ಹುಬ್ಬಳ್ಳಿ ಗಣೇಶ ವಿಸರ್ಜನೆ ಮೆರವಣಿಗೆ : ಯತ್ನಾಳ್, ಮುತಾಲಿಕ್ ಪ್ರಚೋದನಕಾರಿ ಭಾಷಣ

Update: 2023-10-04 03:36 GMT
Editor : Ismail | Byline : ಆರ್. ಜೀವಿ

ದ್ವೇಷ ಬಿತ್ತುವವರು, ಪ್ರಚೋದಿಸುವವರು ವಿನಾಕಾರಣ ಅದನ್ನೇ ಮಾಡುತ್ತಿರುತ್ತಾರೆ ಮತ್ತು ಶಾಂತಿ ಕದಡಲಿ ಎಂಬುದೇ ಅವರ ಉದ್ದೇಶವಾಗಿರುತ್ತದೆ. ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ಗಣೇಶ ವಿಸರ್ಜನೆ ವೇಳೆ ಪ್ರಮೋದ್ ಮುತಾಲಿಕ್, ಬಸನಗೌಡ ಪಾಟೀಲ್ ಯತ್ನಾಳ್ ನಡೆದುಕೊಂಡ ರೀತಿಯೂ ಹೀಗೆಯೇ ಇತ್ತು​. ಮತ್ತದು ತೀರಾ ಆಘಾತಕಾರಿಯಾಗಿತ್ತು. ಮಾತೆತ್ತಿದರೆ ಸನಾತನ ಧರ್ಮ ಎನ್ನುವವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಯಿತು ಎನ್ನುವವರು ​ಇನ್ನೊಂದು ಧರ್ಮೀಯರ ವಿಚಾರದಲ್ಲಿಯೂ ಹಾಗೆಯೇ ಎಂದೇಕೆ ಭಾವಿಸುವುದಿಲ್ಲ? ಏಕೆ ಸಹಿಷ್ಣುತೆ ತೋರಿಸುವುದಿಲ್ಲ?.

ಗಣೇಶ ವಿಸರ್ಜನೆ ಶಾಂತಿಯುತವಾಗಿಯೇ ನಡೆಯಿತು. ಆದರೆ ಅದರಲ್ಲಿ ಪಾಲ್ಗೊಂಡ ಬಿಜೆಪಿಯ, ಸಂಘ ಪರಿವಾರದ ನಾಯಕರಿಗೇಕೆ ಅನವಶ್ಯಕ ಅಸಹನೆ​ ? ಯಾವ ಕಾರಣವೂ ಇಲ್ಲದೆ, ಪ್ರಚೋದನಾಕಾರಿ ಮಾತುಗಳು, ಘಾಸಿಯಾಗುವಂಥ ಮಾತುಗಳು ಏಕೆ ಅವರ ಬಾಯಿಂದ ಬರುತ್ತವೆ​ ?. ಉದ್ದೇಶ, ಸಾಮಾಜಿಕ ವಾತಾವರಣವನ್ನು ಕದಡುವುದು, ​ಇತರ ಸಮುದಾಯಗಳಲ್ಲಿ ಭಯ ಹುಟ್ಟಿಸುವುದು, ​ಸಮಾಜದಲ್ಲಿ ಕೋಮು ಧ್ರುವೀಕರಣ ಮಾಡಿ ರಾಜಕೀಯ ಲಾಭ ಪಡೆಯುವುದು - ಇದೇ ಅಲ್ಲವೆ​ ಇವರ ಉದ್ದೇಶ ?.

​ಗಣೇಶನ ಮೆರವಣಿಗೆ ಮಾಡುವಾಗ ಇನ್ನೊಂದು ಧರ್ಮದವರ ವಿರುದ್ಧ ಅವಹೇಳನಕಾರಿ, ಬೆದರಿಕೆಯ ಮಾತಾಡುವುದು ಭಕ್ತಿಯೇ ? ಅಧ್ಯಾತ್ಮವೇ ? ಶ್ರದ್ಧೆಯೇ ? ಅದ್ಯಾವುದೂ ಅಲ್ಲ. ಅದು ಕೇವಲ ಕೊಳಕು ರಾಜಕೀಯ. ಅದಕ್ಕೂ ಗಣೇಶನಿಗೂ ಯಾವುದೇ ಸಂಬಂಧವಿಲ್ಲ.

