ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶ

Update: 2023-11-16 12:49 GMT

ತುಮಕೂರು: ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಜಯನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ನಗರದ ದೇವರಾಜ ಅರಸು ರಸ್ತೆಯ ಸರಸ್ವತಿಪುರಂನ 5ನೇ ಕ್ರಾಸ್‍ನಲ್ಲಿರುವ ಖಾಲಿ ನಿವೇಶನದಲ್ಲಿ ಒಂದು ಗಾಂಜಾ ಗಿಡ ಬೆಳೆದಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ಮಾರ್ಗದರ್ಶನದಲ್ಲಿ ನಗರ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ತಿಲಕ್‍ಪಾರ್ಕ್ ಸಿಪಿಐ ಪುರುಷೋತ್ತಮ್ ನೇತೃತ್ವದಲ್ಲಿ ಜಯನಗರ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎನ್. ಮಹಾಲಕ್ಷ್ಮಮ್ಮ, ಪಿಎಸ್‍ಐ-2 ಹನುಮಂತರಾಯಪ್ಪ ಮತ್ತು ಸಿಬ್ಬಂದಿಗಳಾದ ಸುರೇಶ್ ಖಾಲಿ ನಿವೇಶನಕ್ಕೆ ಭೇಟಿ ನೀಡಿ ಅಲ್ಲಿ ಬೆಳೆದಿದ್ದ ಗಾಂಜಾ ಗಿಡ ಕಟಾವು ಮಾಡಿಸಿ ವಶಕ್ಕೆ ಪಡೆದಿದ್ದಾರೆ.

ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ಸ್ಥಳೀಯ ಹುಡುಗರು ಕಿತ್ತುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿರುವ ಸ್ಥಳೀಯ ನಾಗರಿಕರು ಗಮನಿಸಿ ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಾಂಜಾ ಗಿಡ ಬೆಳೆದಿದ್ದ ಖಾಲಿ ನಿವೇಶನದ ಮಾಲಕನ ಪತ್ತೆಗಾಗಿ ಜಯನಗರ ಪೊಲೀಸರು ಶೋಧನಾ ಕಾರ್ಯ ಕೈಗೊಂಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News