ಕೊರೊನ ಕಾಲದಲ್ಲಿ ಬಿಜೆಪಿ ಸರಕಾರದಿಂದ ನಡೆದಿತ್ತು ಭಾರೀ ಗೋಲ್ ಮಾಲ್ : ಯತ್ನಾಳ್

Update: 2024-01-09 07:01 GMT
Editor : Ismail | Byline : ಆರ್. ಜೀವಿ

ಬಿಜೆಪಿಯ ಯತ್ನಾಳ್ ಈಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ತಮ್ಮದೇ ಪಕ್ಷದ ಈ ಹಿಂದಿನ ಸರಕಾರದ ವಿರುದ್ಧ ಭಾರೀ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಯತ್ನಾಳ್ ಕೋಮು ಪ್ರಚೋದಕ ಹೇಳಿಕೆ ನೀಡಿದರೆ ಅದಕ್ಕೆ ಯರ್ರಾಬಿರ್ರಿ ಪ್ರಚಾರ ಕೊಡುವ ಟಿವಿ ಚಾನಲ್ ಗಳು ಹಾಗು ಪತ್ರಿಕೆಗಳು ಈ ಸುದ್ದಿಗೆ ಯಾವುದೇ ಪ್ರಾಮುಖ್ಯತೆ ಕೊಡಲೇ ಇಲ್ಲ. ಅದ್ಯಾಕೋ ಗೊತ್ತಿಲ್ಲ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ ಕೆ ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದಾಗ ಕೋವಿಡ್ ಹಗರಣ ಬಹಳ ದೊಡ್ಡ ಸುದ್ದಿ ಮಾಡಿತ್ತು. ಹಿಂದಿನ ಸರ್ಕಾರದಲ್ಲಿ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಾರ್ವಜನಿಕ ಹಣ ದುರುಪಯೋಗದ ಆರೋಪ ಕೇಳಿಬಂದಿತ್ತು. ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಆಗಿನ ಆಡಳಿತ ಪಕ್ಷದ ವಿರುದ್ಧ ಪ್ರಮುಖ ಅಸ್ತ್ರವಾಗಿ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದನ್ನು ಬಳಸಿಕೊಂಡಿತ್ತು. ಆಡಳಿತಾರೂಢ ಬಿಜೆಪಿ ವಿರುದ್ಧ- ಬಿಜೆಪಿ ಅಂದ್ರೆ ಭ್ರಷ್ಟಾಚಾರ , 40% ಸರ್ಕಾರ ’ ಅಭಿಯಾನ ಆರಂಭಿಸಿ ರಾಜ್ಯದ ಜನರಿಗೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿತ್ತು.

ಅದರ ಭಾಗವಾಗಿಯೇ ಪೇಸಿಎಂ ಪೋಸ್ಟರ್ ಕೂಡಾ ಭಾರೀ ಗಮನ ಸೆಳೆದಿತ್ತು. ಆವಾಗ ಸಿಎಂ ಬೊಮ್ಮಾಯಿಯವರು ಮತ್ತು ಸಚಿವರೆಲ್ಲಾ " ಚುನಾವಣೆಗಾಗಿ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ" ಅಂತೆಲ್ಲಾ ಹೇಳಿಕೆ ಕೊಟ್ಟಿದ್ದರು. ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಈ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಅವರು ಈಗ ಅವರದೇ ಸರ್ಕಾರ ಇದೆಯಲ್ಲಾ, ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದರು.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬಿಜೆಪಿ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ಆರೋಪ ಕುರಿತು ತನಿಖೆ ಮಾಡಲು ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿತು. ಉಳಿದಂತೆ ಬಿಟ್‌ಕಾಯಿನ್ ಹಗರಣ, ಕೋವಿಡ್-19 ರೋಗಿಗಳ ಸಾವಿನ ಪ್ರಕರಣಗಳು, ಆಗ ನಡೆದ ಭ್ರಷ್ಟಾಚಾರ, ಸೇರಿದಂತೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಗರಣಗಳ ಬಗ್ಗೆ ತಮ್ಮ ಸರ್ಕಾರ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಚಿವರೂ ಕೂಡಾ ತನಿಖೆಗೆ ಉನ್ನತ ಸಮಿತಿ ರಚನೆ ಅಂತೆಲ್ಲಾ ಹೇಳಿಕೆ ಕೊಟ್ಟಿದ್ದರು. ಆದರೆ ಆ ಬಗ್ಗೆ ಹೇಚ್ಛೆನು ತಲೆಕೆಡಿಸಿಕೊಳ್ಳಲೇ ಇಲ್ಲ.

