ಬೆಳಗಾವಿ: ಬಾಮೈದನಿಂದಲೇ ನಿವೃತ್ತ ಯೋಧನ ಹತ್ಯೆ

Update: 2023-09-02 17:13 GMT

ಈರನಗೌಡ ಟೋಪಗೋಳ- ಮೃತ ನಿವೃತ್ತ ಯೋಧ 

ಚಿಕ್ಕೋಡಿ (ಬೆಳಗಾವಿ): ನಿವೃತ್ತ ಯೋಧನನ್ನು ಬಾಮೈದನೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ವರದಿಯಾಗಿದೆ.

ಮೃತರನ್ನು ಚಿಕ್ಕೋಡಿಯ ವಿದ್ಯಾನಗರ ನಿವಾಸಿ ನಿವೃತ್ತ ಯೋಧ ಈರನಗೌಡ ಟೋಪಗೋಳ(45) ಎಂದು ಗುರುತಿಸಲಾಗಿದೆ. ಮೃತ ಈರಗೌಡ ಪತ್ನಿಯ ಸಹೋದರ ಸಂಜಯ್ ಕೊಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರನಗೌಡ ಟೋಪಗೋಳ ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಕಲ್ಲು ಕ್ರಷರ್  ನಡೆಸುತ್ತಿದ್ದರು ಎನ್ನಲಾಗಿದೆ.

ಶನಿವಾರ ಸಂಜೆ ಈರನಗೌಡನ ಅವರನ್ನು ಭೇಟಿ ಮಾಡುವ ನೆಪದಲ್ಲಿ ಸಂಜಯ್ ಮನೆಗೆ ಬಂದಿದ್ದರು. ಅವರ ಅಕ್ಕ, ಈರನಗೌಡ ಅವರ ಪತ್ನಿ ಕೂಡ ಮನೆಯಲ್ಲಿದ್ದರು.‌ ಈ ವೇಳೆ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ ಸಂಜಯ್ ಈರನಗೌಡ ಅವರ ಕತ್ತು ಸೀಳಿದ್ದಾರೆ. ತೀವ್ರ ರಕ್ತಸ್ರಾವವಾದ ಈರನಗೌಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಹೇಳಲಾಗಿದೆ. 

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಸಂಜಯ್ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News