ಭ್ರೂಣ ಹತ್ಯೆ ತಡೆಗೆ ವಿಶೇಷ ನೀತಿಯನ್ನು ರೂಪಿಸಲಾಗುವುದು: ಸಚಿವ ದಿನೇಶ್ ಗುಂಡೂರಾವ್

Update: 2023-12-14 12:44 GMT

ಬೆಳಗಾವಿ: ಭ್ರೂಣ ಹತ್ಯೆಯನ್ನು ತಡೆಗಟ್ಟಲು ಈಗಿರುವ ಕಾನೂನು ಬದಲಾವಣೆ ಮಾಡಿ, ಭಾರತೀಯ ದಂಡ ಸಂಹಿತೆ(ಐಪಿಸಿ)ಗೆ ತಿದ್ದುಪಡಿ ತಂದು, ವಿಶೇಷ ಮತ್ತು ಸಮಗ್ರವಾದ ಹೊಸ ನೀತಿಯನ್ನು ರೂಪಿಸಲಾಗುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಗುರುವಾರ ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಶರತ್ ಬಚ್ಚೇಗೌಡ ಪ್ರಸ್ತಾಪಿಸಿದ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿ ಹಳ್ಳಿಯಲ್ಲಿನ ಎಸ್‍ಪಿಜಿ ಆಸ್ಪತ್ರೆಯಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣದ ಕುರಿತ ಚರ್ಚೆಗೆ ಅವರು ಉತ್ತರಿಸಿದರು.

ಆರೋಗ್ಯ ಇಲಾಖೆಯು 1994ರಲ್ಲಿ ರೂಪಿಸಿದ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯನ್ವಯ ಲಿಂಗ ಪತ್ತೆಯನ್ನು ನಿಷೇಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. 2002 ರಿಂದ 2023ರ ಆರೋಗ್ಯ ಇಲಾಖೆಯು ಈ ಕುರಿತ ವರದಿಯನ್ನು ನೋಡಿದಾಗ ಕೇವಲ 100 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 1000ಕ್ಕೆ 947 ಇದ್ದ ಲಿಂಗಾನುಪಾತ ಪ್ರಸಕ್ತ ವರ್ಷ 929ಕ್ಕೆ ಇಳಿದಿದೆ. ಈ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸುವ ಮತ್ತು ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುವವರನ್ನು ಕಠಿಣವಾಗಿ ಶಿಕ್ಷಿಸುವ ಕ್ರಮವಾಗಬೇಕು ಎಂದು ಅವರು ಹೇಳಿದರು.

ಭ್ರೂಣಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಈ ಕುರಿತು ಸಿ.ಐ.ಡಿ. ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ವರದಿಯನ್ನು ಪಡೆಯಲು ಸರಕಾರ ಕ್ರಮವಹಿಸಲಿದೆ. ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಲಿಂಗ ಪತ್ತೆ ಮತ್ತು ಭ್ರೂಣಹತ್ಯೆಯಂತಹ ಅಪರಾಧ ಮಾಡುವವರ ಮೇಲೆ ಮತ್ತು ಮಾಡಿಸುವವರ ಮೇಲೂ ಸೂಕ್ತ ಕ್ರಮವಾಗಬೇಕು. ಈ ಕುರಿತು ವಿಶೇಷ ನೀತಿ ರೂಪಿಸುವ ಕಾನೂನನ್ನು ರಚಿಸಲಾಗುವುದು. ಮತ್ತು ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಆರೋಗ್ಯ ಇಲಾಖೆ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಅವರು ಹೇಳಿದರು.

ವಿಶೇಷ ಕಾರ್ಯಪಡೆಯನ್ನು ರಚಿಸಿ ನಿರಂತರ ನಿಗಾ ವಹಿಸಲಿದೆ. ರಾಜ್ಯಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಿದೆ. ಮತ್ತು ಉಪ ವಿಭಾಗ ಮಟ್ಟದಲ್ಲಿ ತಪಾಸಣಾ ಸಮಿತಿಗಳನ್ನು ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳ ಪರಿಶೀಲನೆ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಜಾರಿಗೆ ನಿರಂತರ ನಿಗಾ ವಹಿಸಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಡ್ಯ, ಮೈಸೂರು, ಬೆಂಗಳೂರು ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿ ಕ್ರಮವಹಿಸಲಾಗಿದೆ ಮತ್ತು ನಿನ್ನೆ ಸಂಜೆ ಹೊಸಕೋಟೆಯಲ್ಲಿ ವರದಿಯಾಗಿರುವ ಭ್ರೂಣಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಆಸ್ಪತ್ರೆಯನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ಅಧಿವೇಶನದಲ್ಲಿ ಮಂಡನೆ: ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಭ್ರೂಣಹತ್ಯೆ ಮಹಾಪಾಪ. ಈ ಕೃತ್ಯವನ್ನು ತಡೆಗಟ್ಟಲು ಸರಕಾರವು ಕಾನೂನು ರೂಪಿಸಲಿದ್ದು, ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News