ಆದರೆ, ಈಗ ಮತ್ತೊಮ್ಮೆ ಬಿಜೆಪಿ ವಿರುದ್ಧದ ಭಾರೀ ಭ್ರಷ್ಟಾಚಾರದ ಆರೋಪ ಸುದ್ದಿಯಲ್ಲಿದೆ. ವಿಶೇಷ ಅಂದರೆ ಈ ಬಾರಿ ಆರೋಪ ಮಾಡಿರುವುದು ಬಿಜೆಪಿಯದ್ದೇ ಹಿರಿಯ ನಾಯಕ ಬಸನ ಗೌಡ ಪಾಟೀಲ್ ಯತ್ನಾಳ್. ‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ ₹40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ’ ಎಂದು ಬಿಜೆಪಿ ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿ ಬಿಜೆಪಿಯನ್ನು ಮುಜುಗರಕ್ಕೀಡಾಗಿಸಿದ್ದಾರೆ. ನಾನು ಸತ್ಯ ಹೇಳಿದ ಕಾರಣಕ್ಕೆ ನನ್ನನ್ನೇನಾದರೂ ಉಚ್ಚಾಟನೆ ಮಾಡಿದ್ರೆ ನಿಮ್ಮ ಬಂಡವಾಳ ಬಯಲು ಮಾಡ್ತೇನೆ ಅಂತ ಎಚ್ಚರಿಕೆ ಕೊಟ್ಟಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕೋವಿಡ್‌ ವೇಳೆ 45 ರೂ . ಮೌಲ್ಯದ ಒಂದು ಮಾಸ್ಕ್‌ಗೆ ₹485 ರೂ. ಬಿಲ್ ಹಾಕಲಾಯಿತು. ಎಲ್ಲದಕ್ಕೂ ಮನಬಂದಂತೆ ದರ ನಿಗದಿಪಡಿಸಿ, ಬಡವರನ್ನು ಶೋಷಿಸಿದ್ದಾರೆ’ ಎಂದು ಹರಿಹಾಯ್ದಿದ್ದಾರೆ. ‘ಬೆಂಗಳೂರಿನಲ್ಲಿ 10 ಸಾವಿರ ಬೆಡ್‌ಗಳನ್ನು ಬಾಡಿಗೆಗೆ ಪಡೆದು, ಒಂದು ಬೆಡ್‌ಗೆ ದಿನಕ್ಕೆ ₹20 ಸಾವಿರ ಬಾಡಿಗೆ ದರ ನಿಗದಿ ಮಾಡಲಾಯಿತು. ಬಾಡಿಗೆ ಹಣ ಕೊಡುವ ಬದಲು ಅದೇ ದರದಲ್ಲಿ ಎರಡು ಬೆಡ್‌ ಖರೀದಿಸಬಹುದಿತ್ತು’ ಎಂದರು.

‘ಕೋವಿಡ್ ತಗುಲಿದ್ದ ರೋಗಿಗಳಿಗೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಬಿಲ್‌ ಮಾಡಲಾಯಿತು. ನಮ್ಮದೇ ಬಿಜೆಪಿ ಸರ್ಕಾರವಿದ್ದರೂ ಕಳ್ಳರು ಕಳ್ಳರೇ ತಾನೇ? ಇದನ್ನು ಯಡಿಯೂರಪ್ಪ ಅವರ ಬಗ್ಗೆ ವಿಧಾನಸೌಧದಲ್ಲಿಯೇ ಹೇಳಿದ್ದೇನೆ. ಈ ಕುರಿತಂತೆ ನನ್ನಲ್ಲಿ ಇನ್ನಷ್ಟು ವಿಷಯಗಳಿವೆ. ಎಲ್ಲವನ್ನೂ ಬಯಲು ಮಾಡುತ್ತೇನೆ’ ಎಂದು ಹರಿ ಹಾಯ್ದಿದ್ದಾರೆ.