ಇದನ್ನು ಜನರು ಅರ್ಥ ಮಾಡಿಕೊಳ್ಳೋದು ಯಾವಾಗ ?. ಮುತಾಲಿಕ್ ಆಗಲಿ, ಯತ್ನಾಳ್ ಆಗಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉದ್ದಕ್ಕೂ ಮಾತನಾಡಿದ್ದು ಅವರ​ ಕೊಳೆತ ಮನಃಸ್ಥಿತಿ ಏನೆಂಬುದನ್ನೇ ಹೇಳುತ್ತಿತ್ತು. ಅಲ್ಲಿ ಅಸಹನೆ ಮಾತ್ರವೇ ಇರಲಿಲ್ಲ. ದ್ವೇಷವೇ ತುಂಬಿತ್ತು. ಸಮಾಜಘಾತುಕ ನಡವಳಿಕೆ ಅ​ದೆಂಬುದು ಸ್ಪಷ್ಟವಿತ್ತು.​ ಅವರ ಮಾತುಗಳಲ್ಲಿ ಗಣೇಶನ ಮೇಲಿನ ಭಕ್ತಿ, ಪ್ರೀತಿ ಎಲ್ಲೂ ಕಾಣಲೇ ಇಲ್ಲ.

ಶ್ವೇತಭವನದಲ್ಲಿ ನಿಂತು ​ಭಾರತದಲ್ಲಿ ಅಲ್ಪಸಂಖ್ಯಾತರ ವಿಚಾರದಲ್ಲಿ ತಾರತಮ್ಯ ನಡೆಯುತ್ತಿಲ್ಲ​, ಅಂತಹದ್ದಕ್ಕೆ ನಮ್ಮಲ್ಲಿ ಆಸ್ಪದವೇ ಇಲ್ಲ ಎನ್ನು​ತ್ತಾರೆ ಈ ದೇಶದ ಪ್ರಧಾನಿ​. ಅವರ ಪಕ್ಷದವರಿಂದಲೇ ಇಲ್ಲಿ ಏನೇನೆಲ್ಲ​ ರಾದ್ಧಾಂತ ನಡೆಯುತ್ತಿದೆ ಮತ್ತದು ಎಷ್ಟು ಕ್ರೂರವೂ ಭಯಾನಕವೂ ಆಗಿದೆ ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ಮುತಾಲಿಕ್ ಮತ್ತು ಯತ್ನಾಳ್ ಆಡಿದ ಮಾತುಗಳು, ಅವುಗಳಲ್ಲಿನ ಕೊಳಕುತನ, ಶಾಂತಿಭಂಗದ ಹುನ್ನಾರಗಳೇ ಸಾಕ್ಷಿಯಾಗಿದ್ದವು.

​ಇಲ್ಲಿ ನಾವು ಬಳಸುವುದಕ್ಕೂ ಅನುಚಿತ ಎನ್ನುವಂತಿರುವ ಅಂಥ ಮಾತುಗಳನ್ನು ಅವರು ರಾಜಾರೋಷವಾಗಿ ಆಡಬಲ್ಲರೆಂದರೆ ಅದೆಂಥ ಸಂಸ್ಕೃತಿ, ಅದೆಂಥ ಸಭ್ಯತೆ​, ಅದೆಂತಹ ದೇವ ಭಕ್ತಿ ?. ​ಗಣೇಶ ಚತುರ್ಥಿಯ ಸಮಾರಂಭಕ್ಕೂ , ಪ್ರಮೋದ್ ಮುತಾಲಿಕ್​ ಅಲ್ಲಿ ಆಡಿರುವ ಮಾತುಗಳಿಗೂ ಏನಾದರೂ ಸಂಬಂಧವಿದೆಯೇ ?

