ಶಿವಮೊಗ್ಗ | ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2024-02-12 17:24 GMT

 ಶಿವಮೊಗ್ಗ: ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಹರಿಗೆಯ ಯುವಕ ಮತ್ತು ಆತನ ಸ್ನೇಹಿತರಿಗೆ 89 ಲಕ್ಷ ರೂ. ಹಣ ವಂಚಿಸಿರುವ ಘಟನೆ ನಡೆದಿದೆ.

ಹರಿಗೆಯ ಯುವಕನೊಬ್ಬನಿಗೆ (ಹೆಸರು ಗೌಪ್ಯ) ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒರಿಸ್ಸಾ ಮೂಲದ ಸೂರ್ಯಂಶ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ರಾಕೇಶ್ ಶಿವಮೊಗ್ಗದಲ್ಲಿರುವ ತನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹರಿಗೆಯ ಯುವಕ ತನ್ನ ಹಲವು ಸ್ನೇಹಿತರ ರೆಸ್ಯೂಂಗಳನ್ನು ಸೂರ್ಯಂಶ್‌ಗೆ ಕಳುಹಿಸಿದ್ದ. ಆದರೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ಹಣ ನೀಡಬೇಕು. ಇದಕ್ಕೆ ಪ್ರತಿಯಾಗಿ ಪ್ರತಿಷ್ಠಿತ ಕಂಪನಿಯಿಂದ ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ ಎಂದು ಸೂರ್ಯಂಶ್ ನಂಬಿಸಿದ್ದ. ಇದರಿಂದ ಹರಿಗೆಯ ಯುವಕ ವಿವಿಧ ಬ್ಯಾಂಕ್ ಖಾತೆಗಳಿಂದ ಸೂರ್ಯಂಶ್ ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 89 ಲಕ್ಷ ರೂ. ಹಣ ಕಳುಹಿಸಿದ್ದ ಎನ್ನಲಾಗಿದೆ.

ಈತನಕ ಸೂರ್ಯಂಶ್ ಕಡೆಯಿಂದ ಉದ್ಯೋಗವು ಸಿಕ್ಕಿಲ್ಲ, ಲ್ಯಾಪ್‌ಟಾಪ್ ಕೂಡ ಕೊಡಿಸಿಲ್ಲ. ಕರೆ ಮಾಡಿದರೆ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿ ಹರಿಗೆಯ ಯುವಕ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News