‘ಕೋವಿಡ್‌ ತಗುಲಿದಾಗ ನನಗೇ ₹5 ಲಕ್ಷ ಬಿಲ್‌ ಮಾಡಲಾಯಿತು. ನಾನು ಅಷ್ಟು ಖರ್ಚು ಮಾಡಿದೆ. ಆದರೆ, ಸರ್ಕಾರದಿಂದ ಈವರೆಗೆ ಮರುಪಾವತಿ ಮಾಡಿಕೊಂಡಿಲ್ಲ. ಆದರೆ, ಇಷ್ಟು ಹಣ ಬಡವರಿಂದ ಪಾವತಿಸಲು ಆಗುವುದೇ’ ಎಂದು ಪ್ರಶ್ನಿಸಿದ್ದಾರೆ. ‘ಸತ್ಯವನ್ನು ಹೇಳಿದರೆ ಎಲ್ಲರಿಗೂ ಭಯ. ಎಲ್ಲರೂ ಕಳ್ಳರಾದರೆ, ರಾಜ್ಯ ಮತ್ತು ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ’ ಎಂದಿದ್ದಾರೆ ಯತ್ನಾಳ್.

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಜನವರಿ 5ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅವರ ನಂತರ ಅಪ್ಪಾಜಿಯದ್ದೇ ಪ್ರಕರಣ ಹೊರ ತೆಗೆಯುವೆ’ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಆಯ್ಕೆ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಯತ್ನಾಳ್, ಆ ಬಗ್ಗೆ ಹೋದಲ್ಲಿ ಬಂದಲ್ಲೆಲ್ಲಾ ತನ್ನ ಮುನಿಸನ್ನು ಬಹಿರಂಗವಾಗಿ ತೋರಿಸಿದ್ದು, ಕೊನೆಗದು ಸದನದೊಳಗೂ ಸುದ್ದಿಯಾಗುವಂತಾಯಿತು.

ಮೊದಲು ಪ್ರತಿಕ್ರಿಯೆ ನೀಡಲು ಮುಂದೆ ಬರದ ವಿಜಯೇಂದ್ರ ಆ ಬಳಿಕ ಅಸಮಾಧಾನಿತರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಕೂಲ್ ಆಗಿ ನಮ್ಮೊಳಗೇ ಏನೂ ಇಲ್ಲ ಎಂಬಂತೆ ಹೇಳಿದ್ದರು. ಆದರೆ ಯತ್ನಾಳ್ ಬಾಯಿ ಮುಚ್ಚುವ ಅಥವಾ ಮುಚ್ಚಿಸುವ ಪ್ರಯತ್ನಗಳು ನಡೆಯಲ್ಲ ಎಂದು ಗೊತ್ತಾದಾಗ ವಿಜಯೇಂದ್ರ ನೇರವಾಗಿ ಮೋದಿ ಮತ್ತು ಅಮಿತ್ ಶಾ ಅವರನ್ನೇ ಭೇಟಿಯಾಗಿ ದೂರು ಹೇಳಿಕೊಂಡಿದ್ದರು.

ಆಮೇಲೆ ಯತ್ನಾಳ್ ಆ ಬಗ್ಗೆ ಮಾತನಾಡೋದು ಸ್ವಲ್ಪ ಕಡಿಮೆಯಾಗಿತ್ತು ಎನ್ನುವಷ್ಟರಲ್ಲೇ ಮತ್ತೆ ಯಡಿಯೂರಪ್ಪರ ಮೇಲೆ ಮುಗಿ ಬಿದ್ದಿದ್ದಾರೆ. ಈ ಮೂಲಕ ನನ್ನನ್ನು ಬಾಯಿ ಮುಚ್ಚಿಸಲು ವರಿಷ್ಠರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಅದರ ಜೊತೆಗೆ ಉಚ್ಛಾಟನೆ ಅಂತೆಲ್ಲಾ ಹೋದ್ರೆ ನಾನು ಸುಮ್ಮನಿರಲ್ಲ ಅಂದಿರೋದು ಬಿಜೆಪಿಯನ್ನು ಅಡಕತ್ತರಿಯಲ್ಲಿ ಸಿಲುಕಿಸಿದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ತಮ್ಮನ್ನು ಚೌಕೀದಾರ ಎಂದು ಬಣ್ಣಿಸಿಕೊಳ್ಳುವ, ನ ಖಾವೂಂಗಾ ನಾ ಖಾನೆ ದೂಂಗಾ ಎಂದು ಗುಟುರು ಹಾಕುವ ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮದೇ ಪಕ್ಷದ ನಾಯಕ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮೌನವಾಗಿರುವುದು ನಿಗೂಢವಾಗಿದೆ’ ಎಂದು ಹೇಳಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ ಆರೋಪದ ಬಗ್ಗೆ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ದಲ್ಲಿ ಕೇಂದ್ರದ ನಾಯಕರಿಗೂ ಪಾಲು ಹೋಗಿದೆ ಎನ್ನುವ ಆರೋಪಕ್ಕೆ ಎಡೆ ಮಾಡಿಕೊಡುವುದಿಲ್ಲವೇ ಪ್ರಧಾನಿಯವರೇ’ ಎಂದು ಕುಟುಕಿದ್ದಾರೆ.

