ಶಿವಮೊಗ್ಗ | ಪ್ರಿಯತಮೆಯ ಕತ್ತು ಹಿಸುಕಿ ಹತ್ಯೆ ಪ್ರಕರಣ : ಎಸ್ಪಿ ಹೇಳಿದ್ದೇನು?

Update: 2024-07-25 17:41 GMT

ಸೃಜನ್/ಸೌಮ್ಯಾ

ಶಿವಮೊಗ್ಗ : ಪ್ರಿಯತಮೆಯ ಕತ್ತು ಹಿಸುಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸೌಮ್ಯಾಳನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಸೃಜನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಮ್ಯಾಳನ್ನು ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸೃಜನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ವರ್ಷಗಳ ಹಿಂದೆ ಇಬ್ಬರ ನಡುವೆ ಪರಿಚಯವಾಗಿ ಸಲುಗೆಯಿಂದ ಪ್ರೀತಿ ಬೆಳೆದಿತ್ತು ಎಂದರು.

ಇತ್ತೀಚೆಗೆ ಸಾಗರಕ್ಕೆ ವರ್ಗಾವಣೆಗೊಂಡಿದ್ದ ಸೃಜನ್‌ಗೆ ಬೇರೆ ಹುಡುಗಿ ಜತೆ ಸಲುಗೆ ಬೆಳೆದಿತ್ತು. ಆ ಕಾರಣದಿಂದ ಸೌಮ್ಯಾ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದಳು. ಸೌಮ್ಯಾ ಕೊಪ್ಪದಿಂದ ಸಾಗರಕ್ಕೆ ಬಂದು ಹೋಗುತ್ತಿದ್ದಳು. ಸೃಜನ್ ಬೇರೆ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ಸೌಮ್ಯಾ ವಿರೋಧಿಸಿದ್ದಳು. ಸೃಜನ್ ಸಾಗರದಿಂದ ಸೌಮ್ಯಾಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ದಾರಿಯುದ್ದಕ್ಕೂ ಜಗಳ ಮಾಡಿಕೊಂಡು ಬಂದಿದ್ದಾರೆ. ಕೋಪದಿಂದ ಸೌಮ್ಯಾಳಿಗೆ ಹೊಡೆದಿದ್ದು ಆಕೆ ಕೆಳಕ್ಕೆ ಬಿದ್ದ ನಂತರ ಕಾಲಿನಿಂದ ಕುತ್ತಿಗೆಗೆ ತುಳಿದಿದ್ದಾನೆ. ಸಾವನ್ನಪ್ಪಿದ ನಂತರ ಸಾಗರಕ್ಕೆ ಬಂದು ಕಾರು ತೆಗೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಮೃತದೇಹ ತಂದು ಜಲಜೀವನ್ ಕಾಮಗಾರಿಯ ಕಾಲುವೆಯಲ್ಲಿ ಹೂತಿಟ್ಟಿದ್ದಾನೆ. ಈಗ ಕುಟುಂಬಸ್ಥರು ಎಸಿ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆಯಲಾಗಿದೆ ಎಂದು ತಿಳಿಸಿದರು.

ಸೌಮ್ಯಾ ಕೊಪ್ಪ ತಾಲೂಕಿನ ಗುಣವಂತೆ ಸಮೀಪ ಹಚ್ಚರಡಿ ಗ್ರಾಮದವಳಾಗಿದ್ದು, ನರ್ಸಿಂಗ್ ಕಲಿಯುತ್ತಿದ್ದ ಸೌಮ್ಯಾ ಜು.2ರಂದು ಕಾಣೆಯಾಗಿದ್ದು, ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News