2024ರಲ್ಲಿ ಮೋದಿ ಮತ್ತೆ ಪ್ರಧಾನಿ ಆಗ್ತಾರೆ ಎಂದು ಹೇಳುತ್ತ, ಆಗ ಏನೇನೆಲ್ಲಾ ಮಾಡುತ್ತೇವೆ ಎಂಬ ಪಟ್ಟಿಯನ್ನು ಕೊಡುವ ಯತ್ನಾಳ್ ಮಾತಿನಲ್ಲಿನ ದ್ವೇಷ ಮತ್ತು ಬೆದರಿಕೆಗಳು ಎಂಥವು?​ ಒಬ್ಬ ಜನಪ್ರತಿನಿಧಿ ಆಡುವ ಮಾತುಗಳೇ ಅವು ?. ರಾಜ್ಯದ ವಕ್ಫ್ ಆಸ್ತಿ ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತಿದ್ದೇವೆ ಎನ್ನುತ್ತಾರೆ ಯತ್ನಾಳ್. ಸನಾತನ ಧರ್ಮ ವಿರೋಧಿಸಿದವರಿಗೆ ಏಡ್ಸ್ ಬರುತ್ತದಂತೆ. ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲಾ ದೇಶದ್ರೋಹಿಗಳಂತೆ.

ಯಾವ ಮಟ್ಟದ ಮಾತು​ಗಳಿವು ?​ ಇವೆಲ್ಲ ಒಬ್ಬ ಕೇಂದ್ರ ಸಚಿವನಾಗಿದ್ದ, ಈಗ ಶಾಸಕನಾಗಿರುವ ವ್ಯಕ್ತಿ ಆಡಬಲ್ಲ ಮಾತುಗಳೇ ?. ಹಬ್ಬದ​, ಧಾರ್ಮಿಕ ಕಾರ್ಯಕ್ರಮದ ಸಂದರ್ಭದ ಮೆರವಣಿಗೆಯೂ, ತೆರೆದ ವಾಹನದಲ್ಲಿ ಈ ರಾಜಕೀಯ ನಾಯಕರು ಸಾಗುವ ಮೆರವಣಿಗೆಗಳಾಗುವ ಅಗತ್ಯವಿದೆಯೆ?.

ಅಲ್ಲಿ ರಾಜಕೀಯವನ್ನು ತರುತ್ತ, ಧಾರ್ಮಿಕ ದ್ವೇಷದ ಮಾತನಾಡುತ್ತ ಸಾಗುವ ಇಂಥವರ ನಡೆಗೆ, ವರ್ತನೆಗೆ ಕಡಿವಾಣ ಏಕಿಲ್ಲ?.

ಮುತಾಲಿಕ್ ಥರದ ಸಮಾಜ ಘಾತುಕ ಶಕ್ತಿಗಳು ರಾಜಾರೋಷವಾಗಿ ಮೆರೆದಾಡುತ್ತಿರುವುದು, ಯತ್ನಾಳ್ ಥರದ ದ್ವೇಷಕೋರರು ಎಗ್ಗಿಲ್ಲದೆ ಪ್ರಚೋದನಕಾರಿಯಾಗಿ ಮಾತಾಡುವುದು ಒಂದೆಡೆ ಆತಂಕ ಸೃಷ್ಟಿಸುತ್ತಿರುವಾಗಲೇ, ಈ ಸರ್ಕಾರ ಇದಕ್ಕೆಲ್ಲ ಹೇಗೆ ಅವಕಾಶ ಕೊಡುತ್ತಿದೆ ಎಂಬುದು ಮತ್ತೊಂದು ಬಗೆಯಲ್ಲಿ ಕಳವಳ ಹುಟ್ಟಿಸುವ ವಿಚಾರವಾಗಿದೆ.

ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಮೇಲೆ ಪ್ರಕರಣ ದಾಖಲಾಗಿದೆ. ಮಹಾನಗರ ಪಾಲಿಕೆ 8ನೇ ವಲಯದ ಸಹಾಯಕ ಆಯುಕ್ತ ಚಂದ್ರಶೇಖರಗೌಡ ನೀಡಿರುವ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿದ್ಧಾರೆ. ಯತ್ನಾಳ್ ವಿರುದ್ಧ ದೂರಿನ ಇಲ್ಲವೆ ಯಾವುದೇ ಕ್ರಮದ ವರದಿಯೇನೂ ಇಲ್ಲ. ಅಷ್ಟಕ್ಕೂ ಕೇವಲ ಮುತಾಲಿಕ್ ಮೇಲೆ ಕೇಸ್ ಒಂದು ದಾಖಲಾಗುವುದರಿಂದ ಏನಾಗಲಿದೆ?.

