ವೇದಿಕೆಯಲ್ಲೇ ಜೆಡಿಎಸ್ ಶಾಸಕಿಗೆ ಕಾಂಗ್ರೆಸ್‌ ಸೇರಲು ಆಹ್ವಾನ ನೀಡಿದ ಸಚಿವ ಮಧು ಬಂಗಾರಪ್ಪ!

Update: 2025-03-23 21:48 IST
ವೇದಿಕೆಯಲ್ಲೇ ಜೆಡಿಎಸ್ ಶಾಸಕಿಗೆ ಕಾಂಗ್ರೆಸ್‌ ಸೇರಲು ಆಹ್ವಾನ ನೀಡಿದ ಸಚಿವ ಮಧು ಬಂಗಾರಪ್ಪ!
  • whatsapp icon

ಶಿವಮೊಗ್ಗ: ತಾಲೂಕಿನ ಬಾರೆಹಳ್ಳ ಹಾಗೂ ಹಾಯ್ ಹೊಳೆ ಡ್ಯಾಂ ಅಭಿವೃದ್ಧಿ ಹಾಗೂ ಪುರದಾಳು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವಿವಾರ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಇಂಗ್ಲಿಷ್ ಗಾದೆ ಮೂಲಕ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರನ್ನು ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು.

ಶಾರದಾ ಪೂರ್ಯಾನಾಯ್ಕ ಅವರು ನನ್ನ ಮೇಲೆ ಬಹಳ ಪ್ರೀತಿ ತೋರುತ್ತಾರೆ. ಆದರೆ ಚುನಾವಣೆ ಬಂದಾಗ ಬಹಳ ಕಷ್ಟ ಆಗುತ್ತದೆ. ಈಗ ಅಧಿಕಾರ ನಮ್ಮ ಬಳಿ ಇದೆ. ಹಾಗಾಗಿ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುತ್ತಿದ್ದೇನೆ. ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು, ಬಿಸಿಲಿದ್ದಾಗ ಹುಲ್ಲು ಒಣಗಿಸಿಕೊಳ್ಳಬೇಕು ಅಂತ. ಈಗ ಬಿಸಿಲು ಇದೆ ಅಕ್ಕ ತೀರ್ಮಾನ ಮಾಡಿ ಎಂದು ಶಾರದಾ ಪೂರ್ಯಾನಾಯ್ಕ ಅವರಿಗೆ ʼಆಫರ್ʼ ನೀಡಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸೌಲಭ್ಯ ನೀಡುವುದು ಸರಕಾರದ ಕರ್ತವ್ಯ. ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ ಕಟ್ಟಲಾಗಿದ್ದ ಡ್ಯಾಂ ಅತಿಯಾದ ಮಳೆಯಿಂದ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸಿ ಈಗ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಸಚಿವನಾಗಿ ನನ್ನ ಮೇಲಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿರುವುದರಿಂದ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮಕ್ಕಳಿಗೆ ಪದೇ ಪದೇ ರಜೆ ಮಾಡಿಸಿ ಶಿಕ್ಷಣಕ್ಕೆ ಕೊರತೆಯಾಗುವಂತೆ ಪೋಷಕರು ಮಾಡಬಾರದು. ಪದೇ ಪದೇ ರಜೆಗೆ ಕಡಿವಾಣ ಹಾಕಲು ಫೇಸ್ ಅಟೆಂಡೆನ್ಸ್ ಯೋಜನೆ ಜಾರಿಗೆ ತರಲು ಯೋಜಿಸಲಾಗುತ್ತಿದೆ ಎಂದರು.

ಗ್ರಾಮಗಳಲ್ಲಿ ದೇವಸ್ಥಾನ ದೊಡ್ಡದಾಗಿ ಕಟ್ಟಿಸುವ ಬದಲು ಶಾಲೆಗಳನ್ನು ದೊಡ್ಡದಾಗಿ ಕಟ್ಟಿ.ಶಾಲೆಗಳನ್ನು ದೊಡ್ಡದಾಗಿ ಕಟ್ಟಿಸಿದರೆ ದೇವರೂ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಶರಾವತಿ ಮುಳುಗಡೆ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಬಾರೆಹಳ್ಳ ಹಾಗೂ ಹಾಯ್ ಹೊಳೆ ಡ್ಯಾಂ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಸರಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಪುರದಾಳು ಗ್ರಾಪಂ ಉಪಾಧ್ಯಕ್ಷ ಎಚ್.ಎಸ್. ಪ್ರದೀಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ, ಜಿ.ಡಿ. ಮಂಜುನಾಥ್, ಡಾ. ಶ್ರೀನಿವಾಸ್ ಕರಿಯಣ್ಣ, ವೈ.ಎಚ್. ನಾಗರಾಜ್, ಪುರದಾಳು ಹಾಗೂ ಅಗಸವಳ್ಳಿ ಗ್ರಾಪಂ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಮೋಸವಾಗಲು ಬಿಡುವುದಿಲ್ಲ.ಸಂತ್ರಸ್ತರ ಪರವಾಗಿ ರಾಜ್ಯ ಸರಕಾರವೇ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಕೂಡ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಪಕ್ಷಾತೀತವಾಗಿ ಸಹಕಾರ ನೀಡಲಾಗುತ್ತಿದೆ.

-ಮಧು ಬಂಗಾರಪ್ಪ, ಸಚಿವ




 



 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News