ಕಸ್ತೂರಿ ರಂಗನ್ ವರದಿ ಪರಿಷ್ಕರಿಸದೆ ಜಾರಿಗೊಳಿಸಬಾರದು : ಸಚಿವ ಮಧು ಬಂಗಾರಪ್ಪ

Update: 2024-09-03 17:55 GMT

ಶಿವಮೊಗ್ಗ: ಕೇರಳದ ವಯನಾಡು ಗುಡ್ಡ ಕುಸಿತ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಕೇಂದ್ರ ಸರಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಇದು ಪರಿಷ್ಕರಣೆಗೆ ಒಳಪಡದೆ ಜಾರಿಗೊಂಡರೆ ಅರಣ್ಯ ಪ್ರದೇಶ ನಿವಾಸಿಗಳು ಊರು ಬಿಡುವ ಸ್ಥಿತಿ ಎದುರಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಿಂದ ಅರಣ್ಯ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ಕಾನೂನು ತೊಡಕಾಗಲಿದೆ. ಅದೇ ರೀತಿ ಜನರು ಸಂಜೆ 6 ಗಂಟೆಯೊಳಗೆ ಮನೆ ಸೇರಬೇಕಾಗುತ್ತದೆ. ಇಲ್ಲವಾದರೆ ಊರನ್ನೇ ಬಿಡುವ ಸಂದರ್ಭ ಎದುರಾಗಬಹುದು. ಆದ್ದರಿಂದ ಈ ವರದಿಯನ್ನು ಪುನಃ ಪರಿಷ್ಕರಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷಾತೀತವಾಗಿ ಎಲ್ಲರನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ ಮಾದರಿ ಕೆಲವು ಬದಲಾವಣೆ ತಂದು ಜಾರಿಗೊಳಿಸಿದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಶಾಲೆ ನಮ್ಮ ಜಬಾಬ್ದಾರಿ’ ಒಂದು ಅತ್ಯುತ್ತಮ ಕಾರ್ಯಕ್ರಮ. ರಾಜ್ಯದಲ್ಲಿ ಪ್ರಸಕ್ತ 22 ಸಾವಿರ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. 50 ಸಾವಿರ ಹಳೇ ವಿದ್ಯಾರ್ಥಿ ಸಂಘ ಇದೆ. ಎಲ್ಲರೂ ತಾವು ಓದಿದ ಶಾಲೆ ಬಗ್ಗೆ ಒಂದು ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿಗೆ ಸಹಕರಿಸಿದರೆ ಒಳಿತು. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಮೂಲಕ 2,500 ಕೋಟಿ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಕುವೆಂಪು ವಿವಿ ಆಡಳಿತ ವ್ಯವಸ್ಥೆ ಕುಸಿತ; ಜಿಲ್ಲೆಯ ಕಿರೀಟವಾಗಿರುವ ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ಮಕ್ಕಳ ಭವಿಷ್ಯವನ್ನು ಬೀದಿಗೆ ತರಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸರಕಾರದಿಂದ ಅನುದಾನ ಬಿಡುಗಡೆಗೊಳ್ಳುವ ಮುನ್ನ ಕುವೆಂಪು ವಿವಿಗೆ ಸರ್ಜರಿಯ ಅಗತ್ಯವಿದೆ. ಮಕ್ಕಳ ಭವಿಷ್ಯ ಉಳಿವಿಗೆ ವಿವಿ ಉಳಿಸಬೇಕಿದೆ. ಇಲ್ಲಿನ ಅವ್ಯವಸ್ಥೆ, ಅಕ್ರಮ ವಿಚಾರ ಕುರಿತ ಮಾಹಿತಿ ಇದೆ. ಇದೆಲ್ಲದಕ್ಕೂ ಮುಂದಿನ ದಿನದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೆ.5ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಮೂಲಭೂತ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಪ್ರತಿಭಟಿಸುವ ಅನಿವಾರ್ಯ ವಿವಿಗಳಿಗೆ ಬರಬಾರದು. ಇಲ್ಲಿನ ವಿದ್ಯಾರ್ಥಿಗಳಿಗೆ ಏಕೀಕೃತ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್)ಯಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಫಲಿತಾಂಶ ಸೇರಿದಂತೆ ಅಂಕಪಟ್ಟಿ ವಿತರಣೆ ವಿಳಂಬ, ಹೀಗೆ ಅನೇಕ ತೊಡಕುಗಳು ಇವೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರ ಗಮನಕ್ಕೆ ತಂದು ಸೆ.5ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ ಚಿಮಣೂರು, ಡಾ.ಶ್ರೀನಿವಾಸ ಕರಿಯಣ್ಣ, ನಾಗರಾಜ ಗೌಡ,ಜಿ.ಡಿ.ಮಂಜುನಾಥ, ರಮೇಶ್ ಶಂಕರಘಟ್ಟ, ಶಾಂತವೀರ ನಾಯ್ಕ್, ಗಣಪತಿ, ಬಿ.ಕೆ.ಮೋಹನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News