ರಾಜ್ಯಕ್ಕೆ ಅನ್ಯಾಯ: ಕರ್ನಾಟಕ ಬಿಜೆಪಿ ಮುಖಂಡರ ಬಣ್ಣ ಬಯಲು

Update: 2024-02-27 07:05 GMT
Editor : Ismail | Byline : ಆರ್. ಜೀವಿ

ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ದಿಲ್ಲಿವರೆಗೂ ಹೋರಾಟ ತೆಗೆದುಕೊಂಡು ಹೋಗಿದ್ದ ಸಿದ್ದರಾಮಯ್ಯ ಸರಕಾರ ಈಗ ರಾಜ್ಯ ವಿಧಾನ ಸಭೆಯಲ್ಲೂ ಆ ಬಗ್ಗೆ ನಿರ್ಣಯ ಮಂಡಿಸಿ ಬಿಸಿ ಮುಟ್ಟಿಸಿದೆ. ಆದರೆ ಸದಾ ರೈತರ ಪರ, ರಾಜ್ಯದ ಜನತೆಯ ಪರ ನಾವಿದ್ದೇವೆ ಅನ್ನುತ್ತಲೇ ಬಂದಿರುವ ಬಿಜೆಪಿಯ ಅಸಲಿ ಮುಖ ನಿನ್ನೆ ಸದನದಲ್ಲಿ ಮತ್ತೊಮ್ಮೆ ಬಯಲಾಗಿದೆ.

ಮಾತೆತ್ತಿದರೆ ಮೋದಿ ಮೋದಿ ಅಂತ ಭಾಷಣ ಮಾಡುವ ಬಿಜೆಪಿ ನಾಯಕರು ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಅಂತ ಸರಕಾರ ಹೇಳಿದ್ರೆ "ಅದು ರಾಜಕೀಯ" ಅಂತ ಕಾಂಗ್ರೆಸ್ ಸರಕಾರದ ಮೇಲೆ ಮುಗಿ ಬೀಳುತ್ತಾರೆ. ದೇಶದ ರೈತರಿಗೆ ಅನ್ಯಾಯ ಆಗುತ್ತಿದೆ, ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿ ಅಂತ ಕೇಂದ್ರವನ್ನು ಕೇಳಿದ್ರೆ ರೈತರ ಪರ ಅಂತ ಹೇಳಿಕೊಳ್ಳುವ ಇವರಿಗೆ ಅದನ್ನೂ ಸಹಿಸಲು ಆಗಲ್ಲ.

ಅಂದ್ರೆ ಎಲ್ಲ ಕಡೆ ನಮ್ಮದೇ ಸರಕಾರ ಇರಬೇಕು , ಆದ್ರೆ ಯಾರಿಗಾದರೂ ಅನ್ಯಾಯ ಆದ್ರೆ ಅದನ್ನು ಮಾತ್ರ ಹೇಳುವಂತಿಲ್ಲ ಅನ್ನೋ ಧೋರಣೆ ಈ ಬಿಜೆಪಿಯದ್ದು. ಪ್ರಧಾನಿ ಮೋದಿ ವಿರುದ್ಧ ಸದನದಲ್ಲಿ ಮಾತನಾಡಿದರೆ ವಿಷಯ ಏನೂ ಅಂತಲೂ ಕೇಳುವ ಗೋಜಿಗೆ ಹೋಗದೆ ಒಂದೋ ಸದನದ ಬಾವಿಗಿಳಿದು ಪ್ರತಿಭಟಿಸುವ, ಇಲ್ಲವೇ ಸಭಾತ್ಯಾಗ ಮಾಡಿ ಹೊರಕ್ಕೆ ಹೋಗುವ ಕೆಲಸವನ್ನೇ ಬಿಜೆಪಿ ನಾಯಕರು ಮಾಡುತ್ತಾ ಬಂದಿದ್ದಾರೆ.

ನಿನ್ನೆ ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ಮುಗಿದ ಬಳಿಕ ಎರಡು ನಿರ್ಣಯಗಳನ್ನು ಮಂಡಿಸುತ್ತಿದ್ದಾಗ ವಿಪಕ್ಷ ಬಿಜೆಪಿ ಗದ್ದಲವೆಬ್ಬಿಸಿತು.