ಅಲ್ಪಸಂಖ್ಯಾತರ ಪರವಿದ್ದಂತೆ ತೋರಿಸಿಕೊಳ್ಳುವ, ಅವರ ಮತಗಳನ್ನು​ ಭಾರೀ ಪ್ರಮಾಣದಲ್ಲಿ ಪಡೆದು ಗೆದ್ದಿರುವ ಕಾಂಗ್ರೆಸ್ ಸರ್ಕಾರ ಕೂಡ ಕಣ್ಣೊರೆಸುವ ಕೆಲಸವನ್ನು ಮಾತ್ರ ಮಾಡುತ್ತಿದೆಯೆ ಎಂಬ ಅನುಮಾನವೂ ಮೂಡದೇ ಇರುವುದಿಲ್ಲ. ಬಿಜೆಪಿ ಕಾಲದಲ್ಲಿ ಈ ರಾಜ್ಯದಲ್ಲಿ ಏನೇನೆಲ್ಲ ನಡೆಯಿತು ಎಂದು ನೋಡಿದ್ದೇವೆ.

​ಹಿಂದುತ್ವ ಕಾರ್ಯಕರ್ತ ಮೃತಪಟ್ಟರೆ ಮನೆಗೆ ಹೋಗಿ ಸಂತೈಸುವ ಬಿಜೆಪಿ ​ಮುಖ್ಯಮಂತ್ರಿ ಹಾಗು ಸಚಿವರು , ಕೊಲೆಯಾದ ಮುಸ್ಲಿಂ ವ್ಯಕ್ತಿಯ ಮನೆಗೆ ಹೋಗಿ ಸಾಂತ್ವನ ಹೇಳಲಾರದಷ್ಟು ಮಟ್ಟಿಗೆ ಸಣ್ಣತನ ತೋರಿಸಿದ್ದನ್ನೂ ನೋಡಿಯಾಗಿದೆ.

ನಿರಂತರ ದ್ವೇಷ ಭಾಷಣಗಳು, ಪ್ರಚೋದನಾಕಾರಿ ಮಾತುಗಳನ್ನು ಆಡುತ್ತಿದ್ದುದನ್ನು ಗಮನಿಸಿದ್ದೇವೆ.

ಬಿಜೆಪಿ ಸರ್ಕಾರವನ್ನು ಜನರು ಮನೆಗೆ ಕಳಿಸಿದ್ದೂ ಆಯಿತು.

ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲೂ ಸಮಾಜಘಾತುಕರ, ದ್ವೇಷ ಬಿತ್ತುವವರ ಧಾರ್ಷ್ಟ್ಯ ಕಡಿಮೆಯಾಗಿಲ್ಲ ಎನ್ನುವುದಾದರೆ, ಅವರೆಲ್ಲ ಯಥಾ ಪ್ರಕಾರ, ಅಲ್ಪಸಂಖ್ಯಾತರನ್ನು ಭೀತಿಯಲ್ಲಿಡುವ ಕೆಲಸದಲ್ಲಿಯೇ ಈಗಲೂ ತೊಡಗಿದ್ದಾರೆ ಎಂದಾದರೆ, ಏನಿದರ ಅರ್ಥ?. ಈಗಲೂ ಹೀಗೇ ನಡೆಯುತ್ತದೆ ಎಂದ ಮೇಲೆ ಆ ಸರಕಾರಕ್ಕೂ ಈ ಸರಕಾರಕ್ಕೂ ವ್ಯತ್ಯಾಸವೇನು?.

