳು, ಭಗವದ್ಗೀತೆ, ಕುರ್‌ಆನ್‌, ಬೈಬಲ್‌ ಎಲ್ಲವನ್ನು ಸಂತರು, ಮಹಾಂತರು, ದೇವಮಾನವರು ಮಾನವೀಯತೆ ನೆಲಗಟ್ಟಿನಲ್ಲಿ ರಚಿಸಿದ್ದಾರೆ.

ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮ ಗಳ ಸಾರವನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಅವುಗಳಲ್ಲಿ ಸಂಶಯಗಳಿದ್ದರೆ ಪರಿಹರಿಸಿಕೊಳ್ಳಬೇಕು. ಅನ್ಯ ಧರ್ಮ ಹಾಗೂ ಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ಕಷ್ಟದಲ್ಲಿರುವರಿಗೆ ಸಹಾಯ, ಸಹಕಾರ ನೀಡಬೇಕು ಎಂದರು. ಮೊದಲು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದನ್ನು ಎಲ್ಲರೂ ಕಲಿಯಬೇಕು ಎಂದರು.

ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಹುಸೇನ್ ಸಾಬ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಕುರ್‌ಆನ್‌ ಪ್ರವಚನವನ್ನು ಸಿಂಧನೂರಿನಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲ ಸಮಾಜದ ವರ, ಮುಖಂಡರ, ಸಹಾಯ -ಸಹಕಾರ ಇದೆ. ಎಲ್ಲರೂ ಸೇರಿ ಈ ವರ್ಷ ಇನ್ನಷ್ಟು ವಿಶೇಷ ಕಾರ್ಯಕ್ರಮಗಳೊಡನೆ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದವರಿಗೆ ಸನ್ಮಾನ, ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವಸ್ತು ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮ ಗಳನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಪ್ರವಚನದ ಯಶಸ್ವಿಗಾಗಿ ಈಗಾಗಲೇ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಸಮಿತಿಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸಿಂಧನೂರಿನ ಎಲ್ಲ ಗಣ್ಯ ಮಾನ್ಯರು ವಿವಿಧ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಮಾಧ್ಯಮದ ಸ್ನೇಹಿತರು ಸೇರಿದಂತೆ ಇರುವರು ಎಂದು ವಿವರಿಸಿದರು.

ಈ ಕಾರ್ಯಕ್ರಮಕ್ಕೆ ಎಲ್ಲರೂ ತಮ್ಮ ಶಕ್ತಿಯ ಅನುಸಾರ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ ಭಾವೈಕ್ಯ ಗೀತೆಯನ್ನು ಪ್ರಸ್ತುತಪಡಿಸಿದರು.

ಸಭೆಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಶರಣೇಗೌಡ, ಗೌರವಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಕೆ.ಜಿಲಾನಿ ಪಾಷಾ,ಮುಖಂಡರಾದ ಜಾಫರ್‌ ಜಾಗೀದಾರ್ರ, ಕೆ.ಮರಿಯಪ್ಪ, ಎನ್‌.ಶಿವನ ಗೌಡ, ಅಲ್ಲಮಪ್ರಭು, ಸ್ವಾಗತ ಸಮಿತಿಯ ಸದಸ್ಯರಾದ ಎಂ.ಡಿ.ನದೀಮಮುಲ್ಲಾ, ಪ್ರಹ್ಲಾದ ಗುಡಿ ವಕೀಲ, ಹಾರೂನ್ ಪಾಷಾ ಜಾಗೀದಾರ್ರ, ಆಬೀದ್ ಖಾದ್ರಿ, ಶಫಿ ಉಲ್ಲಾ ಖಾನ್, ನಾಗರಾಜ ಸಜ್ಜನ ಡಾಕ್ಟರ್ ಹುಸೇನಪ್ಪ ಅಮರಾಪುರ ಸೇರಿದಂತೆ ಅನೇಕರು ಇದ್ದರು. ನೂರುದ್ದೀನ್ ಉಪನ್ಯಾಸಕರು ಐಟಾ ಅದ್ಯಕ್ಷರು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News