ಆರ್ಥಿಕ ಸಂಪನ್ಮೂಲಗಳ ಹಂಚಿಕೆ ವಿಷಯದಲ್ಲಿ ಅನ್ಯಾಯ ಖಂಡಿಸಿ ಕೆಲ ದಿನಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿದ್ದ ರಾಜ್ಯ ಸರ್ಕಾರ, ತೆರಿಗೆ ಪಾಲಿನ ಸಮಾನ ಹಂಚಿಕೆ ಮತ್ತು ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿಧಾನಸಭೆಯಲ್ಲಿ ಗುರುವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿತು.

ಸರ್ಕಾರದ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಸದನ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಗುರುವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ನಿರ್ಣಯದ ವಿಷಯ ಇರಲಿಲ್ಲ. ಸಂಜೆ ಪೂರಕ ಕಾರ್ಯಕಲಾಪಗಳ ಪಟ್ಟಿಯೊಂದಿಗೆ ಈ ನಿರ್ಣಯ ಮಂಡಿಸಲು ಸ್ಪೀಕರ್ ಯು.ಟಿ.ಖಾದ‌ರ್ ಸರ್ಕಾರಕ್ಕೆ ಅವಕಾಶ ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಈ ಸಂಬಂಧದ ಅಧಿಕೃತ ನಿರ್ಣಯವನ್ನು ಮಂಡಿಸಿದರು. ಸರ್ಕಾರದ ಈ ನಿಲುವಿಗೆ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗೊತ್ತುವಳಿ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.

ನಿರ್ಣಯದಲ್ಲೇನಿದೆ?:

ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿಯಾಗಬೇಕೆಂಬುದು ಭಾರತ ದೇಶದ ಪ್ರತಿಯೊಬ್ಬ ರೈತನ ಆಶಯ. ಈ ಸದಾಶಯವನ್ನು ಅನುಷ್ಠಾನಗೊಳಿಸಬೇಕೆಂದು ಮತ್ತು ಕೃಷಿಯನ್ನು ಲಾಭದಾಯಕಗೊಳಿಸಬೇಕೆಂಬುದು ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಒತ್ತಾಸೆಯಾಗಿದೆ.

ರೈತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಡಾ.ಎಂ. ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿಕನ ಸಾಗುವಳಿ ವೆಚ್ಚದ ಶೇ.50ರಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವ ಶಿಫಾರಸು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿವೆ. ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಲಾಭಾಂಶದ ಬೆಂಬಲ ಬೆಲೆಯನ್ನು ಸುನಿಶ್ಚಿತಗೊಳಿಸುವ ಮತ್ತು ರೈತನ ಉತ್ಪನ್ನಗಳ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಿರ್ಧರಿಸುವಂತೆ ಒತ್ತಾಯಿಸಿ, ಭಾರತದಾದ್ಯಂತ ರೈತರು ಚಳವಳಿ, ಆಂದೋಲನ ಮತ್ತು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ರೈತವಿರೋಧಿ ನೀತಿಯಾಗಿ ರೈತನಿಗೆ ಕನಿಷ್ಠ ಬೆಂಬಲ ಬೆಲೆ ದೊರಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ.

ಈ ಹಿನ್ನೆಲೆಯಲ್ಲಿ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಶಾಸನ ರೂಪಿಸುವಂತೆ ಹಾಗೂ ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಸದನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂದು ನಿರ್ಣಯ ತರಲಾಗಿದೆ.

ಈ ನಿರ್ಣಯದಿಂದ ಕೆರಳಿ ಕೆಂಡವಾದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ನಿರ್ಣಯದ ಪ್ರತಿಗಳನ್ನು ಹರಿದು ಹಾಕಿ ತಮ್ಮ ಸಿಟ್ಟು ಹೊರಹಾಕಿದರು. ಅಲ್ಲದೆ, ಕಾರ್ಯಕಲಾಪಗಳ ಪಟ್ಟಿಯಲ್ಲಿ ಇಲ್ಲದ ವಿಷಯವನ್ನು ಯಾವುದೇ ಮಾಹಿತಿ ನೀಡದೆ ತರಲು ಹೇಗೆ ಅವಕಾಶ ನೀಡಿದಿರಿ ಎಂದು ಸಭಾಧ್ಯಕರ ಪೀಠದ ಮುಂದೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಇದು ಕದ್ದು ಮುಚ್ಚಿ ನಿರ್ಣಯ ತಂದ ಹೇಡಿ ಸರ್ಕಾರ, ದೇಶದ್ರೋಹಿ ಕಾಂಗ್ರೆಸ್, ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಕಿಡಿ ಕಾರಿದರು.

