ಶಿವಮೊಗ್ಗ: ಬಿಕ್ಕೋನಹಳ್ಳಿಯಲ್ಲಿ ನರಬಲಿ ಪಡೆದಿದ್ದ ಚಿರತೆಯ ಸೆರೆ

Update: 2023-08-19 07:23 GMT

ಶಿವಮೊಗ್ಗ, ಆ.19: ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಹಿಳೆಯೊಬ್ಬರ ಮೇಲೆ ಎರಗಿ ಕೊಂದು ಹಾಕಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಬೇಟೆಯಾಡಲು ಅಂದಿನಿಂದಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.

ಶುಕ್ರವಾರ ಬನ್ನಿಕೆರೆಯ ಹೊಲದಲ್ಲಿ ಕಳೆ ಕೀಳಲು ತೆರಳಿದ್ದ ಯುವಕನೋರ್ವನಿಗೆ ಚಿರತೆ ಕಾಣಿಸಿಕೊಂಡಿತ್ತು. ಆ ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ. ಇದು ಮಹಿಳೆಯನ್ನು ಬಲಿ ಪಡೆದ ಅದೇ ಚಿರತೆ ಎನ್ನಲಾಗಿದೆ.

ಸೆರೆಹಿಡಿದ ಚಿರತೆಯನ್ನು ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸಾಗಿಸಿದ್ದಾರೆ.

ಚಿರತೆ ಸೆರೆಯಿಂದ ಬಿಕ್ಕೋನಹಳ್ಳಿ, ಬೀರನಕೆರೆ, ಕೊಮ್ಮನಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News