‘ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಂದಾಜು ₹40 ಸಾವಿರ ಕೋಟಿ ಭ್ರಷ್ಟಾಚಾರ ಎಸಗಿದೆ ಎಂದು ಯತ್ನಾಳ ಅವರು ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಸರ್ಕಾರ ಶೇ 40ರ ಕಮಿಷನ್ ಸರ್ಕಾರವಾಗಿತ್ತು ಎನ್ನುವ ನಮ್ಮ ಆರೋಪಕ್ಕೆ ಸಾಕ್ಷ್ಯ ಒದಗಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಕೋವಿಡ್‌ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ ₹4,000 ಕೋಟಿ ಅಕ್ರಮ ಮಾಡಿದೆ ಎಂದು ದಾಖಲೆ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ ಆರೋಪ ಗಮನಿಸಿದರೆ ನಮ್ಮ ಅಂದಾಜಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಮ್ಮ ಆರೋಪ ಕೇಳಿ ಹೌಹಾರಿ ಬಂದು ಆಗ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ’ ಎಂದು ಸಿದ್ದರಾಮಯ್ಯ ಕೆಣಕಿದ್ದಾರೆ.

‘ಯತ್ನಾಳ ಅವರು ಹಿಟ್ ಎಂಡ್ ರನ್ ಮಾಡಬಾರದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯನ್ನು ಅವರು ಹೊಂದಿದ್ದರೆ ತಮ್ಮ ಆರೋಪವನ್ನು ತಾರ್ಕಿಕ ಅಂತ್ಯದೆಡೆಗೆ ಒಯ್ಯಬೇಕು. ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಇರುವ ಎಲ್ಲ ಮಾಹಿತಿಯನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಒಪ್ಪಿಸಬೇಕು’ ಎಂದು ಹೇಳಿದ್ದಾರೆ.

ಯತ್ನಾಳ ಅವರು ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಹಿಂದಿನ ಸರ್ಕಾರದ ಸಂಪುಟದಲ್ಲಿದ್ದ ಕೆಲವು ಸಚಿವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಮೌನವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದೂ ಅವರು ಕುಟುಕಿದ್ದಾರೆ.

ಕೋವಿಡ್‌ ಸಮಯದಲ್ಲಿ ನಡೆದಿದ್ದ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ತನಿಖಾ ತಂಡ ರಚಿಸಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಯತ್ನಾಳ್ ಅವರ ಈ ಗಂಭೀರ ಆರೋಪವನ್ನು ಬಿಜೆಪಿ ಹೇಗೆ ಎದುರಿಸಲಿದೆ ? ವಿಶೇಷವಾಗಿ ಹೊಸ ಅಧ್ಯಕ್ಷ ವಿಜಯೇಂದ್ರ ಅವರಿಗೆ ತೀವ್ರ ಮುಜುಗರ ತರಲಿದೆ.

ಹಿಂದುತ್ವ ನಾಯಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಲಿದೆಯೇ ?. ಯತ್ನಾಳ್ ವಿರುದ್ಧ ಕೊನೆಗೂ ಬಿಜೆಪಿ ಅಮಾನತು ಅಸ್ತ್ರ ಪ್ರಯೋಗಿಸಲಿದೆಯೇ ?. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಅಂತಹ ಕ್ರಮಕ್ಕೆ ಬಿಜೆಪಿ ಮುಂದಾಗಲಿದೆಯೇ ?. ಕಾದು ನೋಡೋಣ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!