ಈ ಪ್ರತಿಭಟನೆ, ಗದ್ದಲ, ಕೋಲಾಹಲದ ನಡುವೆಯೇ ಸಚಿವ ಎಚ್.ಕೆ.ಪಾಟೀಲ್ ಪೂರ್ಣ ನಿರ್ಣಯವನ್ನು ಓದಿ, ಸರ್ವಾನುಮತದಿಂದ ಇದನ್ನು ಅಂಗೀಕರಿಸುವಂತೆ ಪ್ರಸ್ತಾವನೆ ಮಂಡಿಸಿದರು. ಬಳಿಕ ಸ್ಪೀಕರ್ ಯು.ಟಿ.ಖಾದರ್ ನಿರ್ಣಯವನ್ನು ಸದನದ ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಇದರ ಬೆನ್ನಲ್ಲೇ ತೆರಿಗೆ ಪಾಲಿನ ಸಮಾನ ಹಂಚಿಕೆ ವಿಚಾರವಾಗಿ ಮತ್ತೊಂದು ನಿರ್ಣಯವನ್ನೂ ಮಂಡಿಸಿ ಅನುಮೋದನೆ ಪಡೆಯಲಾಯಿತು.

ನಿರ್ಣಯದಲ್ಲಿರುವ ಪ್ರಮುಖಾಂಶಗಳೇನು?

ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಹಣಕಾಸು ಆಯೋಗಗಳು ಶಿಫಾರಸ್ಸು ಮಾಡಿದ ಅನುದಾನ ಒದಗಿಸುವಲ್ಲಿ, ಬರ ಪರಿಹಾರಕ್ಕೆ ಮಾನದಂಡಗಳ ಪ್ರಕಾರ ಕೇಂದ್ರದ ಪಾಲನ್ನು ನೀಡುವಲ್ಲಿ, ಅಭಿವೃದ್ಧಿ ಯೋಜನೆಗಳನ್ನು ಯಾವುದೇ ತಾರತಮ್ಯ ವಿಲ್ಲದೇ ಹಂಚಿಕೆ ಮಾಡುವಲ್ಲಿ ಹಣಕಾಸು ಹಂಚಿಕೆಯ ಪ್ರತಿಯೊಂದು ಆಯಾಮದಲ್ಲೂ ಪಕ್ಷಪಾತ ಮಾಡುತ್ತಿರುವ ಅನೇಕ ನಿದರ್ಶನಗಳು ಕರ್ನಾಟಕ ಜನತೆಯ ಗಮನಕ್ಕೆ ಬಂದಿದೆ.

ಅಭಿವೃದ್ಧಿ ವಂಚಿತ ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರಕಬೇಕೆಂಬ ಕಲ್ಪನೆಯ ಜೊತೆಗೆ ಅತ್ಯುತ್ತಮ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಅನ್ಯಾಯವನ್ನು ಮಾಡಬಾರದು ಎಂಬ ಕನಿಷ್ಠ ನೈಸರ್ಗಿಕ ನ್ಯಾಯದ ತತ್ವಗಳನ್ನು ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲವೆಂಬುದು ಪ್ರಗತಿಪರ ರಾಜ್ಯಗಳಿಗೆ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ.

ಕರ್ನಾಟಕದಂತಹ ರಾಜ್ಯಕ್ಕೆ ಈ ಮೊದಲು ಶೇ. 4.713 ರಷ್ಟು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ತೆರಿಗೆ ಹಂಚಿಕೆಯಾಗಿದ್ದರೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ಶೇ.3.647 ರಷ್ಟು ತೆರಿಗೆ ಹಂಚಿಕೆಯಾಗಿದೆ. ಇದರಿಂದ ಕರ್ನಾಟಕ ನ್ಯಾಯಯುತ ಶೇ.1.066 ರಷ್ಟು ಅಂದರೆ ರೂ.62,098 ಕೋಟಿ ರು. ತೆರಿಗೆ ಪಾಲಿನಿಂದ ವಂಚಿತವಾಗಿದೆ.

