"ಸಿದ್ದರಾಮಯ್ಯ ಕಾಲಿನ ಧೂಳಿಗೂ ಅನಂತಕುಮಾರ್ ಹೆಗಡೆ ಸಮವಲ್ಲ": ಸಚಿವ ಶಿವರಾಜ್‌ ತಂಗಡಗಿ

Update: 2024-01-14 14:38 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲೇ ಕರೆದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ  ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್‌ ತಂಗಡಗಿ, "ಸಿದ್ದರಾಮಯ್ಯ ಕಾಲಿನ ಧೂಳಿಗೂ ಅನಂತಕುಮಾರ್  ಸಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದರೆ ಅಲ್ಲಿಗೆ ಬಂದು ಉತ್ತರ ನೀಡುತ್ತೇನೆ ಮಗನೆ, ಇದು ಕೊನೆಯ ಎಚ್ಚರಿಕೆ. ಸಿದ್ದರಾಮಯ್ಯ ಕಾಲಿನ ಧೂಳಿಗೂ ಅನಂತಕುಮಾರ್ ಹೆಗಡೆ ಸಮವಲ್ಲ. ಇಂತಹ ನಾಯಿಗಳಿಗೆ ನಾವು ಯಾವಾಗ ಬೇಕಾದರೂ ಬುದ್ಧಿ ಕಲಿಸುತ್ತೇವೆ. ಆದರೆ ನಾವು ಕೆಳಮಟ್ಟಕ್ಕೆ ಇಳಿದು ಮಾತಾಡಬಾರದೆಂದು ಸುಮ್ಮನಿದ್ದೇವೆ’ ಎಂದು ವಾಗ್ದಾಳಿ ನಡೆಸಿದರು.

ಕುಲವಂ ಪೇಳ್ವುದು ನಾಲ್ಗೆ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಕ್ಸ್‌ ಪೋಸ್ಟ್‌ ನಲ್ಲಿ ‘ಕುಲವಂ ಪೇಳ್ವುದು ನಾಲ್ಗೆ’ ಎಂಬ ಮಾತಿನಂತೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂಸ್ಕಾರ ಏನು ಎಂಬುದನ್ನು ಅವರ ಮಾತು ಪ್ರತಿಬಿಂಬಿಸುತ್ತಿದೆ. ಅಷ್ಟೇ ಅಲ್ಲದೆ, ಅವರಿಗೆ ಸಂಸದರಲ್ಲ, ಯಾವುದೇ ಚುನಾಯಿತ ಪ್ರತಿನಿಧಿಯಾಗುವ ಯೋಗ್ಯತೆಯೂ ಇಲ್ಲ ಎಂದು ಹೇಳಿದ್ದಾರೆ.

‘ಬಿಜೆಪಿ, ಆರೆಸ್ಸೆಸ್ ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ ಬಹಿರಂಗವಾಗಿದೆ. ನಿಮ್ಮ ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂಬ ದಾಸರವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ಅನಂತಕುಮಾರ್ ಹೆಗಡೆ ಬಂದು ನಿಂತಿರುವುದು ದುರಂತ’ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

‘ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು’ ಎಂಬಂತೆ ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ 6.50 ಕೋಟಿ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅವಮಾನವಾಗುತ್ತದೆ. ನೀವು ಆಡಿರುವ ಮಾತು, ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಈಗ ಇಂತಹ ಮಾತು. ನಿಮಗಿದು ಶೋಭೆ ತರುವುದಿಲ್ಲ. ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರೂ ಮಾನ ಆಚಾರ-ವಿಚಾರ ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ನೀವು ನಾಡಿನ ಜನರ ಬಳಿ ಕ್ಷಮೆ ಕೇಳಬೇಕು’ ಎಂದು  ತಿಳಿಸಿದ್ದಾರೆ.

ನಾಲಗೆ ಹಿಡಿತದಲ್ಲಿರಲಿ

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ‘ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಗೆ ನಾಲಗೆ ಹಿಡಿತದಲ್ಲಿರಲಿ. ನೀವು ಒಂದು ಮಾತಾಡಿದರೆ ನಾವು ನಾಲ್ಕು ಮಾತಾಡುತ್ತೇವೆ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅನ್ನೋದು ಗೊತ್ತಾಗಿದೆ. ಇವರ ಬಾಯಿ ಚಪಲದಿಂದ ಹಿಂದೆ ಮಂತ್ರಿಗಿರಿ ಕಳೆದುಕೊಂಡರು. ಬಾಯಿಗೆ ಬಂದಂತೆ ಮಾತಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ?. ಮನ್ ಕಿ ಬಾತ್ ಜೊತೆಗೆ ಕಾಮ್ ಕಿ ಬಾತ್ ಮಾತಾಡೋಣ ಬನ್ನಿ’ ಎಂದು ಸವಾಲು ಹಾಕಿದರು.

‘ಅನಂತಕುಮಾರ್ ಹೆಗಡೆ ಹೇಳಿಕೆ ಪ್ರಚೋದನೆಯಿಂದ ಏನಾದರು ಹೆಚ್ಚು ಕಡಿಮೆ ಆದರೆ ಹೆಗಡೆ ಬರುತ್ತಾರಾ? ನಮ್ಮ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಒಳಗೆ ಹಾಕಬೇಕು ಎಂದು ಒತ್ತಾಯಿಸಿದ ಅವರು, ನಾವೂ ಹಿಂದೂ ಧರ್ಮದವರೇ. ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ. ಹೆಗಡೆಯವರೇ ನಮ್ಮ ಎದೆ ಬಗೆದರೆ ರಾಮನೂ ಕಾಣುತ್ತಾನೆ. ಸಿದ್ದರಾಮಯ್ಯನೂ ಕಾಣುತ್ತಾರೆ, ಡಾ.ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳು ಸಹ ಕಾಣುತ್ತಾರೆ’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News