ಈ ದ್ವೇಷ ಕಾರುವ, ಪ್ರಚೋದಿಸುವ ಮಂದಿಗೆ ಗೊತ್ತಿದೆ, ತಾವೇನೇ ಮಾತನಾಡಿದರೂ ಅದನ್ನು ಆಷ್ಟೇ ಉತ್ಸಾಹದಿಂದ ಪ್ರಸಾರ ಮಾಡುವುದಕ್ಕೆ ತಮ್ಮದೇ ​ಮಡಿಲ ಮೀಡಿಯಾಗಳು ಹಸಿದುಕೊಂಡು ಕಾದಿವೆ ಎಂದು. ತಮ್ಮ ಹಸಿ ಹಸಿ ದ್ವೇಷದ ಮಾತುಗಳ ಮೂಲಕವೇ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವವರು ಅವರೆಲ್ಲ. ಆದರೆ ಅಂಥವರ ಬಗ್ಗೆ ನಿಗಾ ಇಡಬೇಕಿರುವುದು, ಅಂಥವರು ಹುಟ್ಟುಹಾಕುವ ಭಯದ, ದ್ವೇಷದ ವಾತಾವರಣದಿಂದ ಈ ಸಮಾಜ ಕದಡದಂತೆ, ಮಾನಸಿಕವಾಗಿ ಛಿದ್ರವಾಗದಂತೆ ಎಚ್ಚರ ವಹಿಸಬೇಕಿರುವುದು ಸರ್ಕಾರ. ಅಂಥ ಎಚ್ಚರವನ್ನು ನಿಜವಾಗಿಯೂ ಈಗಿನ ಸರ್ಕಾರ ಹೊಂದಿದೆಯೆ?

​ನಿನ್ನೆಯ ಹುಬ್ಬಳ್ಳಿಯ ಘಟನೆಯನ್ನೇ ನೋಡಿ. ಮುತಾಲಿಕ್ ಮೇಲೆ ಒಂದು ಕೇಸಾಗಿದೆ ಅನ್ನೋದನ್ನು ಬಿಟ್ಟರೆ ಬಿಜೆಪಿ ಹಾಗು ಕಾಂಗ್ರೆಸ್ ಸರಕಾರಗಳ ನಡುವೆ ಯಾವ ವ್ಯತ್ಯಾಸವಿದೆ ? ಇಂತಹದೊಂದು ತೀರಾ ಕೆಳಮಟ್ಟದ, ಅವಹೇಳನಕಾರಿ ಹಾಗು ಬೆದರಿಕೆಯ ಮಾತುಗಳನ್ನೇ ಯತ್ನಾಳ್ ಹಾಗು ಮುತಾಲಿಕ್ ಆಡ್ತಾರೆ ಅನ್ನೋದು ಈ ಸರಕಾರಕ್ಕೆ, ಅಲ್ಲಿನ ಜಿಲ್ಲಾಡಳಿತಕ್ಕೆ ಗೊತ್ತಿರಲಿಲ್ಲವೇ ? ಅದನ್ನು ಮೊದಲೇ ತಡೆಯೋದು ಏಕೆ ಸಾಧ್ಯ ಆಗಲಿಲ್ಲ ?

ನಮ್ಮ ಸರಕಾರ ಇರುವಾಗ ಇಂತಹ ದುಷ್ಟ ಮಾತುಗಳನ್ನು ಆಡಲು ಬಿಡೋದಿಲ್ಲ ಎಂಬ ಸಂಕಲ್ಪ, ಇಚ್ಛಾಶಕ್ತಿ ಯಾಕಿಲ್ಲ ಈ ಸರಕಾರಕ್ಕೆ ? ಯತ್ನಾಳ್ ಹಾಗು ಮುತಾಲಿಕ್ ಅನ್ನು ಅಲ್ಲಿಗೆ ಬರದಂತೆ ತಡೆಯಲು ಯಾಕೆ ಆಗಲಿಲ್ಲ ?. ಗಣೇಶೋತ್ಸವ ಹಾಗು ಗಣೇಶ ವಿಸರ್ಜನೆ ಊರಿನ ಶ್ರದ್ಧಾಳುಗಳು ಬಂದು ಸೇರಿ ನಡೆಸಿಕೊಡಬೇಕಾದ ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಕ್ರಮ. ಅಲ್ಲಿ ಹೊಲಸು ಬಾಯಿಯ ಪುಢಾರಿಗಳು ಹಾಗು ದ್ವೇಷ ಭಾಷಣಕಾರರಿಗೆ ಏನು ಕೆಲಸ ?. ಅದಕ್ಕೇಕೆ ಅವಕಾಶ ನೀಡಲಾಯಿತು ? ಅವರು ಆಡಿದ ಮಾತುಗಳು ಸಮಾಜದ ಆರೋಗ್ಯದ ಮೇಲೆ ಮಾಡುವ ಗಂಭೀರ ಗಾಯದ ಅರಿವಾದರೂ ಈ ಸರಕಾರಕ್ಕೆ ಯಾಕಿಲ್ಲ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!