ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2024-09-21 18:12 GMT

ಬೆಂಗಳೂರು: NCRT ಪ್ರಕಾರ ದಲಿತರ ಮೇಲಿನ ದೌರ್ಜನ್ಯ 13.1ರಷ್ಟು ಹೆಚ್ಚಾಗಿವೆ ಹಾಗೂ ದಿನಕ್ಕೆ ಹತ್ತು ಜನ ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಈ ದೌರ್ಜನ್ಯ ಪ್ರಮಾಣ ಕಡಿಮೆಯಾಗಬೇಕಿತ್ತು, ಆದರೆ ಹೆಚ್ಚಾಗುತ್ತಿವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಕೌದಿ ಪ್ರಕಾಶನ ಮತ್ತು ತಮಟೆ ಮೀಡಿಯಾದ ಸಹಯೋಗದೊಂದಿಗೆ ಆಯೋಜಿಸಿದ್ದ ಕವಿ ಸುಬ್ಬು ಹೊಲೆಯಾರ್‍ರ ‘ದುಃಖ ಆರದ ನೆಲದಲ್ಲಿ’ ಲೇಖನಗಳ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿಗಷ್ಟೆ ಕೊಪ್ಪಳದಲ್ಲಿ ದಲಿತ ಹುಡುಗನನ್ನು ಹತ್ಯೆ ಮಾಡಲಾಗಿದೆ. ಬೌದ್ಧಿಕ ದಬ್ಬಾಳಿಕೆಯ ಜತೆಗೆ ದೈಹಿಕ ದಬ್ಬಾಳಿಕೆಯನ್ನೂ ನೋಡಿರುವ, ನೋಡುತ್ತಿರುವ ಸಮಾಜ ನಮ್ಮದು ಎಂದು ಹೇಳಿದರು.

ಹಿಂಸಾತ್ಮಕ ಭಾಷೆಗಳ ಬಳಕೆ ಹಾಗೂ ಭಾಷಿಕ ಭ್ರಷ್ಟಾಚಾರದ ಸಂದರ್ಭದಲ್ಲಿ ನಾವು ಇದ್ದೇವೆ. ನಿಜವಾದ ಕವಿ ಮನಸ್ಸು ಜನರನ್ನು ಕೂಡಿಸುವ ಕೆಲಸ ಮಾಡುತ್ತದೆ. ಸುಬ್ಬು ಹೊಲೆಯಾರ್ ಬರಹದ ಮೂಲಕ ಜನರನ್ನು ಕೂಡಿಸುತ್ತಿದ್ದಾರೆ. ಶತಮಾನಗಳಿಂದ ನಾವು ‘ದುಃಖ ಆರದ ನೆಲದಲ್ಲಿ’ ಇದ್ದೇವೆ. ಶೋಷಣೆಯ ಶ್ರೇಣೀಕರಣ ಮೇಲ್ಜಾತಿಗಳಲ್ಲಿ ಮಾತ್ರವಲ್ಲದೇ ಶೂದ್ರರಲ್ಲಿಯೂ ಇದೆ. ಸುಬ್ಬು ಹೊಲೆಯಾರ್ ತಮ್ಮ ಅನುಭವದ ಮೂಲಕ ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ. ಅವರು ಎಲ್ಲಿಯೂ ಆಕ್ರಮಣಶೀಲವಾಗಿ ಮಾತನಾಡುವುದು ಕಾಣುವುದಿಲ್ಲ. ಈ ‘ದುಃಖ ಆರದ ನೆಲದಲ್ಲಿ’ ಕೃತಿಯಲ್ಲಿ ಕರುಳು ಕಟ್ಟಿದ ಬರಹಗಳು ಇವೆ ಎಂದು ಅಭಿಪ್ರಾಯಪಟ್ಟರು.

ಸಿಎಂ ಆಪ್ತಕಾರ್ಯದರ್ಶಿ ಡಾ.ನೆಲ್ಲುಕುಂಟೆ ವೆಂಕಟೇಶ್ ಮಾತನಾಡಿ, ‘ಸುಬ್ಬು ಹೊಲೆಯಾರ್ ಅವರ ದುಃಖ ಆರದ ನೆಲದಲ್ಲಿ ಕೃತಿಯು 50 ವರ್ಷಗಳ ಚರಿತ್ರೆಯ ದಾಖಲೆಯಾಗಿದೆ. ಶೂದ್ರ, ಒಬಿಸಿ ಬರಹಗಾರರಿಗೆ ಇಲ್ಲದಂತ ಶಕ್ತಿ ದಲಿತ ಬರಹಗಾರರಿಗೆ ಸಿಕ್ಕಿದೆ. ಶೂದ್ರ, ಒಬಿಸಿ ಸಮುದಾಯಗಳು ನೆಲದ ಅಹಂಕಾರದಿಂದ ಹೊರಗೆ ಬರದಿದ್ಧರೇ ದೇಶ ಯಾರದೋ ಕೈಯಲ್ಲಿ ಹೋಗುತ್ತದೆ. ಇಡೀ ಪುಸ್ತಕದ ಉದ್ದಗಕ್ಕೂ ಬುದ್ಧ ಮತ್ತು ಡಾ.ಅಂಬೇಡ್ಕರ್ ಅವರ ಛಾಯೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರ ಎನ್.ವೆಂಕಟೇಶ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರತಿನಿಧಿ ಡಾ.ಕೆ.ಪಿ.ಅಶ್ವಿನಿ, ಲೇಖಕ ಸುಬ್ಬು ಹೊಲೆಯಾರ್, ಹೋರಾಟಗಾರ ಹುಲಿಕುಂಟೆ ಮೂರ್ತಿ, ಮುರುಳಿ ಮೋಹನ್ ಕಾಟಿ, ಅಶ್ವಿನಿ ಬೋಧ್, ಚಂದ್ರು ಮತ್ತಿತರರು ಹಾಜರಿದ್ದರು.

‘ತಾಳ್ಮೆಯ ಕಾರಣದಿಂದ ಈ ಬರಹಗಳು ಬಹಳ ಮುಖ್ಯವಾಗುತ್ತವೆ. ಎಲ್ಲ ಲೇಖನಗಳಲ್ಲಿ ನೋವಿದೆ. ನೋವುಗಳನ್ನೂ ಹೂವುಗಳನ್ನಾಗಿ ಮಾಡುವ ವಿಸ್ಮಯವನ್ನು ಸುಬ್ಬು ಹೊಲೆಯಾರ್ ಬರಹದಲ್ಲಿ ಕಾಣುತ್ತೇವೆ. ಅವರ ಪ್ರತಿರೋಧ ಕೂಡ ವಿಸ್ಮಯವಾಗಿದೆ. ಸ್ವಂತ ಅನುಭವದ ಮುಖಾಂತರವೇ ದಲಿತರ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ. ಮುಟ್ಪಿಸಿಕೊಳ್ಳದಿದ್ದವರ ಮನಸ್ಸನ್ನೇ ಮುಟ್ಟುವ ಬರಹವನ್ನು ಸುಬ್ಬು ಹೊಲೆಯಾರ್ ಬರೆದಿದ್ದಾರೆ. ಆತ್ಮಕಥನದ ಆಕಾಶದ ಜೊತೆಗೆ ದಲಿತ ಹೋರಾಟದ ಕಥನವನ್ನು ಕಟ್ಪಿಕೊಟ್ಟಿದ್ದಾರೆ. ಭಾವ ಕೋಶದಿಂದ ಒಳಗೊಳ್ಳುವಿಕೆಯ ವೈಚಾರಿಕತೆಯನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು’

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News