14 ಮತ್ತು 15ನೇ ಹಣಕಾಸು ಆಯೋಗಗಳ ಪರಸ್ಪರ ವಿರೋಧಾಭಾಸದ ತೀರ್ಮಾನಗಳಿಂದಾಗಿ ಕಳೆದ 3 ವರ್ಷಗಳಿಂದ ಕರ್ನಾಟಕಕ್ಕೆ ವಾರ್ಷಿಕ 26,140 ಕೋಟಿ ರು.ಗಳು ನಷ್ಟ ಉಂಟಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ದೊರಕಬೇಕಾದ ಅನುದಾನ ಕೂಡ ಗಣನೀಯವಾಗಿ ಕಡಿತಗೊಂಡಿದೆ.

2018-19ಕ್ಕೆ ಹೊಲಿಸಿದರೆ 2023-24ರಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಈ ಲೆಕ್ಕದಲ್ಲಿ ನೋಡಿದರೂ ಕನಿಷ್ಠ ಒಂದು ಲಕ್ಷ ಕೋಟಿ ರು.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ರಾಜ್ಯಕ್ಕೆ ಅನುದಾನ ದೊರಕಬೇಕಾಗಿತ್ತು. ಆದರೆ ಕರ್ನಾಟಕಕ್ಕೆ 50,000 ಕೋಟಿ ರೂ ಕೂಡಾ ದೊರಕುತ್ತಿಲ್ಲ.

ಅವೈಜ್ಞಾನಿಕ ಜಿಎಸ್ ಟಿ ವ್ಯವಸ್ಥೆ, ಸೆಸ್ ಮತ್ತು ಸರ್ಚಾರ್ಜ್‌ಗಳ ಹೇರಿಕೆ, ತೆರಿಗೆ ಪಾಲಿನಲ್ಲಿ ವಂಚನೆ, 15 ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಕೊಡದೆ 2017-18 ರಿಂದ ನಮಗೆ 1,87,867 ಕೋಟಿ ರು. ನಷ್ಟವಾಗಿದೆ. ಬರ ಮತ್ತು ನೆರೆ ಪರಿಹಾರಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಈ ಸದನ ಒಕ್ಕೊರಲಿನಿಂದ ಖಂಡಿಸುತ್ತದೆ. ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕೆಂದು ಮತ್ತು ಕರ್ನಾಟಕ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಸದನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂಬ ನಿರ್ಣಯವನ್ನು ಸರ್ಕಾರ ಸದನದಲ್ಲಿ ಪ್ರಸ್ತಾಪಿಸಿ ಅಂಗೀಕಾರ ಪಡೆದಿದೆ.

ಆದರೆ, ಇವ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ ಬಿಜೆಪಿ ಸದಸ್ಯರನ್ನು ಜೆಡಿಎಸ್‌ ಸದಸ್ಯರೂ ಬೆಂಬಲಿಸಿದರು. ಬಿಜೆಪಿ, ಜೆಡಿಎಸ್‌ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ‘ಮೋದಿ, ಮೋದಿ’ ಎಂಬ ಘೋಷಣೆಯನ್ನೂ ಮೊಳಗಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ ವಿರೋಧ ಪಕ್ಷಗಳ ಸದಸ್ಯರ ವಿರುದ್ಧ ಹರಿಹಾಯ್ದರು.

ನಿಮ್ಮ ಈ ವರ್ತನೆಯಿಂದ ನೀವು ಯಾರ ಪರ ಇದ್ದೀರಿ ಅನ್ನೋದು ಗೊತ್ತಾಗುತ್ತೆ ಅಂದ್ರು. ರಾಜ್ಯದ ಜನರು ನಿಮ್ಮನ್ನು ನೋಡುತ್ತಿದ್ದಾರೆ. ರಾಜ್ಯಕ್ಕೆ, ರೈತರಿಗೆ ನ್ಯಾಯಕ್ಕಾಗಿ ಕೇಳಿದ್ರೆ ನೀವು ಗದ್ದಲವೆಬ್ಬಿಸುತ್ತೀರಿ. ಮೋದಿ ಮೋಸ ಅಂದ್ರೆ ಇದೇ ಅಂತ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!